ಸರ್ಕಾರಿ ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣ (PPP) ಸಂಪೂರ್ಣವಾಗಿ ಕೈಬಿಡಬೇಕು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಔಷಧ ಲಭ್ಯವಾಗಬೇಕು ಮತ್ತು ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ, ದಾವಣಗೆರೆಯಲ್ಲಿ ಡ್ರಗ್ ಆಕ್ಷನ್ ಫೋರಂ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಹಾಗೂ ಜನಪರ ಸಂಘಟನೆಗಳ ಒಕ್ಕೂಟದಿಂದ “ಆರೋಗ್ಯ ಹಕ್ಕಿನ ಜಾಥಾ 2026” ನಡೆಸಲಾಯಿತು.
ಆರೋಗ್ಯ ಹಕ್ಕಿನ ಜಾಥಾ ಹಾಗೂ ಪ್ರತಿಭಟನಾ ರ್ಯಾಲಿಯು ಭಾಷನಗರದ 15 ನೇ ಕ್ರಾಸ್ ನಿಂದ ಪ್ರಾರಂಭವಾಗಿ ದಾವಣಗೆರೆ ಮಂಡಿಪೇಟೆಯ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆವರೆಗೆ ಜಾಥಾ ನಡೆಸಿ ದಾವಣಗೆರೆ ವೈದ್ಯಕಿಯ ಅಧೀಕ್ಷಕರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಮುಖಂಡರಾದ ಜಬೀನಾ ಖಾನಂ “ತುಮಕೂರು, ವಿಜಯಪುರ, ಕೋಲಾರ, ವಿಜಯನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರ ಜನವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿದೆ” ಎಂದು ಆರೋಪಿಸಿದರು.
“ವಿಜಯಪುರದಲ್ಲಿ ಖಾಸಗೀಕರಣ ಕೈಬಿಡುವ ಭರವಸೆ ನೀಡಿರುವುದು ಸ್ವಾಗತಾರ್ಹ, ಅದೇ ರೀತಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಖಾಸಗೀಕರಣ ಕೈಬಿಡಬೇಕು ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಬಜೆಟ್ನಲ್ಲಿ ಅಗತ್ಯ ಅನುದಾನ ನೀಡಬೇಕು” ಎಂದು ಒತ್ತಾಯಿಸಿದರು.

ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ರೈತಪರ ಹೋರಾಟಗಾರ, ಕಬ್ಬು ಬೆಳೆಗಾರರ ಸಂಘದ ನಿರ್ದೇಶಕ ತೇಜಸ್ವಿ ಪಟೇಲ್ “ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯ ಕೊರತೆಯಿದೆ. ಚಿಕಿತ್ಸೆ ವೆಚ್ಚದ 60–70 ಶೇಕಡಾ ಔಷಧಗಳಿಗೇ ಖರ್ಚಾಗುತ್ತಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಔಷಧಗಳನ್ನು ಒದಗಿಸಬೇಕು, ವೈದ್ಯರು ಹೊರಗಡೆ ಔಷಧ ಖರೀದಿಗೆ ಚೀಟಿ ಬರೆಯುವುದನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ಆವರಗೆರೆ ಚಂದ್ರು ಮಾತನಾಡಿ “ಕರ್ನಾಟಕ ರಾಜ್ಯ ವೈದ್ಯಕೀಯ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಖಾಸಗಿ ಆಸ್ಪತ್ರೆ, ಔಷಧ ಅಂಗಡಿಗಳ ಸುಲಿಗೆಗೆ ಕಾರಣ. ಖಾಸಗಿ ಆಸ್ಪತ್ರೆಗಳ ಅತಿಯಾದ ಶುಲ್ಕಗಳಿಂದ ಜನ ಶೋಷಣೆಗೆ ಒಳಗಾಗುತ್ತಿದ್ದು, ಇದು ಸಂವಿಧಾನದ ಆರೋಗ್ಯ ಹಕ್ಕಿನ ಉಲ್ಲಂಘನೆ. ಖಾಸಗಿ ಆಸ್ಪತ್ರೆ ಶುಲ್ಕಗಳಿಗೆ ಮಿತಿ ವಿಧಿಸುವಂತೆ ಹಾಗೂ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.

