ಪ್ರತಿಯೊಂದು ಕುಟುಂಬ ಇಂದು ಪುಟ್ಟ ಮನೆಗಳಿಂದ ಹಿಡಿದು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಿದೆ. ಪ್ರತಿ ಸೂರಿನ ಹಿಂದೆ ಕಟ್ಟಡ ಕಾರ್ಮಿಕರ ಶ್ರಮ ಸಾಕಷ್ಟಿದೆ. ಒಂದರ್ಥದಲ್ಲಿ ಕಟ್ಟಡ ಕಾರ್ಮಿಕರೇ ಸಮಾಜದ ನಿಜಮಾದ ನಿರ್ಮಾತೃಗಳು ಎಂದು ಸಂಗಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಫಾ. ಸಂತೋಷ ಅಭಿಪ್ರಾಯಪಟ್ಟರು.
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸಂಗಮ ಸಂಸ್ಥೆ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಂಯೋಗದಲ್ಲಿ ಆಯೋಜಿಸಿದ್ದ ʼಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರʼದಲ್ಲಿ ಅವರು ಮಾತನಾಡಿದರು.
“ಮಾಲಿಕರು ದುಡ್ಡು ಕೊಡುತ್ತಾರೆ, ಆದರೆ ಶ್ರದ್ದೆಯಿಂದ ಸಂಪೂರ್ಣ ಜವಾಬ್ದಾರಿಯಿಂದ ಮನೆ, ಶಾಲೆ, ಆಸ್ಪತ್ರೆಗಳು, ಇತರೆ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವುದು ಈ ಶ್ರಮ ಜೀವಿಗಳು. ಇವರು ತಮಗೆ ರೋಗ-ರುಜಿನ ಬಂದರೆ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಾರೆಯೇ ಹೊರತು ಆಸ್ಪತ್ರೆಗೆ ಹೆಜ್ಜೆ ಇಡುವುದಿಲ್ಲ. ಇದರಿಂದ ಅವರು ಮಾರಣಾಂತಿಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚು. ಈ ಶ್ರಮಜೀವಿಗಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅತೀ ಅವಶ್ಯಕ” ಎಂದರು.
ಸಿಂದಗಿ ತಾಲೂಕು ಆಸ್ಪತ್ರೆಯ ಸ್ಟಾಫ್ ನರ್ಸ ರಫಿಕ್ ಮುಲ್ಲಾ ಮಾತನಾಡಿ, “ನಾಗರಿಕರು ಸಾಮಾನ್ಯವಾಗಿ ನಿರ್ಲಕ್ಷಿಸುವ ರಕ್ತದೊತ್ತಡ ಹಾಗೂ ಮಧುಮೇಹದಂತ ಕಾಯಿಲೆಗಳನ್ನು ಪ್ರಾರಂಭದಲ್ಲಿ ಕಂಡು ಹಿಡಿಯಲು ಇಂಥಹ ಶಿಬಿರಗಳು ಬಹಳ ಉಪಯುಕ್ತವಾಗಿವೆ” ಎಂದರು.
ಇದನ್ನೂ ಓದಿ: ವಿಜಯಪುರ | ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ವಿರೋಧಿಸಿ ರಂಗೋಲಿ ಚಳವಳಿ
ಸಿಂದಗಿ ಸಾರ್ವಜನಿಕ ಆಸ್ಪತ್ರೆಯ ಮಾನಸಿಕ ರೋಗದ ಆಪ್ತ ಸಮಾಲೋಚಕಿ ರುಬಿನಾ ನಧಾಫ್ ಮಾತನಾಡಿ, “ಮಾನಸಿಕ ಆರೋಗ್ಯವೆಂದರೆ ವ್ಯಕ್ತಿಯ ಭಾವನೆ, ಚಿಂತನೆ ಮತ್ತು ವರ್ತನೆ ಸರಿಯಾಗಿ ಕಾರ್ಯನಿರ್ವಹಿಸುವ ಸ್ಥಿತಿ. ಇದು ದೈಹಿಕ ಆರೋಗ್ಯದಷ್ಟೇ ಮಹತ್ವದ್ದಾಗಿದೆ. ಒತ್ತಡ, ಆತಂಕ, ದುಃಖ, ಭಯ, ಮತ್ತು ಸಾಮಾಜಿಕ ಒತ್ತಡಗಳು ಮಾನಸಿಕ ಆರೋಗ್ಯವನ್ನು ಹಾನಿ ಮಾಡಬಹುದು. ಸರಿಯಾದ ವಿಶ್ರಾಂತಿ, ಸಮತೋಲಿತ ಆಹಾರ, ವ್ಯಾಯಾಮ, ಸಮಾಲೋಚನೆ, ಮತ್ತು ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವ ಅಭ್ಯಾಸಗಳು ಮನಸ್ಸಿಗೆ ಶಾಂತಿ ತರುತ್ತವೆ. ಮಾನಸಿಕ ಸಮಸ್ಯೆಗಳು ಬಂದಾಗ ಅವನ್ನು ಮರೆಮಾಚಿ ಇರಿಸುವುದಕ್ಕಿಂತ ಸಹಾಯ ಕೇಳುವುದು, ತಜ್ಞರ ಸಲಹೆ ಪಡೆಯುವುದು ಮತ್ತು ಜೀವನಶೈಲಿ ಸುಧಾರಿಸುವುದು ಅತ್ಯಂತ ಮುಖ್ಯ. ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ವ್ಯಕ್ತಿ ಸಂತೋಷದಿಂದ, ಆತ್ಮವಿಶ್ವಾಸದಿಂದ ಜೀವನದ ಸವಾಲುಗಳನ್ನು ಎದುರಿಸಬಲ್ಲನು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ನಾಯಕ್, ಡಿಇಒ ಲಕ್ಷ್ಮೀ ತಳವಾಡ, ಗ್ರಾಮಸ್ಥರು, ಕಟ್ಟಡ ಕಾರ್ಮಿಕರು, ಮಹಿಳಾ ಸಂಘದ ಸದಸ್ಯರು, ಬಸವರಾಜ ಬಿಸನಾಳ, ವಿಜಯ ಬಂಟನೂರ ಉಪಸ್ಥಿತರಿದ್ದರು.





