ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾಗಿರುವ ಸರಣಿ ನಾಪತ್ತೆ, ಕೊಲೆ ಹಾಗೂ ರಹಸ್ಯವಾಗಿ ಹೂತು ಹಾಕಿರುವ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದ ಅವಶೇಷಗಳನ್ನು ಪರೀಕ್ಷಿಸಿದ್ದ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯು ಎಸ್ಐಟಿ ಕೈ ಸೇರಿದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದ ಸ್ನಾನಘಟ್ಟದ ಸಮೀಪ ಮತ್ತು ಬಂಗ್ಲೆಗುಡ್ಡೆ ಕಾಡಿನಲ್ಲಿ ಮೃತದೇಹಗಳ ಅವಶೇಷಗಳನ್ನು ಹೊರತೆಗೆದಿದ್ದ ಎಸ್ಐಟಿ, ಅವುಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಿತ್ತು. ಇದೀಗ, ಎಫ್ಎಸ್ಎಲ್ ವರದಿಯನ್ನು ಎಸ್ಐಟಿಗೆ ಹಸ್ತಾಂತರಿಸಲಾಗಿದೆ. ದೊರೆತಿರುವ ಅವಶೇಷಗಳು ಪುರುಷರದ್ದು ಎಂದು ವರದಿ ತಿಳಿಸಿರುವುದಾಗಿ ವರದಿಯಾಗಿದೆ.
“ದೊರೆತಿದ್ದ ಅವಶೇಷಗಳ ಭೌತಿಕ ಲಕ್ಷಣಗಳು ಮತ್ತು ಅವುಗಳು ಪತ್ತೆಯಾದಾಗ ಇದ್ದ ಸ್ಥಿತಿಯ ಆಧಾರದಲ್ಲಿ ಅವುಗಳು ಪುರುಷರದ್ದು ಎಂಬುದು ಸ್ಪಷ್ಟವಾಗಿದೆ. ಆದರೆ ಈ ಅಂಶವು ವಂಶವಾಹಿ ಪರೀಕ್ಷೆಯನ್ನು ಆಧರಿಸಿಲ್ಲ. ಮೇಲಾಗಿ ಮೃತದೇಹಗಳ ಮೂಳೆಗಳಿಗೆ ಸಂಬಂಧಿಸಿದಂತೆ ಕುಟುಂಬದ ಯಾವುದೇ ಸದಸ್ಯರ ಡಿಎನ್ಎ ಮಾದರಿಗಳು ಲಭ್ಯವಿಲ್ಲ.ಆದ್ದರಿಂದ, ಅದು ಯಾರ ಮೃತದೇಹ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ” ಎಂದು ಎಫ್ಎಸ್ಎಲ್ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?
ಮೂರ್ನಾಲ್ಕು ತಿಂಗಳ ಹಿಂದೆ, ಪೊಲೀಸರ ಎದುರು ಬಂದಿದ್ದ ಚಿನ್ನಯ್ಯ, “ಧರ್ಮಸ್ಥಳದಲ್ಲಿ ನಾನೇ ಹಲವು ಮೃತದೇಹಗಳನ್ನು ಹೂತು ಹಾಕಿದ್ದೇನೆ. ಅಪರಾಧ ಕೃತ್ಯಗಳನ್ನು ಎಸಗಿ, ಶವಗಳನ್ನು ನನ್ನಿಂದ ಬಲವಂತವಾಗಿ ಹೂತುಹಾಕಿಸಲಾಗಿದೆ” ಎಂದು ದೂರಿದ್ದರು. ಅವರ ದೂರಿನ ಆಧಾರದ ಮೇಲೆ ಧರ್ಮಸ್ಥಳದಲ್ಲಿನ ಸರಣಿ ಸಾವುಗಳು ಮತ್ತು ರಹಸ್ಯ ಹೂತುಹಾಕಿದ ಪ್ರಕರಣದ ತನಿಖೆಗಾಗಿ ಸರ್ಕಾರವು ಎಸ್ಐಟಿ ರಚನೆ ಮಾಡಿತ್ತು. ಎಸ್ಐಟಿ ತಂಡವು ಚಿನ್ನಯ್ಯ ತೋರಿಸಿದ್ದ ಸ್ಥಳಗಳಲ್ಲಿ ಉತ್ಖನನ ನಡೆಸಿತ್ತು. ಗುರುತಿಸಲಾಗಿದ್ದ 6 ಮತ್ತು 11ಎ ಸ್ಥಳದಲ್ಲಿ ಮೃತದೇಹಗಳ ಅವಶೇಷಗಳು ಪತ್ತೆಯಾಗಿದ್ದವು.
ಇನ್ನು, ಇದೇ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೌಜನ್ಯ ಪ್ರಕರಣದ ಹೊರಾಟದ ನೇತೃತ್ವವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ. ಹಾಗೂ ವಿಠಲ್ ಗೌಡ ಅವರಿಗೆ ಎಸ್ಐಟಿ ನೋಟಿಸ್ ನೀಡಿತ್ತು. ಅಕ್ಟೋಬರ್ 27ರಂದು ಎಸ್ಐಟಿ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ. ಅಂದೇ, ಬೆಳ್ತಂಗಡಿ ತಾಲೂಕು ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ, ಪ್ರತಿಭಟನೆಯಲ್ಲಿ ಭಾಗಿಯಾಗುವ ಸಲುವಾಗಿ ವಿಚಾರಣೆಯನ್ನು ತಪ್ಪಿಸಿದ್ದಾರೆ ಎಂದು ಹೇಳಲಾಗಿದೆ. ಇದೀಗ, ನವೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಮತ್ತೊಂದು ನೋಟಿಸ್ ಜಾರಿ ಮಾಡಿದೆ.




