ಮೂರು ಎಕರೆಯಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಕಬ್ಬು ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಭಾಗಶಃ ಹಾನಿಗೀಡಾಗಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ವಂದಲ ಗ್ರಾಮದ ಮಡಿವಾಳಪ್ಪ ಹಂದಿಗನೂರ ಕುಟುಂಬಕ್ಕೆ ಸೇರಿದ ಸುಮಾರು 2 ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ. ಸದ್ಯ ನಷ್ಟದಲ್ಲಿರುವ ರೈತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಬೆಂಕಿ ತಗಲಿದ ಸುದ್ದಿ ತಿಳಿದ ಸುತ್ತಮುತ್ತಲಿನ ಜಮೀನುಗಳ ರೈತರು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ತಾಳಿಕೋಟಿ ಪಟ್ಟಣದಿಂದ ಅಗ್ನಿಶಾಮಕದಳದ ಸಿಬ್ಬಂದಿ ಬಂದು, ಬೆಂಕಿ ನಂದಿಸಿ ಉಳಿದ ಕಬ್ಬನ್ನು ಉಳಿಸಿದ್ದಾರೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಟಾವಿಗೆ ಬಂದಿದ್ದ ಕಬ್ಬನ್ನು ಕಾರ್ಖಾನೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿದೆ. ರೈತರ ವರ್ಷದ ಆದಾಯಕ್ಕೂ ಕೊಳ್ಳಿ ಇಟ್ಟಂತಾಗಿದೆ.
ಇದನ್ನೂ ಓದಿ: ಸೂಸೈಡ್ ಪಾಯಿಂಟ್ ಆಗುತ್ತಿದೆಯಾ ‘ನಮ್ಮ ಮೆಟ್ರೋ’?
ದೇವರಹಿಪ್ಪರಗಿ ತಾಲೂಕಿನಾದ್ಯಂತ ಕಳೆದ ಮೂರು ವರ್ಷದಿಂದ ವಿದ್ಯುತ್ ಅವಘಡದಿಂದ ಕಬ್ಬು ಬೆಳೆ ಸುಟ್ಟು ಹೋಗುವ ಪ್ರಕರಣಗಳು ನಡೆಯುತ್ತಲೇ ಇವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ತಕ್ಷಣವೇ ಪಟ್ಟಣದಲ್ಲಿ ಅಗ್ನಿಶಾಮಕ ದಳದ ಕಚೇರಿ ಆರಂಭಿಸಬೇಕು. ಜೊತೆಗೆ ರೈತರಿಗೆ ಆದ ನಷ್ಟವನ್ನು ತುಂಬಿಕೊಡಬೇಕು ಎಂದು ತಾಲೂಕಿನ ಕಬ್ಬು ಬೆಳೆಗಾರ ವಿಠಲ ಯಂಕಂಚಿ, ಮಹಾದೇವಪ್ಪ ಗೌಡ ಬಿರಾದಾರ (ಬೊಮ್ಮನ ಜೋಗಿ), ಮಹಾಂತೇಶ ಹಿರ್ಲಾಕೊಂಡ (ಮಣೊರ), ಆನಂದ ಪರದೇಶಿಮಠ, ನಾಗೇಂದ್ರ ಹಿಂಡಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.





