ಭಾರತೀಯ ಭಾಷೆಗಳಲ್ಲಿ ಬರೆಯಲು, ಓದಲು, ಮಾತನಾಡಲು ಸುಂದರವಾದ ಭಾಷೆ ಕನ್ನಡ ಮಾತ್ರ. ಕನ್ನಡ ನುಡಿ ಕನ್ನಡಿಗರಾಡುವ ಕಸ್ತೂರಿ ಕನ್ನಡ ಭಾಷೆ. ಕಸ್ತೂರಿ ಅಷ್ಟೇ ಪರಿಮಳವಾದದು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಧಕರ ಸನ್ಮಾನ ಹಾಗೂ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೇಣುಕ ಅಮಲಝರಿ ಹೇಳಿದರು.
ಕವಿವ ಸಂಘವು ಸಂಘವು 136 ವರ್ಷಗಳಿಂದ ಕನ್ನಡ ಭಾಷೆ, ಸಂಸ್ಕೃತಿಯನ್ನು ಜೀವಂತವಾಗಿ ಉಳಿಯುವಂತೆ ಕಾರ್ಯ ಮಾಡುತ್ತಿದೆ. ಕನ್ನಡ ಕಟ್ಟುವ ಕಾರ್ಯದಲ್ಲಿ ಅನೇಕ ಮಹನೀಯರ ಜೊತೆ ಕವಿವ ಸಂಘದ್ದು ಪ್ರಧಾನ ಪಾತ್ರವಿದೆ. ನಾವು ಯಾವುದೇ ಭಾಷೆ ಕಲಿಯಲು ಅಡ್ಡಿ ಇಲ್ಲ. ಆದರೆ, ಮಾತೃಭಾಷೆ ಕನ್ನಡ ಮಾತ್ರ ಮೊದಲ ಆದ್ಯತೆಯಾಗಬೇಕು. ಭಾಷೆಗೆ ಯಾವುದೇ ಜಾತಿ ಇಲ್ಲ. ಭಾಷೆಯ ಸಂವರ್ಧನೆಗಾಗಿ ನಾವೆಲ್ಲ ಬದ್ಧತೆಯಿಂದ ಕಟ್ಟಾಳಾಗಿ ಕಾರ್ಯ ಮಾಡಬೇಕೆಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಕೋರಿಶೆಟ್ಟರ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಇತಿಹಾಸದ ಸಂಶೋಧನೆಯಲ್ಲಿ ಸಮಾಜಮುಖಿಯಾಗಿ ಕಾರ್ಯ ಮಾಡಿದ್ದರಿಂದ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಅಭಿಮಾನದ ಸಂಗತಿಯಾಗಿದೆ. ನನ್ನ ತವರು ನಾಡಿನಲ್ಲಿ ಸಿಕ್ಕ ಈ ಗೌರವ ದೊಡ್ಡದು. ಪ್ರಾಕ್ತನ ಇತಿಹಾಸ ಸಂಶೋಧನಾ ಕಾರ್ಯ ತುಂಬಾ ಕಠಿಣ. ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಇತಿಹಾಸದ ಕಾಲ ಗರ್ಭದಲ್ಲಿ ಹುದುಗಿ ಹೋದ ನೆಲೆಗಳನ್ನು, ವೈಜ್ಞಾನಿಕ ತಳಹದಿಯ ಮೇಲೆ ಉತ್ಖನನ ಮಾಡಿ, ಅಲ್ಲಿ ಸಿಗುವ ಪುರಾತತ್ವ ವಸ್ತುಗಳ ಆಧಾರದ ಮೇಲೆ ಆ ಪರಿಸರದ ಸಾಮಾಜಿಕ, ಆರ್ಥಿಕ, ಸ್ಥಿತಿ, ಜನ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ ಹುಬ್ಬಳ್ಳಿ | ಕ್ಷುಲ್ಲಕ ಕಾರಣಕ್ಕೆ ಜಗಳ; ಚಾಕು ಇರಿತ
ವೇದಿಕೆ ಮೇಲೆ ಕವಿವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ಬಾಬಾಜಾನ್ ಮುಲ್ಲಾ ಇದ್ದರು. ಪ್ರಾರಂಭದಲ್ಲಿ ಮುಕ್ತಾ ಕುಲಕರ್ಣಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ನವರಸ ಸ್ನೇಹಿತರ ವೇದಿಕೆಯಿಂದ ನಾಡು-ನುಡಿ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು. ಕೊನೆಯಲ್ಲಿ ಅನುಶ್ರೀ ಶೆಟ್ಟಿ ತಂಡದಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಡಾ ಮಹೇಶ ಧ. ಹೊರಕೇರಿ ವಂದಿಸಿದರು. ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ ಶೈಲಜಾ ಅಮರಶೆಟ್ಟಿ, ಎಂ.ಎಂ. ಚಿಕ್ಕಮಠ, ಕೆ.ಎಚ್. ನಾಯಕ, ಶಂಕರ ಘಟ್ನಟ್ಟಿ ಕಿರಣ್ ಸಿದ್ದಾಪುರ ಮುಂತಾದವರಿದ್ದರು.





