ಮಾಜಿ ಸಚಿವ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನರವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಸಾಮಾಜಿಕ ನ್ಯಾಯದಡಿಯಲ್ಲಿ ಪರಿಗಣಿಸಿ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯಿಸಿ ದಾವಣಗೆರೆ ಜಿಲ್ಲೆ ಹರಿಹರ ನಗರದಲ್ಲಿ ಅಲ್ಪಸಂಖ್ಯಾತರ ವಿಭಾಗದ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿಕೆ ಸೈಯದ್ ರಹಮಾನ್ “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1994 ರಿಂದ ಶಾಮನೂರು ಶಿವಶಂಕರಪ್ಪನವರು ಸತತವಾಗಿ ಆಯ್ಕೆಯಾಗಿ ಬರಲು ಮುಸ್ಲಿಂ ಸಮುದಾಯ ಮತ್ತು ಅಹಿಂದ ಬೆನ್ನೆಲುಬಾಗಿ ನಿಂತಿತ್ತು. ನಾವು ಅವರಿಗೆ ನೆರಳಾಗಿ ನಿಂತು ಕೆಲಸ ಮಾಡಿದ್ದೆವು. ಅವರು ಕೂಡ ಜಾತ್ಯಾತೀತವಾಗಿ ಎಲ್ಲರನ್ನು ಪ್ರತಿನಿಧಿಸುತ್ತಿದ್ದರು. ಈಗ ಅವರ ನಿಧನದಿಂದ ತೆರವಾಗಿರುವ ಶೇಕಡ 80ಕ್ಕಿಂತಲೂ ಹೆಚ್ಚು ಇರುವ ಅಹಿಂದ ಮತಗಳು ಇರುವ ಕ್ಷೇತ್ರ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯವನ್ನು ಪರಿಗಣಿಸಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಬೇಕು” ಎಂದು ಒತ್ತಾಯಿಸಿದರು.

“ದಾವಣಗೆರೆ ದಕ್ಷಿಣದಲ್ಲಿ ಶೇಕಡ 85,000ಕ್ಕೂ ಹೆಚ್ಚು ಮುಸ್ಲಿಮ್ ಮತದಾರರಿದ್ದು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಈ ಕ್ಷೇತ್ರವನ್ನು ಮುಸ್ಲಿಂ ವರ್ಗಕ್ಕೆ ಟಿಕೆಟ್ ಕೊಟ್ಟು ಗೆಲ್ಲಿಸಬೇಕು. ಮುಸ್ಲಿಂ ಮುಖಂಡರಿಗೆ ಟಿಕೆಟ್ ನೀಡಿದಲ್ಲಿ ಶಿಗ್ಗಾವಿಯಲ್ಲಿ ಯಾಸಿರ್ ಪಠಾಣರನ್ನು ಗೆಲ್ಲಿಸಿದಂತೆ ಅಹಿಂದ ವರ್ಗದ ಎಲ್ಲ ಜನರು ಕಾಂಗ್ರೆಸ್ನ ಜೊತೆಗೆ ನಿಂತು ಈ ಕ್ಷೇತ್ರವನ್ನು ಗೆಲ್ಲಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಹರಿಹರ ಯುವ ಕಾಂಗ್ರೆಸ್ ವಿಭಾಗದ ಮಾಜಿ ಅಧ್ಯಕ್ಷ ಅಫ್ರೋಜ್ ಮಾತನಾಡಿ “ಕ್ಷೇತ್ರದಲ್ಲಿ ಮುಸ್ಲಿಮರು ಹೆಚ್ಚು ಜನಸಂಖ್ಯೆ ಹೊಂದಿದ್ದು ಪ್ರಶ್ನಾತೀತವಾಗಿ ಕಾಂಗ್ರೆಸನ್ನು ಬೆಂಬಲಿಸಿದ್ದೇವೆ. ಕ್ಷೇತ್ರದಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಮುಸ್ಲಿಮರನ್ನು ಪರಿಗಣಿಸಿ ಟಿಕೆಟ್ ನೀಡಿದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ” ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ಮುಗ್ದುಮ್ ಸಾಬ್ ಮಾತನಾಡಿ “ಪ್ರಜಾತಂತ್ರದಲ್ಲಿ ಎಲ್ಲರಿಗೂ ಕೇಳುವ ಹಕ್ಕಿದೆ. ಸಾಮಾಜಿಕ ನ್ಯಾಯದಡಿ ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರನ್ನು ಪರಿಗಣಿಸಿ ಕ್ಷೇತ್ರವನ್ನು ಬಿಟ್ಟುಕೊಡಬೇಕು. ಜಿಲ್ಲೆಯ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಡಿಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಗಮನಹರಿಸಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮುಖಂಡರನ್ನು ಟಿಕೆಟ್ ಕೊಟ್ಟು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ಕೆಲಸ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | 80 ಸಾವಿರ ಜನಸಂಖ್ಯೆಯ ಮುಸ್ಲಿಂ ಅಥವಾ ಅಹಿಂದ ವರ್ಗಕ್ಕೆ ಅವಕಾಶ ಕೊಡಿ: ಎಂಎಲ್ಸಿ ಅಬ್ದುಲ್ ಜಬ್ಬಾರ್
ಅಲ್ಪಸಂಖ್ಯಾತರ ಕಾಂಗ್ರೆಸ್ ವಿಭಾಗದ ಕಾಂಗ್ರೆಸ್ ಮುಖಂಡರಾದ ಆಸಿಬ್ ಜುನೇದಿ, ರೋಷನ್ ಜಮೀರ್, ಇಮ್ತಿಯಾಜ್ ಜಲಾಲ್ ಸೇರಿದಂತೆ ಸೈಯದ್ ಆಸಿಫ್ ಜುನೇದಿ, ಹಬೀಬುಲ್ಲ ಗನ್ನೆವಾಲೆ, ಸೈಯದ್ ರೆಹಮಾನ್ ಬಾಂಬೆ, ಮೊಹಮ್ಮದ್ ಇಕ್ಬಾಲ್ , ಅಪ್ಪ್ರೋಸ್ ಖಾನ್ ಸೇರಿದಂತೆ ಮುಸ್ಲಿಂ ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.





