ಮಹಾತ್ಮ ಗಾಂಧಿ ನರೇಗಾ ಯೋಜನೆಗೆ ತಿದ್ದುಪಡಿ ಮೂಲಕ ಮೂಲ ಆಶಯಗಳನ್ನು ತೆಗೆದು ವಿಬಿ ಜಿ ರಾಮ್ ಜಿ ಮಸೂದೆಯನ್ನು ಸ್ಕೀಮ್ ಆಗಿ ಜಾರಿಗೆ ತರುವ ಮೂಲಕ ಗ್ರಾಮೀಣ ಪ್ರದೇಶದ ಸಣ್ಣ ರೈತರ, ಕೃಷಿ ಕಾರ್ಮಿಕರ ಹಾಗೂ ಕೂಲಿ ಕಾರ್ಮಿಕರ ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಗ್ರಾಮೀಣ ಕೂಲಿಕಾರರ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ದಾವಣಗೆರೆ ಜಿಲ್ಲಾ ಸಂಸದರ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಿದ್ದುಪಡಿಯನ್ನು ಕೈ ಬಿಡಲು ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಮನವಿ ಸಲ್ಲಿಸುವ ವೇಳೆ ಜಿಲ್ಲಾಧಿಕಾರಿಗಳು ಹಾಗೂ ಗ್ರಾಕೂಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು.
ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಸಂಸದರ ಕಚೇರಿ ಮುಂಭಾಗ ಸುಮಾರು 12 ಗಂಟೆಯಿಂದ ಪ್ರತಿಭಟನೆಗೆ ಕೂತಿದ್ದ ಕಾರ್ಯಕರ್ತರು ಮನವಿ ಸಲ್ಲಿಸಲು ಕಾಯುತ್ತಿದ್ದರು. ಈ ವೇಳೆಗೆ ಜಿಲ್ಲಾಡಳಿತದ ಪರವಾಗಿ ಮನವಿ ಸ್ವೀಕರಿಸಲು ಬಂದ ಅಪರ ಜಿಲ್ಲಾಧಿಕಾರಿಗಳಿಗೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳೇ ಬರಬೇಕೆಂದು ಪಟ್ಟು ಹಿಡಿದು ಮನವಿ ಸಲ್ಲಿಸಲು ನಿರಾಕರಿಸಿದರು.
ಆನಂತರ ರೈತರ ಸಭೆ ನಡೆಸುತ್ತಿದ್ದ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸುವ ವೇಳೆ ಕೊಂಚ ಸಿಡಿಮಿಡಿಗೊಂಡರು.

ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ ಎಂ ಗಂಗಾಧರ ಸ್ವಾಮಿ, ಕಾರ್ಯಕರ್ತರ ಮನವಿಯನ್ನು ಕೇಂದ್ರ ರಾಷ್ಟ್ರಪತಿಗಳಿಗೆ ಕಳುಹಿಸಿ ಕೊಡಲಾಗುವುದು. ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಲು ಬಂದ ಅಪರ ಜಿಲ್ಲಾಧಿಕಾರಿಗಳನ್ನು ಮನವಿ ನೀಡದೆ ಕಾರ್ಮಿಕರು ವಾಪಸ್ ಕಳಿಸಿ ಅಗೌರವ ನೀಡಿದ್ದಾರೆ. ಸರ್ಕಾರಿದ ಉನ್ನತ ಅಧಿಕಾರಿಯೊಬ್ಬರನ್ನು ಈ ರೀತಿ ನಡೆಸಿಕೊಳ್ಳಬಾರದು. ನಾವೇ ಬರಬೇಕು ಎಂದು ಪಟ್ಟು ಹಿಡಿಯುವುದು ಸರಿಯಲ್ಲ. ನಾವು ರೈತರ ಸಮಸ್ಯೆ ಬಗ್ಗೆ ಸಭೆ ನಡೆಸುತ್ತಿದ್ದವು. ಅದನ್ನು ಮೊಟುಕುಗೊಳಿಸಿ ಮಧ್ಯದಲ್ಲೇ ಸ್ವೀಕರಿಸಲು ಬಂದಿದ್ದೇವೆ. ಕಾರ್ಯಕರ್ತರು ಈ ರೀತಿ ಸರ್ಕಾರಿ ಅಧಿಕಾರಿಗಳಿಗೆ ಅಗೌರವ ತೋರುವುದು ಅವರ ಘನತೆಗೆ ತಕ್ಕದ್ದಲ್ಲ” ಎಂದು ಸಿಡಿಮಿಡಿಕೊಂಡರು.
