ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮ ಪಡಿಸಿದ್ದು ದಾವಣಗೆರೆ ಬಿಜೆಪಿ ಮುಖಂಡ, ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಬಿಜೆಪಿಯ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶ್ರೀನಿವಾಸ್ ದಾಸಕರಿಯಪ್ಪ ಸಿದ್ದೇಶ್ವರ ಬಣದ ಜೊತೆ, ರವೀಂದ್ರನಾಥ್, ರೇಣುಕಾಚಾರ್ಯ ಬಣದ ಜೊತೆ ಕೂಡ ವಿಶ್ವಾಸ ಹೊಂದಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಕೂಡ ಉತ್ತಮ ಸಖ್ಯ ಹೊಂದಿದ್ದು, ಇದೇ ಮೊದಲ ಬಾರಿಗೆ ಟಿಕೆಟ್ ದೊರೆತಿದೆ. ತಂದೆ ದಾಸಕರಿಯಪ್ಪ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚುನಾವಣಾ ಆಯ್ಕೆ ಸಭೆಯಲ್ಲಿ ಅಹಿಂದಕ್ಕೆ ಪ್ರತಿಯಾಗಿ ‘ಐನೂರು ಸಾವಿರ’ ಘೋಷಣೆ: ಮುಸ್ಲಿಂರ ಆಕ್ರೋಶ
ಬಿಜೆಪಿಯಲ್ಲಿಯೂ ಕೂಡ ಟಿಕೆಟ್ ಪಡೆಯಲು ಹಲವು ಆಕಾಂಕ್ಷಿಗಳ ಬಣ ರಾಜಕೀಯ ನಡೆದಿದ್ದವು. ಬಿಜೆಪಿಯ ಮಾಜಿ ಕಾರ್ಪೊರೇಟರ್ ಹಿರಿಯ ಮುಖಂಡ ಯಶವಂತರಾವ್ ಜಾದವ್, ಕಳೆದ ಬಾರಿಯ ಅಭ್ಯರ್ಥಿ ಅಜಯ್ ಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ರಾಜಶೇಖರ್ ಸೇರಿದಂತೆ ಹಲವು ಹೆಸರುಗಳು ಚಾಲ್ತಿಯಲ್ಲಿದ್ದವು. ಬಣ ರಾಜಕೀಯದಿಂದ ಕಗ್ಗಂಟಾಗಿದ್ದ ಟಿಕೆಟ್ ಗೆ ಹೊಸದಾಗಿ ಸ್ವಾಭಿಮಾನಿ ಬಳಗದ ವಿನಯ್ ಕುಮಾರ್ ಹೆಸರು ಕೇಳಿಬಂದಿತ್ತು. ವಿನಯ್ ಕುಮಾರ್ ಹೆಸರು ಕೇಳಿ ಬಂದ ತಕ್ಷಣ ಬಣ ರಾಜಕೀಯ ಮರೆತು ಎರಡೂ ಬಣಗಳ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸಲು ಕುರಿತು ಸಂದೇಶ ರವಾನಿಸಲು ಸುದ್ದಿಗೋಷ್ಠಿ ನಡೆಸಿದ್ದರು. ಅಂತಿಮವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಬಿ-ಫಾರಂ ಶ್ರೀನಿವಾಸ ದಾಸಕರಿಯಪ್ಪಗೆ ಒಲಿದಿದೆ.
ಶ್ರೀನಿವಾಸ್ ದಾಸಕರಿಯಪ್ಪ;
ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ ದಾಸಕರಿಯಪ್ಪ ಅವರಿಗೆ ದಕ್ಷಿಣ ವಿಧಾನಸಭಾ ಸಭಾ ಉಪ ಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ.
1981, ಫೆ. 01 ರಂದು ಜನಿಸಿರುವ ಶ್ರೀನಿವಾಸ್ ಅವರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಪದವಿ (ಐಟಿ) ಪಡೆದಿರುವ ಅವರು ಸಮಾಜ ಸೇವೆ ಮೂಲಕ ರಾಜಕೀಯಕ್ಕೆ ಬಂದಿದ್ದಾರೆ. ತಂದೆ ದಾಸಕರಿಯಪ್ಪ ಅವರು ಜೆಡಿಎಸ್ ಅಧಿಕಾರದ ಅವಧಿಯಲ್ಲಿ ನಗರಾಭಿವೃದ್ದಿಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿ 5 ವರ್ಷ ಹಾಗೂ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಅಲ್ಲದೇ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಕುಟುಂಬ ವಿವರ : ತಂದೆ ಟಿ.ದಾಸಕರಿಯಪ್ಪ, ತಾಯಿ ರಂಗಮ್ಮ.ಟಿ. ಪತ್ನಿ ಎಸ್ಎಂಟಿ. ಸಂಧ್ಯಾ, ಸ್ಕಂದನ್ ದಾಸ್ ಮತ್ತು ಕೇಶವ್ ದಾಸ್ ಮಕ್ಕಳಿದ್ದಾರೆ.
ಮಾಜಿ ಸಂಸದರ ಅಪ್ತ ಬಳಗ :
ಶ್ರೀನಿವಾಸ್ ದಾಸಕರಿಯಪ್ಪ ಅವರು ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದಶ್ವರರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಮಾತ್ರವಲ್ಲ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣದ ವಿರುದ್ಧ ಯಾವುದೇ ಮಾತನಾಡಿರಲಿಲ್ಲ. ವಿರೋಧವೂ ವ್ಯಕ್ತಪಡಿಸಿರಲಿಲ್ಲ. ಎರಡು ಬಣಗಳ ಜೊತೆ ಉತ್ತಮ ಒಡನಾಟ ಹೊಂದಿದ್ದ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಬಿಜೆಪಿ ಮಣೆ ಹಾಕುವ ಮೂಲಕ ತಂತ್ರಗಾರಿಕೆ ನಡೆಸಿದೆ.
ಸಾಮಾನ್ಯ ಕಾರ್ಯಕರ್ತಗೆ ಟಿಕೆಟ್;
ಬಿಜೆಪಿ ಬಡ ಕುಟುಂಬದಿಂದ ಬಂದ ವ್ಯಕ್ತಿಗೆ ಟಿಕೆಟ್ ನೀಡಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಿದೆ. ಎಲ್ಲಾ ಲೆಕ್ಕಚಾರಗಳನ್ನು ತಲೆಕೆಳಗಾಗಿಸಿ, ಬಿಜೆಪಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ.
ಶ್ರೀನಿವಾಸ ದಾಸಕರಿಯಪ್ಪ ಪ್ರತಿಕ್ರಿಯಿಸಿ “ಮಾಜಿ ಸಂಸದ ಸಿದ್ದೇಶ್ವರ, ಎಸ್ ಎ ರವೀಂದ್ರನಾಥ, ರೇಣುಕಾಚಾರ್ಯ ಸೇರಿದಂತೆ ಪಕ್ಷದ ಎಲ್ಲಾ ಮುಖಂಡ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ವಿರುದ್ದ ಚುನಾವಣೆ ನಡೆಸುತ್ತೇವೆ. ಯಶವಂತರಾವ್ ಜಾಧವ್, ಅಜಯಕುಮಾರ್, ದೇವರಮನೆ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಈ ಬಾರಿ ದಕ್ಷಿಣದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ” ಎಂದರು.





