“ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ನಾನು ಸಾಯಲಾರೆ ಎಂದು ಅಂಬೇಡ್ಕರ್ ಹೇಳಿದ್ದರು. ಪ್ರಜ್ಞಾವಂತ ದಲಿತ ಬಂಧುಗಳು ಈ ದೇಶದ ಎಲ್ಲಾ ಹಳ್ಳಿಗಳಲ್ಲೂ ಹೋಗಿ ತಿಳಿಹೇಳಬೇಕಿದೆ. ಅಸ್ಪೃಶ್ಯತೆಗೆ ಒಳಗಾಗಿ ಅವಮಾನ ಎದುರಿಸುತ್ತಿರುವ ಹಿಂದೂ ಧರ್ಮ ನಮ್ಮದಲ್ಲ. ನಮ್ಮ ಧರ್ಮ ಬೇರೆ ಇದೆ. ಅಂಬೇಡ್ಕರರು ಹೇಳಿದ ಧರ್ಮಕ್ಕೆ ಹೋಗೋಣ. ಇದಕ್ಕಾಗಿ ಎಲ್ಲಾ ಬಂಧುಗಳಲ್ಲಿ ಪ್ರಜ್ಞೆ ಮೂಡಲು ಸುಶಿಕ್ಷಿತರು ಕೆಲಸ ಮಾಡಬೇಕು. ದಲಿತರ ಬಗ್ಗೆ ಇರುವ ಅಸ್ಪೃಶ್ಯತೆ ಕಾರಣಕ್ಕೆ ಅಂತರ್ಜಾತಿ ವಿವಾಹವಾದ ಮಾನ್ಯಳ ಬರ್ಬರ ಕೊಲೆ ಮಾಡಲಾಗಿದೆ” ಎಂದು ದಾವಣಗೆರೆಯಲ್ಲಿ ಹಿರಿಯ ದಲಿತ ಹೋರಾಟಗಾರ ವಕೀಲ ಬಿಎಂ ಹನುಮಂತಪ್ಪ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ದಲಿತ ಯುವಕನೋರ್ವನನ್ನು ವಿವಾಹವಾದ ಕಾರಣಕ್ಕೆ ಬರ್ಬರವಾಗಿ ಹತ್ಯೆಗೀಡಾದ ಮಾನ್ಯಳ ಸಾವಿಗೆ ನ್ಯಾಯ ಒದಗಿಸುವಂತೆ, ಆರೋಪಿಗಳಿಗೆ ಸೂಕ್ತ ಶಿಕ್ಷೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ದಾವಣಗೆರೆಯಲ್ಲಿ ಅಂಬೇಡ್ಕರ್ ವೃತದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿ ಒತ್ತಾಯಿಸಿತು.

ಈ ವೇಳೆ ಮಾತನಾಡಿದ ಹಿರಿಯ ವಕೀಲ ಬಿಎಮ್ ಹನುಮಂತಪ್ಪ “ಈ ದೇಶದಲ್ಲಿ ದಲಿತರು ಮತ್ತು ಹಿಂದುಳಿದವರೇ ಬಹುಸಂಖ್ಯಾತರು. ಅಸ್ಪೃಶ್ಯರು ಮಾತ್ರ ದಲಿತರಲ್ಲ, ಅವಮಾನಕ್ಕೂ ಒಳಗಾದ ಎಲ್ಲರೂ ಕೂಡ ದಲಿತರೆ. ಮಾಂಸ ತಿಂದರು, ದೇವಸ್ಥಾನಕ್ಕೆ ಬಂದರು, ದೇವರನ್ನು ಮುಟ್ಟಿದರು, ನೀರು ಕುಡಿದರು ಎಂದು ದೌರ್ಜನ್ಯ, ಕೊಲೆ ಮಾಡುತ್ತಿದ್ದಾರೆ. ದೇಶದ ಉದ್ದಗಲಕ್ಕೂ ನೂರಾರು ಸಂಘಟನೆಗಳ ಹೆಸರಿನಲ್ಲಿ ಹಿಂದೂ ಧರ್ಮ ಎತ್ತಿ ಹಿಡಿಯಲು ಜಾಥಾ ಮಾಡುತ್ತೀರಿ. ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಕೊಲೆಯಾದ ಮಾನ್ಯಳಂತಹ ಕೊಲೆಗಳನ್ನು ತಡೆಯಲು ಏನು ಮಾಡುತ್ತಿದ್ದೀರಿ? ಮೊದಲು ಇಂತಹಾ ಹತ್ಯೆಗಳನ್ನು ಖಂಡಿಸಿ ಹೊರಬನ್ನಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಬರ್ಬರ ಹತ್ಯೆ ಎಂದರೆ ಇತ್ತೀಚಿಗೆ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದಿರುವ ಮಾನ್ಯಳ ಹತ್ಯೆಯಾಗಿದೆ. ಇದಕ್ಕೆ ಮರ್ಯಾದಾ ಹತ್ಯೆಗಳು ಎಂದು ಹೆಸರು ಕೊಡುತ್ತಾರೆ ಇದು ಸರಿಯಲ್ಲ. ಇದನ್ನು ಕೊಲೆ, ಬರ್ಬರ ಕೊಲೆ ಎಂದೇ ಕರೆಯಬೇಕು. 80ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಇಂತಹ ಹತ್ಯೆಗಳೇ ಕಾರಣ. ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಇನ್ನೂ ಸಮಾಜದಲ್ಲಿ ಸಾಮಾಜಿಕ ಆರ್ಥಿಕ ಅಸಮಾನತೆಗಳು ತಾಂಡವವಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ದೇಶದಲ್ಲಿ ಹಿಂದೂ ಧರ್ಮದ ಗುತ್ತಿಗೆ ಹಿಡಿದಿರುವ ಮೋಹನ್ ಭಾಗವತ್ ಮತ್ತು ಆರ್ ಎಸ್ ಎಸ್, ಜಾತಿವಾದಿಗಳು ಸಾವಿರಾರು ವರ್ಷಗಳಿಂದ ದಲಿತರ ಮೇಲೆ ಅಟ್ಟಹಾಸ ಮೆರೆದು, ಅಸ್ಪೃಶ್ಯತೆಯನ್ನು ಆಚರಿಸಿಕೊಂಡು ಬಂದಿದ್ದೀರಿ. ಅಂಬೇಡ್ಕರ್ ಸಂವಿಧಾನ ನೀಡಿದ ನಂತರವೂ ಅಸ್ಪೃಶ್ಯತೆ ಮುಂದುವರಿಸಿಕೊಂಡು ಬರುತ್ತಿರುವುದು ಯಾರ ಉದ್ಧಾರಕ್ಕಾಗಿ ಯಾವ ಪುರುಷಾರ್ಥಕ್ಕಾಗಿ, ಇದೇ ನಿಮ್ಮ ಹಿಂದೂ ಧರ್ಮದ ಉದ್ದೇಶವೇ? ಎಂದು ಪ್ರಶ್ನಿಸಿದರು.
“ದಲಿತರು ಅವಿದ್ಯಾವಂತರಲ್ಲ, ಅಂಬೇಡ್ಕರ್ ಹೆಸರಿನಲ್ಲಿ ನಾವು ಸಂಘಟನೆ ಆಗುತ್ತಿದ್ದು, ನಾವು ಯಾರಿಗೂ ತ್ರಿಶೂಲ ಕೊಡಿ, ಕೊಲೆ ಮಾಡಿ ಎಂದು ಹೇಳುತ್ತಿಲ್ಲ. ಬದಲಿಗೆ ಪುಸ್ತಕವನ್ನು ಕೊಟ್ಟು ದಲಿತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಮಂಜುನಾಥ್ ಕುಂದವಾಡ ಮಾತನಾಡಿ, “ಮರ್ಯಾದೆಗೇಡು ಹತ್ಯೆ ಹೆಸರಿನಲ್ಲಿ ತನ್ನ ಮಗಳನ್ನೇ ಕೊಲೆ ಮಾಡಿರುವ ಈ ತಂದೆಯೊಬ್ಬನಿಂದಲೇ ಈ ಕೆಲಸ ಸಾಧ್ಯವಿಲ್ಲ. ಇದಕ್ಕೆ ಬಹಳಷ್ಟು ಪ್ರಚೋದನೆಯಿಂದ, ಬೆನ್ನ ಹಿಂದಿನ ಶಕ್ತಿ ಕಾರಣವಾಗಿದೆ. ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದೂ ಧರ್ಮದ ಸ್ಥಾಪನೆಗೆ ಸಂವಿಧಾನದ ಅವಶ್ಯಕತೆ ಇಲ್ಲ ಎನ್ನುವರು ಮೊದಲು ಈ ಧರ್ಮದಲ್ಲಿ ಸಾಮಾಜಿಕ ಸಮಾನತೆಯನ್ನು ತರಬೇಕಿದೆ. ಹಾಗಾದರೆ ಈ ಮಾನ್ಯ ಎನ್ನುವ ಹುಡುಗಿ ಹಿಂದೂ ಅಲ್ಲವಾ? ಈ ಹುಡುಗಿಗೆ ನ್ಯಾಯ ಕೊಡಿಸುವ ಕೆಲಸವನ್ನು ನೀವು ಬೀದಿಗೆ ಬಂದು ಮಾಡಬೇಕು ಎಂದು ಎಚ್ಚರಿಸಿದರು.
