ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ 4.82 ಕೋಟಿ ರೂ.ಗಳ ಕಾಂಕ್ರೀಟ್ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಆದೇಶಿಸಿದರು. ಹರಿಹರದಲ್ಲಿ ಸೋಮವಾರ ರಾಜ ಕಾಲುವೆ ರಕ್ಷಣಾ ಸಮಿತಿಯಿಂದ ನಡೆಸಿದ ‘ನಮ್ಮ ನಡೆ ರಾಜ ಕಾಲುವೆ ಕಡೆ’ ಪ್ರತಿಭಟನೆಯ ಹೋರಾಟದಲ್ಲಿ ಮಾತನಾಡಿದರು.
ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ರಾಜಕಾಲುವೆಯಲ್ಲಿ ಕಾಂಕ್ರೀಟ್ ಚರಂಡಿ ಒತ್ತುವರಿದಾರರಿಗೆ ಅನುಕೂಲವಾಗುವಂತಿದ್ದು ಈ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಹರಿಹರ ನಗರದಲ್ಲಿ ಸೋಮವಾರ ರಾಜ ಕಾಲುವೆ ರಕ್ಷಣಾ ಸಮಿತಿ ಆಯೋಜಿಸಿದ್ದ ‘ನಮ್ಮ ನಡೆ ರಾಜ ಕಾಲುವೆ ಕಡೆ’ ಪ್ರತಿಭಟನೆಯ ನಂತರ ಮನವಿ ಸ್ವೀಕರಿಸಿ ಅವರು ಆದೇಶಿಸಿದರು.
“ದೇವರಬೆಳೆಕೆರೆ ಕಾಲುವೆಯ ಭಾಗದಿಂದ ಭೂ ಮಾಪನ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯಿಂದ ಜಂಟಿಯಾಗಿ ಇಂದಿನಿಂದ ಭೂ ಮಾಪನಾ ಕಾರ್ಯ ಆರಂಭವಾಗಿದೆ. ಏಳೆಂಟು ದಿನಗಳಲ್ಲಿ ವಾಸ್ತವ ಸ್ಥಿತಿ ತಿಳಿಯಲಿದೆ, ನಂತರ ಸಭೆ ನಡೆಸಿ ನಿರ್ಣಯಿಸಲಾಗುವುದು” ಎಂದು ಹೇಳಿದರು.
ರಾಜಕಾಲುವೆ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಮಾತನಾಡಿ, “ಎಸ್.ಜೆ.ವಿ.ಪಿ. ಕಾಲೇಜಿನ ಹಿಂಭಾಗದಲ್ಲಿ ಕೈಗೊಂಡಿರುವ ಕಾಮಗಾರಿಯು 80 ರಿಂದ 100 ಅಡಿ ಅಗಲದ ಕಾಲುವೆಯನ್ನು 15 ಅಡಿಗೆ ಸೀಮಿತಗೊಳಿಸುತ್ತಿರುವುದು ಅವೈಜ್ಞಾನಿಕ, ಭೂಗಳ್ಳರು ಬೆಲೆ ಬಾಳುವ ಕಾಲುವೆಯ ಹಲವು ಕೋಟಿ ರೂ. ಮೌಲ್ಯದ ಹಲವು ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಅನುವು ಮಾಡಿಕೊಡುವಂತಿದೆ” ಎಂದು ಆರೋಪಿಸಿದರು.

