ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಲೋಕಿಕೆರೆ ರಸ್ತೆಯಲ್ಲಿನ ರವೀಂದ್ರನಾಥ್ ನಗರದ 38 ಮನೆಗಳನ್ನು ತೆರವುಗೊಳಿಸಿದ ನಿರಾಶ್ರಿತರಿಗೆ ಸರ್ಕಾರ ಈಗಾಗಲೇ ಗೊತ್ತುಪಡಿಸಿರುವ ಜಾಗದಲ್ಲಿ 38 ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ತಗಡಿನ ಸೀಟು, ಕಬ್ಬಿಣ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ನೀರು ಮತ್ತು ವಿದ್ಯುತ್ ಒದಗಿಸಬೇಕೆಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪ್ರಗತಿಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡರು “ಶಿರಮಗೊಂಡನಹಳ್ಳಿ ವ್ಯಾಪ್ತಿಯ ರವೀಂದ್ರನಾಥ್ ನಗರದ ಪಾರ್ಕ್ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ ಎಂದು ತೆರವುಗೊಳಿಸಿದ 38 ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ, ಬೇರೆ ಬೇರೆ ಕಡೆ ಅನಾಥವಾಗಿ ಉಳಿದಿದ್ದಾರೆ. ಅವರಿಗೆ ಬೂದಾಳ್ ರಸ್ತೆಯ ಬಳಿಯಲ್ಲಿ ಜಾಗ ಕೊಟ್ಟಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ತೆರವು ಕಾರ್ಯಾಚರಣೆ ನಡೆಸಿದ್ದ ವೇಳೆ ಮನೆಯ ಇಟ್ಟಿಗೆ, ಹೆಂಚು, ತಗಡಿನ ಶೀಟುಗಳನ್ನು ನಾಶಪಡಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈಗ ಪಾಲಿಕೆ ಸೂಚಿಸಿರುವ ಜಾಗದಲ್ಲಿ ಸೂರು ಕಟ್ಟಿಕೊಳ್ಳಲು ಮಾನಸಿಕವಾಗಿ ನೊಂದಿದ್ದ ಅವರು, ಆರ್ಥಿಕವಾಗಿ ಕುಸಿದುಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ನಗರಪಾಲಿಕೆ 38 ಕುಟುಂಬಗಳಿಗೆ ಶೀಟ್, ಕಬ್ಬಿಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೋಮಾಳ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ, ಸ್ಥಳೀಯ ಆಡಳಿತದ ದೌರ್ಜನ್ಯ ಆರೋಪ
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ದಸಂಸ ಮುಖಂಡ ಮಂಜುನಾಥ್, ಸಿಪಿಐ ಮುಖಂಡರುಗಳಾದ ಆವರಗರೆ ಚಂದ್ರು, ಎ ತಿಪ್ಪೇಶ್, ಸರೋಜಾ, ಜಬೀನ ಖಾನಂ, ಕರಿಬಸಪ್ಪ, ಆಪ್ ಮುಖಂಡ ಆದಿಲ್ ಖಾನ್, ಶಿಡ್ಲಪ್ಪ ಸೇರಿದಂತೆ ಇತರರು ಹಾಜರಿದ್ದರು.





