ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು “ಶಕ್ತಿ ಸದನ ಶುಭೋಧಯ ಸ್ವಾಧಾರ ಗೃಹ” ರವರ ಸಂಯುಕ್ತ ಆಶ್ರಯದಲ್ಲಿ “ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉಚಿತ ಊಟ, ಬಟ್ಟೆ, ಆಶ್ರಯ ನೀಡುವ ಸರ್ಕಾರದ ಯೋಜನೆಯ” ಪ್ರಚಾರಕ್ಕೆ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಚಾಲನೆಯನ್ನು ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ತಯಾರಿಸಲಾದ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಮಹಾವೀರ ಮ. ಕರೆಣ್ಣವರ ಮಾತನಾಡಿ “18ರಿಂದ 55 ವರ್ಷದೊಳಗಿನ ನಿರಾಶ್ರಿತ/ನಿರ್ಗತಿಕ ಮಹಿಳೆಯರು ಮತ್ತು ಆರ್ಥಿಕ ಭದ್ರತೆ ಇಲ್ಲದ ಮಹಿಳೆಯರು, ಪ್ರಕೃತಿ ವಿಕೋಪಕ್ಕೆ ಒಳಗಾಗಿ ಮನೆ, ಆಶ್ರಯ ಕಳೆದುಕೊಂಡು, ಜೈಲಿನಿಂದ ಬಿಡುಗಡೆ ಹೊಂದಿ ಸಾಮಾಜಿಕ ಮತ್ತು ಆರ್ಥಿಕ ಸಹಾಯ ಇಲ್ಲದೇ ಇರುವವರು, ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಟ್ಟವರು, ಕುಟುಂಬ/ಮನೆಯಿಂದ ಹೊರಹಾಕಲ್ಪಟ್ಟವರು, ಪತಿಯಿಂದ ಅಥವಾ ಬೇರೆ ಸದಸ್ಯರಿಂದ ದೌರ್ಜನ್ಯಕ್ಕೆ ಒಳಪಟ್ಟವರು, ವಿಧವೆಯರು, ವಿಚ್ಚೇದಿತ ಮಹಿಳೆಯರು, ಮನೆಯವರಿಂದ ನಿರ್ಲಕ್ಷಕ್ಕೆ ಒಳಪಟ್ಟ ಇತರೆ ಮಹಿಳೆಯರು ಹಾಗೂ ಸದರಿ ಮಹಿಳೆಯರಿಗೆ 12 ವರ್ಷದೊಳಗಿನ ಗಂಡುಮಕ್ಕಳು ಹಾಗೂ 18 ವರ್ಷದೊಳಗಿನ ಹೆಣ್ಣುಮಕ್ಕಳಿದ್ದರೆ ಅವರೂ ಕೂಡಾ ತಾಯಿಯೊಂದಿಗೆ ಸ್ವಾಧಾರ ಗೃಹದ ಆಶ್ರಯ ಪಡೆಯಬಹುದು” ಎಂದು ತಿಳಿಸಿದರು.
“ಸ್ವಧಾರ್ ಗೃಹ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಟ್ಟೆ, ಊಟ, ವೈದ್ಯಕೀಯ ಸೌಲಭ್ಯ, ಆಶ್ರಯ, ಆಪ್ತಸಮಾಲೋಚನೆ, ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಅಗತ್ಯ ಕಾನೂನು ಸಲಹೆ ಕೊಡಿಸುವುದು, ವೃತ್ತಿ ತರಬೇತಿಗಳಾದ ಟೈಲರಿಂಗ್ ಎಂಬ್ರಾಯಿಡರಿ ತರಬೇತಿ, ಅಗರಬತ್ತಿ ಮೇಕಿಂಗ್ ಇತ್ಯಾದಿ ಕೌಶಲ್ಯಾದಾರಿತ ಸ್ವಾವಲಂಬನೆಯ ತರಬೇತಿ ಮತ್ತು ಮಾರ್ಗದರ್ಶನ, ಆಪ್ತ ಸಮಾಲೋಚನೆ ಮೂಲಕ ನಿವಾಸಿಗಳನ್ನು ತಂದೆ/ತಾಯಿ/ಅಥವಾ ಪತಿಯೊಂದಿಗೆ ಸೇರಿಸುವುದು, ಮನರಂಜನೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುವುದು.
“ದಾವಣಗೆರೆ ನಗರದಲ್ಲಿ ಸರ್ಕಾರಿ ಬಾಲಕಿಯರ ಬಾಲ ಮಂದಿರ, ರಾಜ್ಯ ಮಹಿಳಾ ನಿಲಯ, ಸರ್ಕಾರಿ ಬಾಲಕರ ಬಾಲ ಮಂದಿರ, ತುರ್ಚಗಟ್ಟದ ನಿರಾಶ್ರಿತರ ಕೇಂದ್ರ, ಜಾಗೃತ ಮಹಿಳಾ ನಿಲಯ, ಮತ್ತು ಶುಭೋದಯ ಮಹಿಳಾ ನಿಲಯ ಮತ್ತು ಇನ್ನೂ ಕೆಲವು ಸರ್ಕಾರಿ ಅನುದಾನಿತ ಸಂಸ್ಥೆಗಳು ಕರ್ತವ್ಯ ನಿರ್ವಹಿಸುತ್ತಿವೆ. ಇಲ್ಲಿ ಬರುವ ಎಲ್ಲಾ ನಿರಾಶ್ರಿತರಿಗೆ ಮತ್ತು ಬಾಧಿತರಿಗೆ ಮತ್ತು ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಇದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಸರ್ಕಾರದಿಂದಲೇ ಪಾವತಿಸಲಾಗುತ್ತದೆ ಯಾರೊಬ್ಬರೂ ಕೂಡ ಹಣ ಪಾವತಿಸುವ ಅಗತ್ಯವಿಲ್ಲ” ಎಂದು ತಿಳಿಸಿದರು.
“ಉಚಿತ ಸಹಾಯವಾಣಿಗಳಾದ 181 ಅಥವಾ ಕಾನೂನು ಸೇವೆಗಳ ಪ್ರಾಧಿಕಾರದ ಟೋಲ್ ಫ್ರೀ ಸಂಖ್ಯೆ 15100 ಅಥವಾ ಪೊಲೀಸ್ ಸಹಾಯವಾಣಿ 112 ಗೆಮಹಿಳೆಯರಿಗೆ ಯಾವುದೇ ತೊಂದರೆಗಳಾದಲ್ಲಿ ಕರೆ ಮಾಡಬಹುದು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶಿಕ್ಷಣ ಇಲಾಖೆ ಕಚೇರಿಯಲ್ಲಿ ‘ಎಣ್ಣೆ ಪಾರ್ಟಿ’; ಐವರು ಅಮಾನತುಚಿತ್ರದುರ್ಗ | ಶಿಕ್ಷಣ ಇಲಾಖೆ ಕಚೇರಿಯಲ್ಲಿ ‘ಎಣ್ಣೆ ಪಾರ್ಟಿ’; ಐವರು ಅಮಾನತು
ಭಿತ್ತಿ ಪತ್ರ ಅನಾವರಣ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು, “ಶಕ್ತಿ ಸದನ ಶುಭೋದಯ ಸ್ವಾಧಾರ ಗ್ರಹ”, ಸ್ವಾಧಾರ ಗೃಹಗಳ ಮೇಲ್ವಿಚಾರಕಿಯರ, ಇತರೆ ವಕೀಲರೂ ಕೂಡ ಹಾಜರಿದ್ದರು.





