2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ನಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಗೆ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ವಿಶೇಷ ಅನುದಾನಗಳನ್ನು ಘೋಷಿಸಲಾಗಿದೆ. ಆದರೆ ದಾವಣಗೆರೆ ಜಿಲ್ಲೆಗೆ ದೊಡ್ಡ ಮಟ್ಟದ ಅಭಿವೃದ್ಧಿ ಯೋಜನೆಗಳು ಅಥವಾ ವಿಶೇಷ ಅನುದಾನಗಳ ಕೊರತೆ ಕಂಡುಬಂದಿದ್ದು, ಜಿಲ್ಲೆಯ ಜನರಲ್ಲಿ ಮತ್ತು ವಿವಿಧ ಸಂಘಟನೆಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ನೀರಾವರಿ, ಕೈಗಾರಿಕೆ, ಜವಳಿ ಪಾರ್ಕ್, ಕೃಷಿ ಸಂಸ್ಕರಣೆ, ಐಟಿ ಬಿಟಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗಬೇಕೆಂದು ಒತಾಯಿಸಿದ್ದರು. ಆದರೆ ಈ ಬಗ್ಗೆ ಲೇಖಾನುದಾನದಲ್ಲಿ ಚಕಾರವಿಲ್ಲ, ಈಬಾರಿ ಬಜೆಟ್ನಲ್ಲಿ ಅದು ಸ್ಪಷ್ಟವಾಗಿ ಕಾಣಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸದ್ಯ ಬರಲಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣೆ ಕಾರಣದಿಂದಾದರೂ ಭರಪೂರ ಅನುದಾನ ಸಿಗಬಹುದು ಎನ್ನುವ ಜನರ ನಿರೀಕ್ಷೆ ಕೂಡ ಸುಳ್ಳಾಗಿದೆ. ದಾವಣಗೆರೆಗೆ ಕೊಟ್ಟಿದ್ದೆಷ್ಟು? ನಿರೀಕ್ಷೆಗಳೇನಿತ್ತು ಎನ್ನುವ ಬಗ್ಗೆ ಸಾರ್ವಜನಿಕರು ರೈತರು ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆ ಜಿಲ್ಲೆ ಕೈಗಾರಿಕೆ, ಕೃಷಿ ಹಾಗೂ ವ್ಯಾಪಾರದಲ್ಲಿ ಪ್ರಮುಖ ಸ್ಥಾನ ಹೊಂದಿದ ಪ್ರದೇಶವಾಗಿದೆ. ಒಂದು ಕಾಲದಲ್ಲಿ “ಕರ್ನಾಟಕದ ಮ್ಯಾಂಚೆಸ್ಟರ್” ಎಂದು ಪ್ರಸಿದ್ಧಿ ಪಡೆದಿದ್ದ ಈ ಜಿಲ್ಲೆಯಲ್ಲಿ ಹತ್ತಿ ಹಾಗೂ ಜವಳಿ ಕೈಗಾರಿಕೆಗಳು ಬಹಳಷ್ಟು ಇದ್ದವು. ಆದರೆ ಇತ್ತೀಚಿಗೆ 2000ನೇ ಇಸವಿ ನಂತರದ ವರ್ಷಗಳಲ್ಲಿ ಹಲವು ಹತ್ತಿ ಮಿಲ್ ಮುಚ್ಚಲ್ಪಟ್ಟಿದ್ದು ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಈ ಹಿನ್ನೆಲೆ ಹೊಸ ಕೈಗಾರಿಕೆಗಳು, ಕೈಗಾರಿಕಾ ಪಾರ್ಕ್ಗಳು ಹಾಗೂ ಹೂಡಿಕೆ ಯೋಜನೆಗಳನ್ನು ಸರ್ಕಾರ ಘೋಷಿಸಬೇಕು’ ಎಂದು ಉದ್ಯಮಿಗಳು ನಿರೀಕ್ಷಿಸಿದ್ದರು.

ಬಜೆಟ್ ನಿರೀಕ್ಷೆ ಕುರಿತು ಮಾತನಾಡಿದ್ದ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆ, ನೀರು ಮತ್ತು ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಇವುಗಳನ್ನು ಅಭಿವೃದ್ಧಿಪಡಿಸಬೇಕು. ಮತ್ತು ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಪ್ರತಿಕ್ರಿಯಿಸಿದ್ದರು. ಆದರೆ ದಾವಣಗೆರೆ ಕೈಗಾರಿಕೆ ವಲಯಗಳಿಗೆ ಈ ಬಾರಿ ಯಾವುದೇ ಅನುದಾನ ಹೆಚ್ಚಿನದಾಗಿ ಘೋಷಣೆಯಾಗಿಲ್ಲ.
