ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಸೌಜನ್ಯ ಮತ್ತು ಸಂತ್ರಸ್ತ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದವರು ಯಾರು, ಕೊಂದವರು ಯಾರು? ಎಂಬ ಸತ್ಯವನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂದು ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ದಾವಣಗೆರೆಯ ಜಯದೇವ ವೃತ್ತದಲ್ಲಿ ಜಿಲ್ಲೆಯ ಮಹಿಳಾ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿದರು.

ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಒಕ್ಕೂಟ, ನೆರಳು ಬಿಡಿ ಕಾರ್ಮಿಕರ ಸಂಘಟನೆ ಮತ್ತು ಮಹಿಳಾ ಮುನ್ನಡೆ ಸಂಘಟನೆಗಳ ನೇತೃತ್ವದಲ್ಲಿ ಇಂದು ದಾವಣಗೆರೆ ಜಯದೇವ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಕಳೆದ ನಾಲ್ಕೈದು ದಶಕಗಳಿಂದಲೂ ಮಹಿಳೆಯರ ಹಕ್ಕುಗಳು ಮತ್ತು ಘನತೆಗಾಗಿ ನಿರಂತರವಾಗಿ ಹೋರಾಡುತ್ತಿರುವ ಕರ್ನಾಟಕದ ಮಹಿಳಾ ಸಂಘಟನೆಗಳು ಮತ್ತು ಮಹಿಳಾ ಸಮಾನತೆಯನ್ನು ಬೆಂಬಲಿಸುವ ಸಹೃದಯರು ಒಟ್ಟುಗೂಡಿ ಕರೆ ಕೊಟ್ಟಿರುವ ಈ ಹೋರಾಟದ ಮೂಲಕ ಮಹಿಳಾ ಸಂಘಟನೆಗಳು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಜನಶಕ್ತಿಯ ಪವಿತ್ರಾ ಅರವಿಂದ್ “ಧರ್ಮಸ್ಥಳದಲ್ಲಿ ಕೊಲೆಯಾಗಿರುವ ವೇದವಲ್ಲಿ, ಪದ್ಮಲತಾ, ಯಮುನಾ ಮತ್ತು ನಾರಾಯಣ, ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಇವು ಅಷ್ಟೇ ಅಲ್ಲದೆ ನೂರಾರು ಮಹಿಳೆಯರ ಮತ್ತು ಯುವತಿಯರ ಅಸಹಜ ಸಾವುಗಳು ಧರ್ಮಸ್ಥಳ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ನಡೆದಿದೆ. ಈ ಅತ್ಯಾಚಾರ, ಕೊಲೆಗಳಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು “ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 2014ರಲ್ಲಿ ಎಂ ಎಲ್ ಸಿ ಯಾಗಿದ್ದ ವಿ ಎಸ್ ಉಗ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ತಜ್ಞರ ಸಮಿತಿಯ ಮುಂದೆ 2016ರಲ್ಲಿ, ಕಳೆದ ಐದು ವರ್ಷಗಳಲ್ಲಿ 500ಕ್ಕೂ ಹೆಚ್ಚು ಅಸಹಜ ಸಾವುಗಳು ಸಂಭವಿಸಿವೆ ಎಂದು ಅಪರ ಎಸ್ಪಿ ಅವರೇ ತಿಳಿಸಿದ್ದರು” ಎಂದು ಅಭಿಪ್ರಾಯಪಟ್ಟರು.
