ಸಾಧಕನಿಗೆ ಸಾಧಿಸುತ್ತೇನೆಂಬ ಛಲ ಹಾಗೂ ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದು ಅಂತಾರಾಷ್ಟ್ರೀಯ ಟೆಕ್ವಾಂಡೋ ಕ್ರೀಡಾ ಪ್ರತಿಭೆ ಹಾಗೂ ಪ್ರಧಾನಿಯವರ ಮನಕಿ ಬಾತ್ 100 ಸಂಚಿಕೆಯಲ್ಲಿ ಪಾಲೊಂಡ ಕು. ಅದಿತಿ ಪಿ. ಕ್ಷಾತ್ರತೇಜ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನ್ನ ಈ ಸಾಧನೆಗೆ ಪ್ರೇರಕ ಶಕ್ತಿ ನನ್ನ ತಾಯಿ ಹಾಗೂ ನನ್ನ ತಂದೆ ನೀಡಿದ ಸಹಕಾರ. ಇಂದು ಪುರುಷರಿಗೆ ಸಿಗುವಷ್ಟು ಅವಕಾಶಗಳನ್ನು ಮಹಿಳೆಯರಿಗೂ ನೀಡಬೇಕು. ಮಹಿಳೆ ಪುರುಷ ಎಂಬ ತಾರತಮ್ಯ ಸಲ್ಲದು. ಸಾಧನೆ ಮಾಡಲು ಲಿಂಗ ತಾರತಮ್ಯ ಉಚಿತವಲ್ಲ. ನನ್ನ ತಾಯಿಯ ಅಪೇಕ್ಷೆಯಂತೆ ದೇಶದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವ ಮಹಾದಾಸೆ ನನ್ನದು. ಮಹಿಳೆ ಎಂದೂ ಅಬಲೆಯಲ್ಲ. ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಸ್ವಯಂ ರಕ್ಷಿಸಿಕೊಳ್ಳುವ ಅಗತ್ಯವಿದೆ. ಮಹಿಳೆ ಅಂತಹ ರಕ್ಷಣಾ ತಂತ್ರ ಹೊಂದಬೇಕೆಂಬುದು ನನ್ನ ಬಯಕೆ ಕೂಡಾ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಷಾ ಗದ್ದಗಿಮಠ ಮಾತನಾಡಿ, ಕ.ವಿ.ವ. ಸಂಘವು ರಾಜ್ಯೋತ್ಸವ ಆಚರಣೆ ಒಂದೇ ದಿನಕ್ಕೆ ಸೀಮಿತಗೊಳಿಸದೇ ತಿಂಗಳ ಪೂರ್ತಿ ಆಯೋಜಿಸಿದ್ದು ಅಭಿನಂದನೀಯ. ಸಂಯೋಜನೆಯಲ್ಲಿ ಪದಾಧಿಕಾರಿಗಳ ಶ್ರಮ ಅಧಿಕವಾದುದು. ವೈವಿಧ್ಯಮಯ ಕಾರ್ಯಕ್ರಮದ ಜೊತೆ ಮಕ್ಕಳ ಚಿತ್ರಕಲಾ ಸ್ಪರ್ಧೆ ವಿಶೇಷ ಮೆರುಗು ತಂದಿದ್ದು ಅರ್ಥಪೂರ್ಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಮಾರ ಅವಿನಾಶ ನೀಲಗುಂದ ಏಕಪಾತ್ರಾಭಿನಯದ ಮೂಲಕ ಪ್ರೇಕ್ಷಕರನ್ನು ಪ್ರೇಕ್ಷಕರನ್ನು ರಂಜಿಸಿದರು. ಧಾರವಾಡದ ಬಾಲಬಳಗ ಶಾಲೆಯ ಮಕ್ಕಳು ಪರಿಸರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಮಕ್ಕಳ ದಿನಾಚರಣೆ ಅಂಗವಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ 1 ರಿಂದ 10 ನೇ ತರಗತಿ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ನೀಡಲಾಯಿತು.
ಇದನ್ನೂ ಓದಿ ಧಾರವಾಡ | ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೇ ನಾಯಕತ್ವದ ಗುಣ ಬೆಳೆಸಿಕೊಳ್ಳಿ: ವೀರಣ್ಣ ಒಡ್ಡೀನ
ಡಾ. ಮಹೇಶ ಧ. ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರ್ವಹಿಸಿದರು. ಶಂಕರ ಕುಂಬಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ, ಶಿವಾನಂದ ಭಾವಿಕಟ್ಟಿ, ಪ್ರೊ. ಬಿ.ಎಚ್. ಕೋಟಿಗೌಡ್ರ, ಎಂ.ಎA. ಚಿಕ್ಕಮಠ, ಶಂಕರ ಘಟ್ನಟ್ಟಿ, ಸಿ.ಎಸ್. ಪಾಟೀಲಕುಲಕರ್ಣಿ, ಡಾ. ಸದಾಶಿವ ಮರ್ಜಿ, ಕೆ.ಎಂ. ಅಂಗಡಿ ಸೇರಿದಂತೆ ಮುಂತಾದವರಿದ್ದರು.





