ಸರ್ವೋಚ್ಛ ನ್ಯಾಯಾಲಯದ ಸಂವಿಧಾನಿಕ ಪೀಠವು ಒಳ ಮೀಸಲಾತಿ ವರ್ಗೀಕರಣ ಹಾಗೂ ಜಾರಿಯ ಬಗ್ಗೆ ತೆಗೆದುಕೊಂಡ ಐತಿಹಾಸಿಕ ಆದೇಶದಕ್ಕೆ ಚ್ಯುತಿ ಬಾರದಂತೆ ರಾಜ್ಯ ಸರಕಾರ ನೋಡಿಕೊಳ್ಳಬೇಕು. ಹಾಗೂ ಅಲೆಮಾರಿಗಳಿಗೆ ಮೊದಲ ಆದ್ಯತೆಯಲ್ಲಿ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿಯ ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಅಲೆಮಾರಿ ಸಮುದಾಯಗಳ 59 ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಒಳಮೀಸಲಾತಿ ಹೋರಾಟ ಸಮಿತಿಯು ದಾವಣಗೆರೆ ನಗರದ ರೋಟರಿ ಬಾಲಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆಗ್ರಹಿಸಲಾಯಿತು.

ದಾವಣಗೆರೆ ನಗರದ ನಗರದ ರೋಟರಿ ಬಾಲಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರಾಜ್ಯಾಧ್ಯಕ್ಷ ವೀರೇಶ್ ಕೆ ವಿಭೂತಿ ಮಾತನಾಡಿ “ಒಳ ಮೀಸಲಾತಿ ಜಾರಿ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ನಿಗದಿಯಾಗಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ಸಪ್ತ ಸದಸ್ಯರ ಸಂವಿಧಾನಿಕ ಪೀಠವು 2024ರ ಆಗಸ್ಟ್ 01ರಂದು ಒಳ ಮೀಸಲಾತಿ ವರ್ಗೀಕರಣ ಹಾಗೂ ಜಾರಿಯ ಬಗ್ಗೆ ತೆಗೆದುಕೊಂಡ ಐತಿಹಾಸಿಕ ಆದೇಶಕ್ಕೆ ಚ್ಯುತಿ ಬಾರದಂತೆ ಸರ್ಕಾರ ನೋಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಒಳಮೀಸಲಾತಿಯ ಜಾರಿ ಮತ್ತು ವರ್ಗೀಕರಣಕ್ಕೆ ಸಂಬಂಧಿಸಿದಂತೆ ಔದ್ಯೋಗಿಕ, ವೈಜ್ಞಾನಿಕ ದತ್ತಾಂಶಗಳನ್ನು ಕ್ರೂಢೀಕರಣ ಮಾಡಿ ವರದಿ ನೀಡಲು ಸರ್ಕಾರವು ಸ್ಥಾಪಿಸಿದ ಏಕ ಸದಸ್ಯ ಆಯೋಗ ನ್ಯಾ.ನಾಗಮೋಹನ್ ಆಯೋಗದ ಶಿಫಾರಸ್ಸಿನಂತೆ ಹಾಗೂ ಈ ಹಿಂದಿನ ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ, ಕಾಂತರಾಜ್ ಆಯೋಗ ಹೀಗೆ ಎಲ್ಲಾ ಆಯೋಗಗಳ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ 49 ಅಲೆಮಾರಿ ಸಮುದಾಯಗಳು ಹಾಗು ಇತರೆ 10 ಸೂಕ್ಷ್ಮ ಸಮುದಾಯಗಳು ಒಟ್ಟಾರೆ 59 ಸಮುದಾಯಗಳಿಗೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕು” ಎಂದು ಆಗ್ರಹಿಸಿದರು.

“ಮಾ 27 ರಂದು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ಸುಪ್ರೀಂ ಕೋರ್ಟ್ ನ ಆದೇಶದ ಆಶಯದಂತೆ ಮೊದಲ ಆದ್ಯತೆಯ ವರ್ಗದಲ್ಲಿ 1% ಮೀಸಲಾತಿ ಕಲ್ಪಿಸಿ ಈ ಸಮುದಾಯಗಳು ಶಿಕ್ಷಣ, ಔದ್ಯೋಗಿಕ ಕ್ಷೇತ್ರದಲ್ಲಿ ಖಾತೆ ತೆರೆಯುವಂತೆ ಮಾಡಲು ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕು” ಎಂದು ಮನವಿ ಮಾಡಿದರು.
ಮಾ. 27 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಯನ್ನು ಮತ್ತೊಮ್ಮೆ ಸರ್ಕಾರಕ್ಕೆ ತಿಳಿಸಲು ಅಲೆಮಾರಿ ಸಮುದಾಯಗಳ ವೇಷಭೂಷಣದೊಂದಿಗೆ ಸುಮಾರು 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿರುವ ಅಲೆಮಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚುನಾವಣಾ ಆಯ್ಕೆ ಸಭೆಯಲ್ಲಿ ಅಹಿಂದಕ್ಕೆ ಪ್ರತಿಯಾಗಿ ‘ಐನೂರು ಸಾವಿರ’ ಘೋಷಣೆ: ಮುಸ್ಲಿಂರ ಆಕ್ರೋಶ
ಶಿಳ್ಳೆಖ್ಯಾತ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಿ ರಾಮಯ್ಯ , ಶ್ರೀ ಸಣ್ಣ ಅಜ್ಜಯ್ಯ ಸ್ವಾಮಿಜಿಗಳು, ಹಿರಿಯ ವಕೀಲರಾದ ಅನೀಶ್ ಪಾಷಾ, ತೀರ್ಥಪ್ಪ, ದಲಿತ ಮುಖಂಡ ಆಲೂರು ಲಿಂಗರಾಜ್, ಡಿಎಸ್ಎಸ್ ಹರಿಹರ ತಾಲೂಕು ಅಧ್ಯಕ್ಷ ಮಹಾಂತೇಶ್, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ನಿಂಗಪ್ಪ, ರಾಜ್ಯ ಚನ್ನದಾಸರ ಯುವ ಘಟಕದ ಪ್ರ.ಕಾರ್ಯದರ್ಶಿ ಎಲ್ಲಪ್ಪ ಜವಳಗೇರಾ, ಹಾಗೂ ಎಲ್ಲಪ್ಪ ನವಲಕಲ್, ದಶರಥ, ಬಸವರಾಜ, ಬೈರಪ್ಪ, ರಂಗಪ್ಪ, ಸುಡುಗಾಡು ಸಿದ್ದ ಸಮುದಾಯದ ಎಂ. ಎಸ್ ಮಂಜುನಾಥ್ ಗುಂಡಪಲ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





