“ಕಾರ್ಮಿಕರು ದಶಕಗಳ ಕಾಲ ಹೋರಾಟ ನಡೆಸಿ ಗಳಿಸಿಕೊಂಡ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳು (Labour Codes) ದೇಶದ ಕಾರ್ಮಿಕ ವರ್ಗದ ಮೇಲೆ ನಡೆಸುತ್ತಿರುವ ಅತ್ಯಂತ ಗಂಭೀರ ದಾಳಿ” ಎಂದು ಆಲ್ ಇಂಡಿಯಾ ಯುನೈಟೆಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಉಪಾಧ್ಯಕ್ಷ ಎನ್.ಎಸ್. ವೀರೇಶ್ ತೀವ್ರವಾಗಿ ಖಂಡಿಸಿದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ವತಿಯಿಂದ ದಾವಣಗೆರೆಯಲ್ಲಿ ಇಂದು ಆಯೋಜಿಸಲಾಗಿದ್ದ 4 ಕಾರ್ಮಿಕ ಸಂಹಿತೆ (ಲೇಬರ್ ಕೋಡ್)ಗಳ ವಿರುದ್ಧದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು “ಈ 4 ಲೇಬರ್ ಕೋಡ್ಗಳು ಕಾರ್ಮಿಕರು ದಶಕಗಳ ಹೋರಾಟದ ಮೂಲಕ ಗಳಿಸಿದ್ದ ಉದ್ಯೋಗ ಭದ್ರತೆ, ಸಂಘಟಿಸುವ ಹಕ್ಕು, ಮುಷ್ಕರ ಹಕ್ಕು, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಕೆಲಸದ ಸ್ಥಳದ ಸುರಕ್ಷತೆ ಹಾಗೂ ಗೌರವಯುತ ಜೀವನದ ಹಕ್ಕುಗಳನ್ನು ಹಂತ ಹಂತವಾಗಿ ಕಿತ್ತುಕೊಳ್ಳುವ ಉದ್ದೇಶದಿಂದಲೇ ರೂಪಿಸಲ್ಪಟ್ಟಿವೆ” ಎಂದು ಆತಂಕ ವ್ಯಕ್ತಪಡಿಸಿದರು.

“ನಾಲ್ಕು ಲೇಬರ್ ಕೋಡ್ಗಳ ಪ್ರಮುಖ ಕಾರ್ಮಿಕ ವಿರೋಧಿ ಅಂಶಗಳಿದ್ದು, ನಿಶ್ಚಿತ ಅವಧಿಯ ಉದ್ಯೋಗ (Fixed Term Employment) ವ್ಯವಸ್ಥೆಯ ಮೂಲಕ ಶಾಶ್ವತ ಉದ್ಯೋಗದ ಕಲ್ಪನೆಯನ್ನು ನಾಶ ಮಾಡಲಾಗಿದೆ. ಮುಷ್ಕರಕ್ಕೆ14 ದಿನಗಳ ನೋಟಿಸ್ ಕಡ್ಡಾಯಗೊಳಿಸಿ ಕಾರ್ಮಿಕರ ಹೋರಾಟದ ಹಕ್ಕನ್ನು ಕುಂಠಿತಗೊಳಿಸಲಾಗಿದೆ. 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಕೈಗಾರಿಕೆಗಳಿಗೆ ಸರ್ಕಾರದ ಅನುಮತಿ ಇಲ್ಲದೇ ವಜಾ ಹಾಗೂ ಕಾರ್ಖಾನೆ ಮುಚ್ಚುವ ಅವಕಾಶ ನೀಡಲಾಗಿದೆ. Standing Orders ಅನ್ವಯಿಸುವ ಮಿತಿಯನ್ನು 100ರಿಂದ 300ಕ್ಕೆ ಹೆಚ್ಚಿಸಿ, ದೇಶದ ಬಹುಸಂಖ್ಯಾತ ಕಾರ್ಮಿಕರನ್ನು ಕಾನೂನು ರಕ್ಷಣೆಯಿಂದ ಹೊರಗಿಡಲಾಗಿದೆ. ಕನಿಷ್ಠ ವೇತನದ ಬದಲು ‘ಫ್ಲೋರ್ ವೇಜ್’ ಎಂಬ ದುರ್ಬಲ ವ್ಯವಸ್ಥೆ ತಂದು ಕಾರ್ಮಿಕರ ಆದಾಯವನ್ನು ಕಡಿಮೆ ಮಾಡಲಾಗಿದೆ. ಗುತ್ತಿಗೆ, ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರನ್ನು ‘ಕಾರ್ಮಿಕ’ ಸ್ಥಾನಮಾನದಿಂದಲೇ ವಂಚಿಸಲಾಗಿದೆ. ಪರಿಶೀಲನಾ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಮಾಲೀಕರಿಗೆ ಕಾನೂನು ಉಲ್ಲಂಘನೆಗಳಿಂದ ತಪ್ಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ” ಎಂದು ಆರೋಪಿಸಿದರು.
