ದಾವಣಗೆರೆಯಲ್ಲಿ ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ಕುರಿತು ವಿಚಾರ ಸಂಕಿರಣ ಹಾಗೂ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮವನ್ನು ನ್ಯಾ. ಶಿವರಾಜ ವಿ. ಪಾಟೀಲ ಪ್ರತಿಷ್ಠಾನ,ರಾಯಚೂರು, ಬೆಂಗಳೂರಿನ ರಾಜ್ಯ ಬಾಲಭವನ ಸೊಸೈಟಿ, ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಬಾಲಭವನ ಸಮಿತಿ, ಧರ್ಮ ಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ಪಿ.ಬಿ. ರಸ್ತೆಯಲ್ಲಿರುವ ಡಿ.ಆರ್.ಆರ್. ಶಾಲೆಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ದಾವಣಗೆರೆ ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಎಲ್.ಹೆಚ್. ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಭಾರತವು ಸಂವಿಧಾನ ಅಂಗೀಕರಿಸಿದ ಗಣರಾಜ್ಯವಾಗಿದೆ. ಎಲ್ಲಾ ಸ್ವತಂತ್ರ ರಾಷ್ಟ್ರಗಳು ಗಣರಾಜ್ಯಗಳಲ್ಲ, ಆದರೆ ಎಲ್ಲಾ ಗಣರಾಜ್ಯಗಳು ಸ್ವತಂತ್ರ ದೇಶಗಳಾಗಿವೆ” ಎಂದು ಅಭಿಪ್ರಾಯಪಟ್ಟರು.
“ಭಾರತವನ್ನು ವಸಾಹತುಶಾಹಿ ರಾಜಪ್ರಭುತ್ವ ವಂಶಪಾರಂಪರ್ಯ ಆಡಳಿತದಿಂದ ಮುಕ್ತಗೊಳಿಸಿ ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವದಲ್ಲಿ ಮುನ್ನಡೆದಿದ್ದೇವೆ. ಸಂವಿಧಾನದ ಅಡಿಯಲ್ಲಿ ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯಗಳನ್ನು ಹೊಂದಿದ್ದರೂ ಕಳೆದ 77 ವರ್ಷಗಳಲ್ಲಿ ರಾಜಕೀಯ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಮಾತ್ರ ನಾವು ಸಫಲರಾಗಿದ್ದು, ಇನ್ನೂ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಮುಂದುವರೆದಿವೆ” ಎಂದು ವಿಷಾದಿಸಿದರು.

“ಸಂವಿಧಾನದ ಆಶಯಗಳೇ ಪ್ರಜಾಪ್ರಭುತ್ವದ ಮಾನದಂಡಗಳಾಗಿದ್ದು, ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಪ್ರಜಾಪ್ರಭುತ್ವದ ಮೌಲ್ಯ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ಸಫಲಗೊಳ್ಳಲು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಭಾರತವು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದೆ. ಶಿಕ್ಷಣದ ಹಕ್ಕಿನ ಜೊತೆಗೆ ಉದ್ಯೋಗದ ಹಕ್ಕು ಮತ್ತು ವಸತಿ ಹಕ್ಕು ಮೂಲಭೂತ ಹಕ್ಕುಗಳಾಗಬೇಕಿದೆ” ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಕುಮಾರ್ ಜಿಎಸ್. ಮಾತನಾಡಿ, “ಮಕ್ಕಳಲ್ಲಿರುವ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸುವ ಬಾಲಭವನವು ಹಮ್ಮಿಕೊಂಡಿರುವ ಕಲಾಪ್ರತಿಭೆ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮುಂದಿನ ಪ್ರಜೆಗಳಾದ ಮಕ್ಕಳು ರೂಪುಗೊಳ್ಳಲು ಮಕ್ಕಳ ಹಕ್ಕುಗಳು ನಿರಂತರವಾಗಿ ಜಾರಿಗೊಳ್ಳಬೇಕಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ದ ಸ್ವಾಮಿ, “ವಿಜ್ಞಾನ ಪರಿಷತ್ತು ಜಿಲ್ಲಾ ಬಾಲಭವನ ಸಮಿತಿ ಮಕ್ಕಳಲ್ಲಿ ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ” ಎಂದು ತಿಳಿಸಿದರು.
ಡಿ.ಆರ್.ಆರ್.ಶಾಲೆಗಳ ಆಡಳಿತಾಧಿಕಾರಿ ಎಂ. ಬಸವರಾಜಪ್ಪ, ಜಿಲ್ಲಾ ಬಾಲಭವನ ಸಮಿತಿಯ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಎಸ್.ಬಿ. ಶಿಲ್ಪಾ, ಡಿಸಿಎಂ ಶಾಲೆಗಳ ಮುಖ್ಯೋಪಾಧ್ಯಾಯರಾದ ಆರ್. ಭೋಜರಾಜ ಯಾದವ್, ಡಿಆರ್ಆರ್ ಪ್ರೌಢಶಾಲೆಯ ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯ ಹೆಚ್.ಎಸ್. ಹಾಲೇಶ್, ಡಿಆರ್ಆರ್ ಪ್ರೌಢಶಾಲೆಯ ಆಂಗ್ಲಮಾಧ್ಯಮದ ಮುಖ್ಯೋಪಾಧ್ಯಾಯ ಎ.ಎಂ. ಬಸವನಗೌಡ, ಡಿಆರ್ಆರ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಮತಿ ಕೆ.ಎಲ್. ರಾಧ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ ಉಪಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಸಿಗುವುದೇ ರಾಜಕೀಯ, ಸಾಮಾಜಿಕ ನ್ಯಾಯ?
ಕಲಾ ಪ್ರತಿಭೆ ಕಾರ್ಯಕ್ರಮದಲ್ಲಿ ಡಿ.ಆರ್.ಆರ್ ಶಾಲೆಯ 7ನೇ ತರಗತಿಯ ಮಕ್ಕಳು ಸಂವಿಧಾನ ಪೀಠಿಕೆಯ ನೃತ್ಯ ಸಂಯೋಜನೆ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ಮತ್ತು ಭಾಗವಹಿಸಿದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.