“ಜಮೀನು ಲಭ್ಯವಿಲ್ಲವೆಂದು ನಗರದಲ್ಲಿ ಬಡವರಿಗೆ ಕಳೆದ 25 ವರ್ಷಗಳಿಂದ ಒಂದು ನಿವೇಶನ ಹಂಚಿಕೆ ಮಾಡಲಾಗಿಲ್ಲ. ಈ ಕಾಲುವೆ ಹಾಗೂ ಕಾಲುವೆಯ ಬಫರ್ ಜೋನ್ ನಿಂದ ಲಭ್ಯವಾಗುವ ಹಲವು ಎಕರೆ ಜಮೀನನ್ನು ತಾಲೂಕು ಹಾಗೂ ಜಿಲ್ಲಾಡಳಿತ ಸೇರಿ ಬಲಾಢ್ಯರ ಪಾಲಾಗುವಂತೆ ಮಾಡುತ್ತಿರುವುದು ಸರಿಯಾದುದಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ಹಲವು ಶತಮಾನಗಳಿಂದ ಮಳೆ ನೀರನ್ನು ನದಿಗೆ ಸೇರಿಸುವ ನಗರದ ಪೂರ್ವ ಭಾಗದಿಂದ ನೂರಾರು ಎಕರೆ ಜಮೀನುಗಳ ಬಸಿ ನೀರು, ಮಳೆ ನೀರು, ದೇವರಬೆಳೆಕೆರೆ ಕಾಲುವೆಯ ಹೆಚ್ಚುವರಿ ನೀರು ಈ ರಾಜಕಾಲುವೆಗೆ ಸೇರಿ ಮುಂದೆ ನದಿಗೆ ಸೇರುತ್ತದೆ. ಕೆಲವೆಡೆ ಕಿರಿದಾಗಿಸಿ ಚರಂಡಿ ನಿರ್ಮಿಸಿದ ಪರಿಣಾಮ ಈಗಾಗಲೆ ಕಾಲುವೆಯ ಹಲವು ಎಕರೆ ಜಮೀನು ಭೂಗಳ್ಳರ ಪಾಲಾಗಿದೆ, ಇದರ ಪರಿಣಾಮವಾಗಿ ಕಳೆದ ಕೆಲವು ವರ್ಷಗಳಿಂದ ನಗರದ ಕಾಳಿದಾಸ ನಗರ, ನೀಲಕಂಠನಗರ, ಬೆಂಕಿನಗರ ಹಾಗೂ ಇತರೆ ಜನವಸತಿ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಪ್ರವಾಹದ ಸ್ಥಿತಿಯನ್ನು ನಿರ್ಮಿಸುತ್ತಿದೆ” ಎಂದು ವಿವರಿಸಿದರು.
“ಈ ಕಾಲುವೆಯ ಏರಿ ಮೇಲೆ ಬಂಜಾರ ಸಮುದಾಯದ ರುದ್ರಭೂಮಿ ಇತ್ತು, ಆ ರುದ್ರಭೂಮಿಯನ್ನೂ ಈಗ ಒತ್ತುವರಿ ಮಾಡಲಾಗಿದೆ. ಅಳತೆ ಮಾಡಿಸಿ ಬಂಜಾರ ಸಮುದಾಯದ ರುದ್ರಭೂಮಿಯನ್ನು ಜೀರ್ಣೋದ್ದಾರ ಮಾಡಬೇಕು. ನಗರದ ಜನತೆಯ ಈ ಆಶೋತ್ತರಕ್ಕೆ ವಿರುದ್ಧವಾಗಿ ಮುಂದುವರೆದಲ್ಲಿ ವಿವಿಧ ಸಂಘ,ಸಂಸ್ಥೆಗಳ ಸಹಕಾರದೊಂದಿಗೆ ಕಠಿಣ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕುಟುಂಬ ರಾಜಕಾರಣಕ್ಕೆ ವಿರೋಧ; ಗೆಲ್ಲುವ ಅಭ್ಯರ್ಥಿಗೆ ಟಿಕೆಟ್: ಸಿಎಂ ಸಿದ್ದರಾಮಯ್ಯ
ರಾಜ ಕಾಲುವೆ ರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಬಿ.ಮಗ್ದುಂ, ಅಧ್ಯಕ್ಷ ಪಿ.ಜೆ.ಮಹಾಂತೇಶ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಿ., ಇಮ್ತಿಯಾಜ್ ಜಲಾಲ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಬಾಬುಲಾಲ್, ಖಜಾಂಚಿ ಜಫ್ರುಲ್ಲಾ, ಕಾನೂನು ಸಲಹೆಗಾರ ಶಶಿನಾಯ್ಕ್, ಮುಖಂಡರಾದ ಎಲ್.ನಿರಂಜನಮೂರ್ತಿ, ಮಂಜಮ್ಮ, ಶ್ರೀನಿವಾಸ್ ಕೊಡ್ಲಿ, ಇಲಿಯಾಸ್, ಚೌಡಪ್ಪ ಸಿ.ಭಾನುವಳ್ಳಿ, ರಾಜಪ್ಪ, ಸುರೇಶ್ ಡಿ.ಕೆಂಚನಹಳ್ಳಿ, ತಿಮ್ಮಣ್ಣ ಕಡ್ಲೆಗೊಂದಿ, ಸಂಜೀವಪ್ಪ, ಮಂಜಪ್ಪ ಗುಡ್ಡದಹಳ್ಳಿ, ಹನುಮಂತ, ಗದಿಗೆಪ್ಪ ಬಿ., ಹನುಮಂತಪ್ಪ ವಾಸನ, ರಾಮಪ್ಪ ಹಿಂಡಸಘಟ್ಟ ಹಾಗೂ ಇತರರಿದ್ದರು.





