ಓದುವ ಮಕ್ಕಳ ಕೈಯಲ್ಲಿ ಆಯುಧಗಳನ್ನು ಕೊಟ್ಟು ಬೀದಿಯಲ್ಲಿ ಬಿಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಅಕ್ಟೊಬರ್ 18ರಂದು ಧಾರವಾಡದ ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವತಿಯಿಂದ ಸಾರ್ವಜನಿಕ ಶಿಕ್ಷಣ ಮತ್ತು ಹಾಸ್ಟೆಲ್ ಗಳ ಬಲವರ್ಧನೆಗಾಗಿ ಏರ್ಪಡಿದ್ದ ಶೈಕ್ಷಣಿಕ ಜಾಥಾದಲ್ಲಿ ಸಾಹಿತಿ ರಂಜಾನ್ ದರ್ಗಾ ಮಾತನಾಡಿ ಕಳವಳಪಟ್ಟರು.
ಈ ವೇಳೆ ಸಾಹಿತಿ ಅವರು ಮಾತನಾಡುತ್ತಾ, ಯೋಗ್ಯ ಶಿಕ್ಷಣ, ಉದ್ಯೋಗ, ಆರೋಗ್ಯ ಸಿಗುತ್ತಿಲ್ಲವಾದ ಕಾರಣ ಖಾಸಗಿಕಾರಣ. ಸರ್ವರಿಗೂ ಸಮಾನ ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕು. ಹಿರಿಯರು ಮುಂದಿನ ಪೀಳಿಗೆಗೆ ಹೀನಾಯ, ಕೋಮುವಾದ, ಒಣ ಸಂಘರ್ಷ ಮತ್ತು ಅಸ್ಪೃಶ್ಯತೆಯನ್ನು ಆಚರಿಸುವ, ಹಿಂಸೆಯನ್ನು ಪ್ರಚೋದಿಸುವ ಸಮಾಜವನ್ನು ಬಿಟ್ಟು ಹೋಗುತ್ತಿದ್ದಾರೆ.
ಸಮುದಾಯದ ಅಧ್ಯಕ್ಷ ಬಿ ಐ ಈಳಗೇರಿ ಮಾತನಾಡಿ, ಪ್ರಜಾಪ್ರಭುತ್ವ, ಸಮಾಜವಾದವು ಸ್ವಾತಂತ್ರ್ಯದ ನಂತರ ಕಳೆದುಹೋಗಿವೆ. ಪ್ರಜಾಪ್ರಭುತ್ವ ಸತ್ಯನಾಶವಾಗಿದ್ದು, ಎಲ್ಲರು ಕೂಡಿ ಬಾಳುವ ಸಂಸ್ಕೃತಿ ಹರಿದುಹಂಚಿ ಹೋಗಿದೆ. ಎಲ್ಲ ರೀತಿಯ ಅನುಕೂಲಗಳು ಉಳ್ಳವರ ಪಾಲಾಗಿವೆ. ಹಾಗೆಯೇ ಸರ್ಕಾರವು ಹಾಸ್ಟೆಲ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರವಿಕುಮಾರ ಮಾಳಗಿ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನುಧಾನ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದ್ದು, ಬಿಜೆಪಿಯಿಂದ ಉನ್ನತ ಶಿಕ್ಷಣ ಹಾಳಾಗುತ್ತಿದೆ. ವರ್ಷಕ್ಕೆ 2000 ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಹೇಳಿದ್ದ ಪ್ರಧಾನಿ ಮೋದಿಯವರೇ ಯುವಕರು ಉದ್ಯೋಗಕ್ಕಾಗಿ ಧ್ವನಿ ಎತ್ತಿದಾಗ ಪಕೋಡ ಮಾರುವ ಸಲಹೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಗತಿಪರರರು, ಹೋರಾಟಗಾರರು ಭಾಗವಹಿಸಿದ್ದರು.