“ಈ 4 ಲೇಬರ್ ಕೋಡ್ಗಳು ಕಾರ್ಮಿಕರಿಗಾಗಿ ಅಲ್ಲ, ಕಾರ್ಪೊರೇಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ರೂಪಿಸಲ್ಪಟ್ಟಿವೆ. ಇವು ಜಾರಿಯಾದರೆ ಕಾರ್ಮಿಕರ ಜೀವನ ಸಂಪೂರ್ಣ ಅಸ್ಥಿರತೆಗೆ ತಳ್ಳಲ್ಪಡುತ್ತದೆ. ಇದು ಸಂವಿಧಾನಾತ್ಮಕ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ” ಎಂದು ಎಚ್ಚರಿಸಿದರು.

“ಈ ಕಾರ್ಮಿಕ ವಿರೋಧಿ 4 ಲೇಬರ್ ಕೋಡ್ಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು, ಹಳೆಯ ಕಾರ್ಮಿಕ ಕಾನೂನುಗಳನ್ನು ಇನ್ನಷ್ಟು ಬಲಪಡಿಸಬೇಕು ಹಾಗೂ ಕಾರ್ಮಿಕ ಸ್ನೇಹಿ ನೀತಿಗಳನ್ನು ಜಾರಿಗೊಳಿಸಬೇಕು ಎನ್ನುವ ನಿಲುವಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಎಐಯುಟಿಯುಸಿ ಒತ್ತಾಯಿಸುತ್ತದೆ” ಎಂದು ತಿಳಿಸಿದರು.
“ಕಾರ್ಮಿಕ ವಿರೋಧಿ 4 ಲೇಬರ್ ಕೋಡ್ಗಳನ್ನು ಹಿಂತೆಗೆದುಕೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲದು. ದೇಶದ ಎಲ್ಲಾ ಕಾರ್ಮಿಕರು – ಶಾಶ್ವತ, ಗುತ್ತಿಗೆ, ಅಸಂಘಟಿತ ವಲಯ, ಗಿಗ್ ಹಾಗೂ ಪ್ಲಾಟ್ಫಾರ್ಮ್ ಕಾರ್ಮಿಕರು– ಒಗ್ಗಟ್ಟಾಗಿ, ಫೆಬ್ರವರಿ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು”
ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸೈದ್ಧಾಂತಿಕವಾಗಿ ಕಾರ್ಯಕರ್ತರಿಂದ ಶೋಷಿತರ ಸೇವೆ: ಸಿಪಿಐ ಸಮ್ಮೇಳನದಲ್ಲಿ ಆವರಗೆರೆ ಚಂದ್ರು
ಕಾರ್ಯಕ್ರಮದಲ್ಲಿ ಎಐಯುಟಿಯುಸಿ ಮುಖಂಡರಾದ ಮಂಜುನಾಥ್ ಕೈದಾಳ, ಮಂಜುನಾಥ್ ಕುಕ್ಕವಾಡ ಹಾಗೂ ಇತರ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.





