ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಅಣ್ಣಿಗೇರಿ ತಾಲೂಕನ್ನು ಪ್ರವೇಶಿಸದಂತೆ ಪ್ರತಿಬಂಧಕ ಆಜ್ಞೆಯನ್ನು ಜಾರಿ ಮಾಡಬೇಕೆಂದು, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮತ್ತು ಬಸವಪರ ಸಂಘಟನೆಗಳ ವತಿಯಿಂದ ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ಲಿಂಗಾಯತ ಮಠಾಧೀಶರ ಒಕ್ಕೂಟ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನ ರಾಜ್ಯದಲ್ಲೆಡೆ ಯಶಸ್ವಿಯಾಗಿ ನಡೆದಿದ್ದು, ಬಸವ ಸಂಸ್ಕೃತಿ ಅಭಿಯಾನ ಕುರಿತು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಟೀಕಿಸುತ್ತ, ಇದು ಮುಖ್ಯಮಂತ್ರಿ ಕೃಪಾಪೋಷಿತ ನಾಟಕ ಮಂಡಳಿಯಾಗಿದೆ. ಅಭಿಯಾನ ಆಯೋಜಿಸಿದ್ದ ಲಿಂಗಾಯತ ಮಠಾಧಿಪತಿಗಳ ಕುರಿತು ಈ ಸೂ…. ಮಕ್ಕಳಿಗೆ ನಾನ ಹೇಳಿದ್ರ ಹೇಳಬೇಕು. ಈ ಮಕ್ಕಳಿಗೆ ….ನಿಂದ ಹೊಡೆಯಬೇಕು ಎಂದು ಅಸಭ್ಯ, ಅಶ್ಲೀಲ, ಅವ್ಯಾಚ್ಯ, ಕೀಳುಮಟ್ಟದ ಭಾಷೆಯಲ್ಲಿ ನಿಂದಿಸಿದ್ದು ಇಡೀ ನಾಡಿನ ಬಸವಭಕ್ತರಿಗೆ ತೀವ್ರ ನೋವನ್ನುಂಟು ಮಾಡಿದೆ, ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಸಹಜಾನಂದ ಮಹಾರಾಜರ ಸಪ್ತಾಹದ ಕಾರ್ಯಕ್ರಮಲ್ಲಿ ಪಾಲ್ಗೊಳ್ಳಲು ನವಂಬರ್ 7, ರಂದು ಆಗಮಿಸಲಿದ್ದು, ಆ ಸಮಾರಂಭದ ಬಗ್ಗೆ ನಮ್ಮ ಯಾವುದೇ ತಂಟೆ ತಕರಾರುಗಳಿಲ್ಲ. ಅದು ಅತ್ಯಂತ ಯಶಸ್ವಿಯಾಗಿ ಜರುಗಲು ನಮ್ಮ ತುಂಬು ಹಾರೈಕೆ ಇದೆ. ಆದರೆ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಈ ಸಮಾರಂಭದಲ್ಲಿ ಭಾಗವಹಿಸಲು ಹಾಗೂ ಅಣ್ಣಿಗೇರಿ ತಾಲೂಕನ್ನು ಪ್ರವೇಶಿಸಲು ನಮ್ಮ ತೀವ್ರ ವಿರೋಧವಿದೆ.
ಕೆಲವು ವರ್ಷಗಳ ಹಿಂದೆ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕರನ್ನು ತಾಲೂಕಿನ ಹಳ್ಳಿಕೇರಿ ಗ್ರಾಮಕ್ಕೆ ಕರೆಯಿಸಿದಾಗ ಅಶಾಂತಿ, ಗಲಾಟೆ ಉಂಟಾಗಿ ಮೂರು ಕೊಲೆಗಳಾಗಿದ್ದು ಈಗಾಗಲೇ ಗೊತ್ತಿರುವ ವಿಷಯ. ಈ ಕಾರಣದಿಂದ ತಾಲೂಕಿನಲ್ಲಿ ಹಳ್ಳಿಕೇರಿ ಗ್ರಾಮ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ಅಣ್ಣಿಗೇರಿ ತಾಲೂಕಿಗೆ ಪ್ರವೇಶಿಸಬಾರದು ಎಂದು ನಿರ್ಬಂಧಿಸಿ ಶಾಶ್ವತವಾಗಿ ಆದೇಶ ಮಾಡಲು ವಿನಂತಿಸುತ್ತೇವೆ. ತಾವು ಈ ಕೂಡಲೇ ಆದೇಶ ಮಾಡದಿದ್ದರೆ ಮುಂದೆ ನಡೆಯುವ ಘಟನೆಗಳಿಗೆ ಸರಕಾರವೇ ಜವಾಬ್ದಾರಿಯಾಗುತ್ತದೆ. ತಾವು ಅವರ ಪ್ರವೇಶವನ್ನು ತಾಲೂಕಿಗೆ ನಿರ್ಬಂಧಿಸಿ ಮುಂದಾಗುವ ಸಂಭವನೀಯ ಅನಾಹುತಗಳನ್ನು ತಡೆಗಟ್ಟಲು ಆದೇಶ ಹೊರಡಿಸುತ್ತೀರೆಂದು ಅದಮ್ಯ ವಿಶ್ವಾಸ ಹೊಂದಿದ್ದೇವೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.