ಮಹಿಳಾ ಸಂಘಟನೆಗಳ ಇತರೆ ಮುಖಂಡರು ಮಾತನಾಡಿ “ಈ ಘಟನೆಗಳು ನಮ್ಮೊಳಗೆ ಸಂಕಟ ಹುಟ್ಟಿಸುವಂತೆ ಪ್ರಶ್ನೆಗಳನ್ನು ಹುಟ್ಟು ಹಾಕಬೇಕಲ್ಲವೇ ಆ ಹೆಣ್ಣು ಮಕ್ಕಳು ಪಟ್ಟ ಯಾತನೆ, ನೋವು ನಮ್ಮನ್ನು ತಟ್ಟಬೇಕಲ್ಲವೇ ಅತ್ಯಾಚಾರ ಕೊಲೆಗಳು ನಡೆದಿರುವುದು ಸತ್ಯವೆಂದಾಗ ಅವುಗಳನ್ನು ಮಾಡಿದವರು ಯಾರೆಂಬ ಸತ್ಯ ಹೊರ ಬರಬೇಕಾಗಿದೆ. ಕಾನೂನುಬದ್ಧವಾಗಿ ತನಿಖೆ ನಡೆಸಿ ಸಾಕ್ಷಿಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವುದು ಪೊಲೀಸರ ಕರ್ತವ್ಯವಲ್ಲವೇ” ಎಂದು ಸರ್ಕಾರಕ್ಕೆ ಮತ್ತು ಆಡಳಿತ ವ್ಯವಸ್ಥೆಗೆ ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಸಿಪಿಐ ಮುಖಂಡ ಉಮೇಶ್ ಅವರಗೆರೆ “ಧರ್ಮಸ್ಥಳದಲ್ಲಿ ಸೌಜನ್ಯ ಸೇರಿದಂತೆ ಇತರ ಅತ್ಯಾಚಾರ ಮತ್ತು ಕೊಲೆಗಳಿಗೆ ಸೂಕ್ತ ನ್ಯಾಯ ಒದಗಿಸುವ ದೃಷ್ಟಿಯಲ್ಲಿ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಕ್ರಮ ಕೈಗೊಳ್ಳಬೇಕಾಗಿದೆ. ಸೌಜನ್ಯ ಪರವಾಗಿ ಹೋರಾಟ ಮಾಡುವವರನ್ನು ಕೆಲವು ರಾಜಕೀಯ ಹಿತಾಸಕ್ತಿಯುಳ್ಳವರು ಹಣ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಸೌಜನ್ಯ ಮತ್ತು ಇತರೆ ಕೊಲೆ ಮತ್ತು ಅತ್ಯಾಚಾರಗಳೇ ನಡೆದೇ ಇಲ್ಲ ಎನ್ನುವ ಹೋರಾಟ ಮಾಡುವ ನೀವು ಯಾರಿಂದ ಎಷ್ಟು ಪಡೆದಿದ್ದೀರಿ ಎನ್ನುವುದನ್ನು ತಿಳಿಸಬೇಕು ನಮ ಹೋರಾಟ ನೊಂದ ಮಹಿಳೆಯರ ಪರವಾಗಿದೆ. ಅವರಿಗೆ ಸೂಕ್ತ ನ್ಯಾಯ ದೊರಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ: ಕಾನೂನಿನ ಶಿಷ್ಟತೆ ಕಾಪಾಡುವವರಿಂದಲೇ ಸಂವಿಧಾನದ ಕಗ್ಗೊಲೆ
ಪ್ರತಿಭಟನೆಯಲ್ಲಿ ಅಖಿಲ ಭಾರತ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರೋಜ, ಮುಖಂಡರುಗಳಾದ ನಿರ್ಮಲ, ಮಂಜುಳಾ ಹೊಸಳ್ಳಿ, ಗೀತಾ, ಹುಲಿಗೆಮ್ಮ, ರಮೀ ಜಬಿ, ಪಾಪಮ್ಮ, ಲತಾ, ಪ್ರೇಮಬಾಯಿ, ಜಯಮ್ಮ, ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಜಬೀನ ಖಾನಂ, ಕರಿಬಸಪ್ಪ, ನಾಜಿಮಾ, ನೂರ್ ಫಾತಿಮಾ, ಜಮೀರ್ ಉನ್ನಿಸಾ, ರೇಷ್ಮಾ ಬದ್ರೂನ್, ಸೈಯದ್ ಸಲ್ಮಾ ಭಾಗವಹಿಸಿದ್ದರು. ಸಿಪಿಐ ನ ಆವರಗೆರೆ ಚಂದ್ರು, ಹೆಚ್ ಜಿ ಉಮೇಶ್, ಐರಣಿ ಚಂದ್ರು, ಎ ತಿಪ್ಪೇಶ್, ರಾಜು, ಎಲ್ಲಪ್ಪ, ಶೇಖರ ನಾಯಕ, ಜನಶಕ್ತಿಯ ಸತೀಶ್ ಅರವಿಂದ್ ಮುಂತಾದವರು ಮಹಿಳಾ ಪರ ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಿದ್ದರು.