ಈ ವೇಳೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕಿ ಸುಧಾ ಪಲ್ಲಾಗಟ್ಟೆ “ನರೇಗಾ ಯೋಜನೆಗೆ ತಿದ್ದುಪಡಿ ತಂದು ಜಾರಿಗೊಳಿಸಿರುವ ವಿಬಿ ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಕೂಲಿಕಾರರ ಹಕ್ಕುಗಳನ್ನು ಕಸಿದುಕೊಳ್ಳಲಿದೆ. ಈ ಮುಂಚೆ ನೀಡುತ್ತಿದ್ದ ನೂರು ದಿನಗಳ ಬದಲಿಗೆ 125 ದಿನಗಳ ಆಸೆ ತೋರಿಸಿ ಅನುದಾನವನ್ನು ಕಡಿತಗೊಳಿಸಿ, ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹೊರೆಹೊರಿಸಿ ಆರೋಪ ಮಾಡಿ ಯೋಜನೆಯನ್ನು ಮುಚ್ಚುವ ಸಂಚು ನಡೆಸಿದೆ. ಈ ಮುಂಚೆ ಕೇಂದ್ರ ಶೇ.90ರಷ್ಟು ಅನುದಾನ ಭರಿಸುತ್ತಿತ್ತು. ಈಗ ಅದನ್ನು ಶೇ.60ಕ್ಕೆ ಇಳಿಸಿ ಯೋಜನೆಗೆ ಅಸಹಕಾರ ತೋರುತ್ತಿದೆ. ಈ ಮುಂಚೆ 50 ದಿನಗಳ ಕೆಲಸ ನೀಡುವ ಕೆಲಸ ನೀಡಲು ವಿಫಲವಾಗಿದ್ದ ಸರ್ಕಾರಗಳು 125 ದಿನಗಳು ಕೆಲಸ ನೀಡುತ್ತವೆ ಎನ್ನುವುದು ಹಾಸ್ಯಾಸ್ಪದ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನರೇಗಾ ಗ್ರಾಮೀಣ ಬದುಕಿನ ಜನರ ಉದ್ಯೋಗದ ಭದ್ರತೆ, ಆಹಾರ ಭದ್ರತೆ ನೀಡಿ ಮತ್ತು ವಲಸೆ ಹೋಗುವುದನ್ನು ತಡೆಯುತ್ತಿತ್ತು ಎಂದು ತಿಳಿಸಿದರು.
“ನಾವು ಬೆಳಗಿನಿಂದಲೂ ಮನವಿ ನೀಡಲು ಬಿಸಿಲಿನಲ್ಲಿ ಕಾಯುತ್ತಿದ್ದು ಜಿಲ್ಲಾಧಿಕಾರಿಗಳು ಬರದೇ ಬೇರೆ ಅಧಿಕಾರಿಗಳನ್ನು ಕಳಿಸಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಪೊಲೀಸರು ಫೋಟೋ ತೆಗೆದುಕೊಳ್ಳಲು ಬಿಡದೆ ಮಹಿಳಾ ಕಾರ್ಮಿಕರ ಮೇಲೆಯೇ ಮೊಬೈಲ್ ಕಸಿದುಕೊಳ್ಳುವ ಮೂಲಕ ದೌರ್ಜನ್ಯವೆಸಗಿದ್ದಾರೆ. ಈ ರೀತಿ ವರ್ತನೆಯನ್ನು ಸರ್ಕಾರದ ಅಧಿಕಾರಿಗಳು ತೋರಬಾರದು, ಜಿಲ್ಲಾಧಿಕಾರಿಗಳು ಕೂಡ ಮನವಿ ಸ್ವೀಕರಿಸುವ ವೇಳೆ ಅಸಹಕಾರ ತೋರಿದ್ದು, ಪೊಲೀಸರು ಕಾರ್ಮಿಕರೊಂದಿಗೆ ಗೂಂಡಾ ವರ್ತನೆ ತೋರಿದ್ದಾರೆ. ಕಾರ್ಮಿಕರೆಂದರೆ ಇವರಿಗೆ ಗೌರವ ಇಲ್ಲ” ಎಂದು ಕಿಡಿಕಾರಿದರು.