ಕೃಷಿ ಕ್ಷೇತ್ರದಲ್ಲಿಯೂ ದಾವಣಗೆರೆ ಜಿಲ್ಲೆ ಪ್ರಮುಖ ಪಾತ್ರವಹಿಸಿದೆ. ಮೆಕ್ಕೆಜೋಳ, ಭತ್ತ ಮತ್ತು ವಿವಿಧ ಬೆಳೆಗಳನ್ನು ಉತ್ಪಾದಿಸುವ ರೈತರು ಕೃಷಿ ಸಂಸ್ಕರಣಾ ಘಟಕಗಳು, ಶೀತಗೃಹಗಳು, ಅಡಿಕೆ ಸಂಶೋಧನಾ ಕೇಂದ್ರ ಹಾಗೂ ಮಾರುಕಟ್ಟೆ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನ ನಿರೀಕ್ಷಿಸಿದ್ದರು. ಆದರೆ ಬಜೆಟ್ನಲ್ಲಿ ಈ ವಿಷಯಗಳಿಗೆ ಜಿಲ್ಲೆ ಮಟ್ಟದಲ್ಲಿ ಸ್ಪಷ್ಟ ಘೋಷಣೆ ಕಾಣದಿರುವುದು ರೈತರಲ್ಲಿ ನಿರಾಶೆ ಮೂಡಿಸಿದೆ.

ಮೆಕ್ಕೆಜೋಳ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ರೈತರಿಗೆ ಬಾಕಿ ನೀಡಲು ಕೇವಲ 100 ಕೋಟಿ ನಿಗದಿಪಡಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ವಹಿವಾಟು ನಡೆಸುವ ದಾವಣಗೆರೆಗೆ ಎಷ್ಟು ಸಿಹಿ ಪಾಲು ಸಿಗಬಹುದು ಎನ್ನುವುದೇ ಪ್ರಶ್ನಾರ್ಹ? ಜಿಲ್ಲೆಯ ಮತ್ತು ರಾಜ್ಯ ರೈತರ ಪೈಕಿ ಕೇವಲ ಶೇಕಡಾ ಹತ್ತರಷ್ಟು ಜನರಿಗೆ ಮಾತ್ರವೇ ನೂರು ಕೋಟಿ ಸಾಕಾಗಲಿದೆ ಎಂದು ರೈತ ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ.
ಬಜೆಟ್ -2026-27 ಕುರಿತು ಅಸಮಾಧಾನ ಹೊರ ಹಾಕಿರುವ ರೈತರು ಹಾಗೂ ರೈತ ಮುಖಂಡರು “ಜಿಲ್ಲೆಯ ನೀರಾವರಿ ಕಾಲುವೆಗಳಲ್ಲಿ ಕೊನೆಯ ಭಾಗಕ್ಕೆ ನೀರು ಹರಿಯುತ್ತಿಲ್ಲ. ಕಾಲುವೆಗಳನ್ನು ಇತ್ತೀಚೆಗೆ ದುರಸ್ತಿಗೊಳಿಸದಿರುವುದು ಇದಕ್ಕೆ ಕಾರಣವಾಗಿದೆ. ಬಜೆಟ್ ನಲ್ಲಿ ಕಾಲುವೆಗಳ ನವೀಕರಣ ಅಥವಾ ಹೊಸದಾಗಿ ನಿರ್ಮಾಣಕ್ಕೆ ಅನುದಾನ ನಿರೀಕ್ಷಿಸಿದ್ದೆವು. ಆದರೆ ನಿರೀಕ್ಷೆ ಸುಳ್ಳಾಗಿದೆ. ಹೊನ್ನಾಳಿ ತಾಲೂಕಿಗೆ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಮತ್ತು ಸಂಗ್ರಹಕ್ಕೆ ಯೋಜನೆ ಘೋಷಿಸಿರುವುದು ಸ್ವಾಗತಾರ್ಹ. ಅದೇ ರೀತಿಯಲ್ಲಿ ಈ ಹಿಂದೆ ಬಜೆಟ್ ನಲ್ಲಿ ಘೋಷಿಸಿದ್ದ ಮೆಕ್ಕೆಜೋಳ ಉತ್ಪನ್ನ ಸಂಸ್ಕರಣೆಯಡಿ ಜಿಲ್ಲೆಗೆ ಮೆಕ್ಕೆಜೋಳ ಸಂಸ್ಕಾರದ ಕೈಗಾರಿಕೆಗಳ ಅಗತ್ಯವಿದ್ದು ಅದನ್ನು ಘೋಷಿಸಬೇಕಾಗಿತ್ತು. ಇದರಿಂದ ಮೆಕ್ಕೆಜೋಳ ಬೆಳೆಯುವ ಜಿಲ್ಲೆಯ ರೈತರಿಗೆ ಅನುಕೂಲ ಹೆಚ್ಚುತಿತ್ತು” ಎಂದು ತಿಳಿಸಿದರು.
