ಸಂಘಟನೆ ಹೆಸರು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ಜೆ. ಮಹಾಂತೇಶ್ ದೂರು ಸಲ್ಲಿಸಿದ್ದಾರೆ. “1974ರಲ್ಲಿ ಪ್ರೊ. ಬಿ.ಕೃಷ್ಣಪ್ಪನವರು ನಮ್ಮ ಸಂಘಟನೆಯನ್ನು ಭದ್ರಾವತಿಯಲ್ಲಿ ಸ್ಥಾಪಿಸಿದರು. ದಿನಾಂಕ 25/01/1975ರಂದು ಶಿವಮೊಗ್ಗ ಜಿಲ್ಲಾ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಕಾಯ್ದೆಯಡಿ ಸಹಕಾರಿ ಸಂಘಗಳ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಹೆಸರಿನಲ್ಲಿ ನೊಂದಣಿ (ಸಂಖ್ಯೆ: ಎಸ್ಎಂಜಿ. ಎಸ್47/74-75) ಮಾಡಿಸಿ, ರಾಜ್ಯಾದ್ಯಂತ ವಿಸ್ತರಿಸಿದೆ” ಎಂದು ಹೇಳಿದ್ದಾರೆ.
ಹೀಗಿದ್ದಾಗ, ಕೆಲವರು ನಮ್ಮ ಸಮಿತಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳತೊಡಗಿದ್ದರಿಂದ ನಮ್ಮ ಮೂಲ ಸಂಘಟನೆ ಹೆಸರಿನೊಂದಿಗೆ ‘ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ’ ಎಂಬುದನ್ನು ನಿಯಮಾನುಸಾರ ಸೇರ್ಪಡೆ ಮಾಡಿಕೊಂಡಿದ್ದಲ್ಲದೆ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲವರ ವಿರುದ್ಧ ನಮ್ಮ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿಯವರು ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ: 21/2012ನ್ನು ದಾಖಲು ಮಾಡಿದ್ದರು ಎಂದರು.
ಸುಧೀರ್ಘ ವಿಚಾರಣೆ ನಂತರ ನ್ಯಾಯಾಲಯ 24/03/2021ರಂದು ನಮ್ಮ ಸಮಿತಿಯೇ ಮೂಲ ಸಮಿತಿಯಾಗಿದೆ ಎಂದು ತೀರ್ಪು ನೀಡಿದ್ದು, ಪ್ರತಿವಾದಿಗಳು ಪ್ರೊ.ಕೃಷ್ಣಪ್ಪ ಸ್ಥಾಪಿತ ಹೆಸರು ಬಳಕೆ ಮಾಡದಂತೆ, ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಸಂಘಟನೆಯ ಮತ್ತು ಸದರಿ ಪದಾಧಿಕಾರಿಗಳೆಂದು ಹೇಳಿಕೊಳ್ಳದಂತೆ ಶಾಶ್ವತ ನಿರ್ಬಂಧಕಾಜ್ಞೆ ಹೊರಡಿಸಿ ಆದೇಶಿಸಿದೆ. ಸದರಿ ಆದೇಶದ ವಿರುದ್ಧ ಪ್ರತಿವಾದಿಗಳು ಹಿರಿಯ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದರೂ ಅದು ಇದುವರೆಗೂ ಇತ್ಯರ್ಥವಾಗಿಲ್ಲ.
ಹೀಗಿದ್ದಾಗ ಕೆಲವರು ‘ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ), ಮಹಾತ್ಮಾ ಪ್ರೊ.ಕೃಷ್ಣಪ್ಪ ರಿ.ನಂ.386/2020-21’ ಎಂದು ಕಾನೂನು ಬಾಹಿರವಾಗಿ ಲೆಟರ್ ಹೆಡ್ ಮಾಡಿಸಿಕೊಂಡು ಜನರನ್ನು, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ವಂಚಿಸುತ್ತಿದ್ದಾರೆ. ಒಂದು ವೇಳೆ ಇವರು ನೊಂದಣಾಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಅದೇ ಹೆಸರಿನಲ್ಲಿ ತಮ್ಮ ಸಮಿತಿಯನ್ನು ನೊಂದಣಿ ಮಾಡಿಕೊಂಡಿದ್ದರೂ ಸಹ ಲೆಟರ್ ಹೆಡ್ನಲ್ಲಿ ನೊಂದಣಿ ಸಂಖ್ಯೆಯೊಂದಿಗೆ ‘ಮಹಾತ್ಮ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ’ ಎಂದು ಬರೆದುಕೊಂಡಿರುವುದು ಅಕ್ಷಮ್ಯ ಅಪರಾಧ.
ಸ್ವತಃ ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿ, ನೊಂದಾಯಿಸಿರುವ ನಮ್ಮ ಸಮಿತಿ ಇರುವಾಗಲೂ, ಮುಖ್ಯವಾಗಿ ದಿನಾಂಕ 30.04.1997ರಂದೆ ಪ್ರೊ.ಬಿ.ಕೃಷ್ಣಪ್ಪನವರು ನಿಧನರಾಗಿದ್ದಾಗ್ಯೂ, 2020-21ರಲ್ಲಿ ನೊಂದಾಯಿಸಿರುವ ಸಮಿತಿಗೆ ‘ಮಹಾತ್ಮ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ’ ಎಂದು ಬರೆದುಕೊಂಡು ಜನರ ಕಣ್ಣಿಗೆ ಮಣ್ಣೆರಚುತ್ತಿರುವ, ವಂಚಿಸುತ್ತಿರುವವರು ಸೇರಿದಂತೆ ಈ ವಂಚನೆಯಲ್ಲಿ ಭಾಗೀದಾರರಾಗಿರುವ ಎಲ್ಲರ ವಿರುದ್ಧ ದೂರು ದಾಖಲಿಸಿಕೊಂಡು, ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.
ಈ ವೇಳೆ ಭಾಗ್ಯಮ್ಮ, ಹನುಮಕ್ಕ, ಪುಷ್ಪ, ನಾಗಮ್ಮ, ಶಕುಂತಲ, ನಿರ್ಮಲ, ತಿಮ್ಮಣ್ಣ, ಮಾತಂಗ, ಶೈಲೂ, ಆಲಮ್ಮ, ಮೈಲಮ್ಮ, ಮಲ್ಲಮ್ಮ, ಗಂಗಮ್ಮ, ಹನುಮಂತ, ವೆಂಕಟೇಶ್, ರಂಗನಾಥ ಹಾಗೂ ಇತರರಿದ್ದರು.




