ತಾಲೂಕಿನ ಹೊಸೂರು ಸಿದ್ದಾಪೂರ ಗ್ರಾಮದಲ್ಲಿ ನಡೆದ ಯಲ್ಲಮ್ಮ ದೇವಿ ಉತ್ಸವದ ಮೆರವಣಿಗೆಯ ವೇಳೆ ಕೆಲ ಯುವಕರು ಸಾರ್ವಜನಿಕ ಸ್ಥಳದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ.
ಮೆರವಣಿಗೆಯ ಸಂದರ್ಭದಲ್ಲೇ ಕೆಲವರು ಬಂದೂಕು ಹಾಗೂ ಪ್ರಾಣಿಗಳ ಬೇಟೆಗೆ ಬಳಸುವ ಮಾರಕಾಸ್ತ್ರಗಳನ್ನು ಪ್ರದರ್ಶಿಸಿರುವುದು ಗ್ರಾಮಸ್ಥರಲ್ಲಿ ಭೀತಿ ಮತ್ತು ಆತಂಕಕ್ಕೆ ಕಾರಣವಾಗಿದೆ. ಜನಸಂದಣಿ ಇರುವ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಕೃತ್ಯ ನಡೆದಿರುವುದರಿಂದ ಯಾವುದೇ ಅವಘಡ ಸಂಭವಿಸಬಹುದೆಂಬ ಆತಂಕ ವ್ಯಕ್ತವಾಗಿದೆ.
ಗ್ರಾಮದ ಮೌನೇಶ ನಾಯಕ್ ಸೇರಿದಂತೆ ಕೆಲವರು ಬಂದೂಕುಗಳನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿ ಗಾಳಿಯಲ್ಲಿ ಗುಂಡು ಹಾರಿಸಿದರೆಂದು ತಿಳಿದುಬಂದಿದೆ. ಗ್ರಾಮದ ಸುತ್ತಲು ಗುಡ್ಡಗಾಡು ಪ್ರದೇಶ ಇರುವುದರಿಂದ ಕಾಡು ಪ್ರಾಣಿಗಳಿಂದ ರಕ್ಷಣೆಗಾಗಿ ಕೆಲವರಿಗೆ ಬಂದೂಕುಗಳ ಪರವಾನಗಿ ಇರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಬಂದೂಕುಗಳನ್ನು ದೇವಿ ಉತ್ಸವದ ವೇಳೆ ಸಾರ್ವಜನಿಕವಾಗಿ ಪ್ರದರ್ಶಿಸಿ ಗುಂಡು ಹಾರಿಸಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ತಾಲ್ಲೂಕು ಘೋಷಣೆ ಒತ್ತಾಯಿಸಿ ಮುದಗಲ್ ಬಂದ್ ಸಂಪೂರ್ಣ ಯಶಸ್ವಿ
ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡುತ್ತಿದ್ದಂತೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.