“ಸ್ವತಂತ್ರ ಹೋರಾಟದಲ್ಲಿ ಎಲ್ಲ ಸಮುದಾಯಗಳು ಭಾಗವಹಿಸಿವೆ. ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವನ್ನು ಕಬಳಿಸಿ ಹಾಳು ಮಾಡಲು ಹೊರಟಿದ್ದೀರಿ. ಇದು ಬಹಳಷ್ಟು ದಿನ ನಡೆಯುವುದಿಲ್ಲ. ಎಲ್ಲರಿಗೂ ಸಮಾನ ಕಾನೂನು ನ್ಯಾಯಗಳನ್ನು ಒದಗಿಸಬೇಕು. ಕೊಲೆಯಾದ ಮಾನ್ಯ ಎನ್ನುವ ಹುಡುಗಿಗೆ ಮತ್ತು ದಲಿತ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಈ ಸರ್ಕಾರ ಮಾಡಬೇಕು”ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಹರಿಹರ ಮಲ್ಲೇಶ್ ಮಾತನಾಡಿ “ಅಂತರ್ಜಾತಿಯ ವಿವಾದದ ಕಾರಣ ಮಾನ್ಯಳ ಹತ್ಯೆ ಮಾಡಿ ಮೂರು ದಿನಗಳಾದರೂ ಸರ್ಕಾರದ ಅಧಿಕಾರಿಗಳು ಅಲ್ಲಿನ ಜನಪ್ರತಿನಿಧಿಗಳು ಗಮನಹರಿಸಿಲ್ಲ. ಅವರಿಗೆ ಕಾನೂನು ನೆರವು ನೀಡಿಲ್ಲ. ಕಂಬಾಲಪಲ್ಲಿಯ ನಂತರ ಇದು ಎರಡನೇ ಅತ್ಯಂತ ಕ್ರೂರ ಕೃತ್ಯವಾಗಿದೆ. ಆರ್ ಎಸ್ ಎಸ್ ಮತ್ತು ಇತರ ಜಾತಿವಾದಿ ಸಂಘಟನೆಗಳ ಸಂವಿಧಾನ ವಿರೋಧಿ ಕೃತ್ಯಗಳು ಮಾನ್ಯಳಂತ ಕೊಲೆ ನಡೆಯಲು ಕಾರಣವಾಗಿದೆ. ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆಗೆ ಒಳಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರರ ಸಂವಿಧಾನದಿಂದ ಶೂದ್ರರು ಮಹಿಳೆಯರಿಗೆ ಸ್ವಾತಂತ್ರ್ಯ: ಡಾ. ನಾಗಲಕ್ಷ್ಮಿ ಚೌಧರಿ
ಪ್ರತಿಭಟನೆ ಸಲ್ಲಿಸುವ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬಸವರಾಜು, ಬುಳ್ಳಸಾಗರ ಸಿದ್ದರಾಮಣ್ಣ, ಲಿಂಗರಾಜು ಗಾಂಧಿನಗರ, ಲಕ್ಷ್ಮಣ್ ಕೊಡಗನೂರು, ಮೈಲಾರಪ್ಪ, ಎಚ್ ನಿಂಗಪ್ಪ, ಸದಾನಂದ ಚಿಕ್ಕನಹಳ್ಳಿ, ನಾಗರಾಜ್ ಚಿತ್ತಾನಹಳ್ಳಿ, ಸಮಾದೆಪ್ಪ, ಪರಶುರಾಮ್ ಮಳ್ಳೆಕಟ್ಟೆ, ರಾಕೇಶ್, ಮಾಲತೇಶ್, ಕರಿಬಸಪ್ಪ, ಸತೀಶ್ ಅರವಿಂದ್, ಕರಿಬಸಪ್ಪ, ರಾಮಪ್ಪ ಹೊನ್ನೂರು ,ನಾಗರಾಜ್ ಎನ್ ಎಂ, ಜೀವನ್ ಸೇರಿದಂತೆ ಇತರರು ಹಾಜರಿದ್ದರು.