ಡ್ರಗ್ಸ್ ಆಕ್ಷನ್ ಫೋರಂ ಮುಖಂಡರು ಮಾತನಾಡಿ “2024ರ ಡಿಸೆಂಬರ್ನಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳಪೆ ಔಷಧಗಳಿಂದ ತಾಯಂದಿರ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ, 2025ರ ಫೆಬ್ರವರಿಯಲ್ಲಿ 15 ಜಿಲ್ಲೆಗಳಲ್ಲಿ ಆರೋಗ್ಯ ಹಕ್ಕಿನ ಜಾಥಾ ಹಮ್ಮಿಕೊಳ್ಳಲಾಗಿತ್ತು. ಆಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾದರೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಬರದ ಕಾರಣ, ಈ ವರ್ಷ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಾಥಾ ಆಯೋಜಿಸಲಾಗಿದೆ” ಎಂದು ಸಂಘಟಕರು ತಿಳಿಸಿದರು.
ಜಾಥಾದಲ್ಲಿ ಸ್ಥಳೀಯ ಬೇಡಿಕೆಗಳಾದ ಭಾಷಾನಗರ ಪ್ರಸೂತಿ ಆರೋಗ್ಯ ಕೇಂದ್ರಕ್ಕೆ ತಕ್ಷಣ ಮಹಿಳಾ ಪ್ರಸೂತಿ ತಜ್ಞರನ್ನು ನೇಮಿಸಬೇಕು, ದಾವಣಗೆರೆ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನವರಿ 2026ರಿಂದ ಜನರ ಮೇಲೆ ಹೇರುತ್ತಿರುವ ಸಹಜ ಹೆರಿಗೆ, ಸಿಜೇರಿಯನ್, ರಕ್ತ, ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಪರೀಕ್ಷೆಗಳ ಲ್ಯಾಬ್ ಶುಲ್ಕವನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಲಾಯಿತು.
ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ತುರ್ತು ಸೇವೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಸ್ಕ್ಯಾನಿಂಗ್ ಹಾಗೂ ಪರೀಕ್ಷೆಗಳಿಗೆ ರೆಫರ್ ಮಾಡುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಜಾಥಾದಲ್ಲಿ ಆಗ್ರಹಿಸಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಸ್ಲಿಂ ಸಮಾಜದ ವಿರುದ್ಧ ಕೋಮುವಾದಿ ಹೇಳಿಕೆ: ಕ್ರಮಕ್ಕೆ ಮುಖಂಡರ ಆಗ್ರಹ
ಜಾಥಾದಲ್ಲಿ ಡ್ರಗ್ ಆಕ್ಷನ್ ಫೋರಂ ನ ಡಾ. ಅಕ್ಷಯ್ ದಿನೇಶ್, ಡಾ. ಸ್ವಾತಿ, ನಿವೃತ್ತ ಡಿವೈಎಸ್ಪಿ ರವಿ ನಾರಾಯಣ್, ಆವರಗೆರೆ ರುದ್ರಮುನಿ, ಸಬ್ರೀನ್ ತಾಜ್, ಸರೋಜಾ, ದಸಂಸ ಮುಖಂಡ ಚಂದ್ರಪ್ಪ,
ನೆರಳು ಬೀಡಿ ಕಾರ್ಮಿಕರ ಯೂನಿಯನ್ ಮುಖಂಡರಾದ ಕರಿಬಸಪ್ಪ, ಫರಿದಾಬಾನು, ಹೀನಾ ಕೌಸರ್, ಸಿಮ್ರಾನ್, ಶಾಹಿರಾ, ರೇಷ್ಮಾ ಬಾನು, ನಸಿರಾಬಾನು, ಸಲ್ಮಾ, ಬೀಬಿ ಜಾನ್, ನಸೀಮಾ, ಆಫ್ಸಿಯಾ, ಹಸೀನಾ, ರಜಿಯಾ ಬಾನು, ಅಫ್ಸನಾ ಬಾನು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಕಾರ್ಯಕರ್ತರು ಹಾಜರಿದ್ದರು.