ಈ ವೇಳೆ ಮಾತನಾಡಿದ ಹರಪನಹಳ್ಳಿ ಗ್ರಾಕೂಸ್ ಸಂಚಾಲಕಿ ಶೃತಿ ವಿಬಿಜಿ ರಾಮ್ ಜಿ ಯೋಜನೆಯು ಗ್ರಾಮೀಣ ಕೂಲಿ ಕಾರ್ಮಿಕರನ್ನು ತುಳಿಯುವ ಯೋಜನೆಯಾಗಿದ್ದು, ಇದರಲ್ಲಿ ಯಾವುದೇ ಒಳ್ಳೆಯ ಬಡವರಿಗೆ ಅನುಕೂಲವಾಗುವಂತಹ ಯಾವುದೇ ಅಂಶಗಳಿಲ್ಲ. ನಾವು ಬೆಳಗಿನಿಂದ ಪ್ರತಿಭಟನೆ ನಡೆಸುತ್ತಿದ್ದು ಇಲ್ಲಿನ ಪೊಲೀಸರು ಗೂಂಡಾ ವರ್ತನೆಯನ್ನು ತೋರಿದ್ದಾರೆ. ಪುರುಷ ಸಿಬ್ಬಂದಿಗಳು ಕೂಡ ಮಹಿಳೆಯರ ಕೈಯಿಂದ ಮೊಬೈಲನ್ನು ಕಿತ್ತುಕೊಂಡು ಮನವಿ ಸಲ್ಲಿಸುವ ಫೋಟೋ ತೆಗೆಯಲು ಬಿಡದೇ ಅವಮಾನ ಮಾಡಿದ್ದಾರೆ. ಕಾರ್ಮಿಕರ ಎಂದರೆ ಕಿಂಚಿತ್ತು ಗೌರವವಿಲ್ಲದೆ ಪ್ರಾಣಿಗಳ ತರಹ ನಡೆಸಿಕೊಂಡಿದ್ದಾರ. ಈ ರೀತಿಯ ಪೊಲೀಸರ ಈ ರೀತಿಯ ವರ್ತನೆಯನ್ನು ನಾವು ಬೇರೆಡೆ ಎಲ್ಲೂ ನೋಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊಬೈಲ್ ಕಸಿದುಕೊಂಡು ದುರ್ವರ್ತನೆ ತೋರಿದ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಮಹಿಳಾ ಕಾರ್ಮಿಕರು ಅಕ್ಷೇಪ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿಬಿಜಿ ರಾಮ್ ಜಿ ಪ್ರತಿ ಸುಟ್ಟು ಸಂಯುಕ್ತ ಹೋರಾಟ ಕರ್ನಾಟಕ ಪ್ರತಿಭಟನೆ
ಪ್ರತಿಭಟನೆಯಲ್ಲಿ ಗ್ರಾಮೀಣ ಕೂಲಿಕಾರರ ಸಂಘಟನೆಯ ನಾಗರತ್ನ, ಗಂಗಮ್ಮ, ಲಕ್ಷ್ಮೀದೇವಿ, ಅನುಸೂಯಮ್ಮ, ಸುಶೀಲಮ್ಮ, ಶಾಂಭವಿ, ನಾಗರತ್ನಮ್ಮ, ಹುಲಿಗೆಮ್ಮ, ಮಹಾಲಕ್ಷ್ಮಿ, ಅಕ್ಕಮಹಾದೇವಿ, ಲಕ್ಷ್ಮೀಬಾಯಿ, ಆಶಾಭಾಯಿ, ರತ್ನಬಾಯಿ, ಮಲ್ಲಮ್ಮ, ರೇಣುಕಮ್ಮ, ಕೆಂಚಮ್ಮ, ಗೌರಮ್ಮ, ರತ್ನಮ್ಮ, ದುರ್ಗಮ್ಮ, ಜಯಮ್ಮ, ನೀಲಮ್ಮ, ಗಿರಿಜಾ , ಓಬನಾಯಕ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.