“ಗೋವಿನಕೋವಿ, ಹನುಮಸಾಗರ ಕೆರೆ ತುಂಬಿಸುವ ಯೋಜನೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಚನ್ನಗಿರಿ 41 ಕೆರೆಗಳ ತುಂಬಿಸುವ ಯೋಜನೆ ಹಾಗೂ ಚನ್ನಗಿರಿ ಹೊನ್ನನಾಯಕನಹಳ್ಳಿಯ ಕೆರೆ ಮತ್ತು ಹಳ್ಳ ಮತ್ತು ಕಗತೂರು ಹಳ್ಳದ ಚೆಕ್ ಡ್ಯಾಮ್ ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಇದೇ ರೀತಿಯ ಇತರ ಯೋಜನೆಗಳ ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲು ಈ ಯೋಜನೆಯಲ್ಲಿ ಕ್ರಮ ಕೈಗೊಳ್ಳಬೇಕಿತ್ತು” ಎಂದು ನಿರೀಕ್ಷೆ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ, ಐಟಿ–ಬಿಟಿ ಪಾರ್ಕ್ ಸ್ಥಾಪನೆ, ರಸ್ತೆ ಹಾಗೂ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೂ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ಸಿಗಲಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಂಘಟನೆಗಳು ಹಲವು ಬಾರಿ ಈ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ, ಈ ಬಾರಿ ಬಜೆಟ್ನಲ್ಲಿ ಅವುಗಳಿಗೆ ಸ್ಪಷ್ಟ ಸ್ಪಂದನೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತವಾಗುತ್ತದೆ.

ಬಜೆಟ್ನಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸುಮಾರು ₹100 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಘೋಷಿಸಲಾಗಿದೆ ಎನ್ನಲಾಗುತ್ತಿದ್ದು, ಬೇರೆ ಉಪ ಚುನಾವಣೆಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ಚುನಾವಣೆಯ ಆಶ್ವಾಸನೆ ಮತ್ತು ಭರವಸೆ ಹಿನ್ನೆಲೆಯಲ್ಲಿ ಸಾವಿರಾರು ಕೋಟಿಗಳು ಅನುದಾನ ಮಂಜೂರಾಗುತ್ತಿತ್ತು. ದಕ್ಷಿಣ ಕ್ಷೇತ್ರವು ರಸ್ತೆ ಒಳಚರಂಡಿ ಇತರ ಮೂಲಸೌಕರ್ಯಗಳಲ್ಲಿ ಬಹಳ ಹಿಂದುಳಿದಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕೇವಲ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದು ಯಾವ ಭಾಗಕ್ಕೂ ಸಾಕಾಗುವುದಿಲ್ಲ ಎನ್ನುವ ಅಸಮಾಧಾನ ಕೇಳಿಬಂದಿದೆ. ಆದರೆ ಇದು ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ಯಾವುದೇ ಮೂಲಭೂತ ಸೌಕರ್ಯಗಳ ಯೋಜನೆ ಘೋಷಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಅಭಿವೃದ್ಧಿಗೆ ಸಮಗ್ರ ಯೋಜನೆಗಳನ್ನು ರೂಪಿಸಿ ಹೆಚ್ಚಿನ ಅನುದಾನ ನೀಡಬೇಕೆಂದು ಸ್ಥಳೀಯರ ಒತ್ತಾಯವಾಗಿದೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳು ಘೋಷಣೆಯಾಗಿಲ್ಲ. ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲು ಘೋಷಿಸಲಾಗಿದ್ದು, ಪ್ರತಿನಿತ್ಯ ಸಾವಿರಾರು ರೋಗಿಗಳು ಸಂಚರಿಸುವ ಮತ್ತು ಬೇಡಿಕೆ ಇಟ್ಟಿದ್ದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ಕಾಲೇಜು ಮತ್ತು ಬಹು ದಿನಗಳ ಬೇಡಿಕೆಯಾದ ಎಂ ಆರ್ ಐ ಸ್ಕ್ಯಾನಿಂಗ್ ಬಗ್ಗೆ ಲೇಖಾನುದಾನದಲ್ಲಿ ಚಕಾರವಿಲ್ಲ. ಆಸ್ಪತ್ರೆ ಮೇಲ್ದರ್ಜೆಗೇರಿಸಲು ಹತ್ತಾರು ಕೋಟಿಗಳನ್ನು ಖರ್ಚು ಮಾಡುವ ಸರ್ಕಾರಕ್ಕೆ ಸಾವಿರಾರು ರೋಗಿಗಳು ಎಡತಾಕುವ ಜಿಲ್ಲಾ ಆಸ್ಪತ್ರೆಗೆ ಎಂಆರ್ಐ ಸ್ಕ್ಯಾನಿಂಗ್ ಮಷೀನ್ ಅನ್ನು ಪೂರೈಸುವುದು ಭಾರವಾಯಿತೇ? ಎಂದು ಜಿಲ್ಲೆಯ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕಲ್ಬುರ್ಗಿ ಮೈಸೂರಿನಲ್ಲಿರುವಂತಹ ಘಟಕಗಳಂತೆ ದಾವಣಗೆರೆ ಜಿಲ್ಲೆಗೆ ಕೂಡ ಜಯದೇವ ಹೃದ್ರೋಗ ಘಟಕ ಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ದಾವಣಗೆರೆಯಂತಹ ಮಧ್ಯ ಕರ್ನಾಟಕ ಪ್ರದೇಶಕ್ಕೆ ಜಯದೇವ ಘಟಕವನ್ನು ನೀಡಿದ್ದಲ್ಲಿ ಸುತ್ತಮುತ್ತಲಿನ ಹತ್ತಾರು ಜಿಲ್ಲೆಗಳ ಜನರಿಗೆ ಅನುಕೂಲವಾಗುತ್ತಿತ್ತು ಅಲ್ಲದೆ ಬೆಂಗಳೂರಿನಲ್ಲೇ ಇರುವ ಗೋವಿಂದರಾಜನಗರ ಕ್ಷೇತ್ರಕ್ಕೆ ಎರಡನೇ ಜಯದೇವ ಉದ್ಯೋಗ ಘಟಕವನ್ನು ಮಂಜೂರು ಮಾಡಿದ್ದು, ಈಗಾಗಲೇ ಬೆಂಗಳೂರಿಗೆ ಎರಡನೇ ಘಟಕ ನೀಡಿದರೂ ದಾವಣಗೆರೆಯಂತಹ ಜಿಲ್ಲೆಗಳಿಗೆ ಮಲತಾಯಿ ಧೋರಣೆಯನ್ನು ತೋರಿಸಿದೆ” ಎನ್ನುವ ಅಸಮಾಧಾನ ಮೂಡಿದೆ.
ಒಟ್ಟಾರೆ 2026–27ರ ಕರ್ನಾಟಕ ರಾಜ್ಯ ಬಜೆಟ್ನಲ್ಲಿ ದಾವಣಗೆರೆ ಜಿಲ್ಲೆಗೆ ನಿರೀಕ್ಷಿತ ಮಟ್ಟದ ಅನುದಾನ ಹಾಗೂ ಯೋಜನೆಗಳು ಘೋಷಿಸಲ್ಪಡದಿರುವುದು ಜನರಲ್ಲಿ ನಿರಾಶೆ ಉಂಟುಮಾಡಿದೆ. ಪೂರಕ ಬಜೆಟ್ ನಲ್ಲಿ ಜಿಲ್ಲೆಯ ಕೈಗಾರಿಕೆ, ಕೃಷಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಯೋಜನೆ ಅನುದಾನ ಘೋಷಿಸಬೇಕು ಎನ್ನುವ ಒತ್ತಾಯ ವಿವಿಧ ವಲಯಗಳಿಂದ ಕೇಳಿಬರುತ್ತಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಜೆಟ್ ನಲ್ಲಿ ಅಹಿಂದ ವರ್ಗಗಳಿಗೆ ಅನ್ಯಾಯ: ಎಸ್ಡಿಪಿಐ ಪ್ರತಿಭಟನೆ





