ಸರ್ಕಾರವು ವರಕವಿ ದ.ರಾ. ಬೇಂದ್ರೆ ಅವರಿಗೆ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಬೇಕು ಎಂದು ಬೇಂದ್ರೆ ಟ್ರಸ್ಟನ ಅಧ್ಯಕ್ಷ ಡಾ. ಸರಜು ಕಾಟಕರ್ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಆಯೋಜಿಸಿದ್ದ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ದ.ರಾ. ಬೇಂದ್ರೆ ಅವರು ಸಾಹಿತ್ಯದ ಮೂಲಕ ಉತ್ತರ ಕರ್ನಾಟಕದ ಭಾಷೆ, ಸಂಸ್ಕೃತಿಯನ್ನು ನಾಡಿನ ತುಂಬ ಪಸರಿಸಿ, ಜನ ಮನ ಗೆದ್ದರು’. ಜೈನ ಕವಿಗಳು, ಶರಣರು, ದಾಸರು ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಯುವಜನರು ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದರು.
ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮಾತನಾಡಿ, ‘ಮಾತೃಭಾಷೆ ಮರಾಠಿಯನ್ನು ಬಿಟ್ಟು ಹೃದಯದ ಭಾಷೆಯಾದ ಕನ್ನಡದಲ್ಲಿ ಕವಿತೆಗಳನ್ನು ಬರೆಯುವ ಮೂಲಕ ಬೇಂದ್ರೆ ಅವರು ವರಕವಿ ಎಂದೇ ಪ್ರಖ್ಯಾತಿ ಗಳಿಸಿದರು’ ಎಂದು ಹೇಳಿದರು. ಭಾರ್ಗವಿ ಕುಲಕರ್ಣಿ, ಗಾಯತ್ರಿ ಟೊಣಪಿ ಮತ್ತು ತಂಡದವರು ಬೇಂದ್ರೆ ಗೀತ ಗಾಯನ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಐ.ಜಿ.ಸನದಿ, ಟ್ರಸ್ಟ್ ಸದಸ್ಯೆ ಶರಣ್ಣಮ್ಮ ಗೊರೇಬಾಳ, ವೈ.ಎಂ. ಯಾಕೊಳ್ಳಿ, ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ಅಶೋಕ ಶೆಟ್ಟರ, ಪ್ರಭು ಕುಂದರಗಿ, ಇಮಾಮಸಾಬ್ ವಲ್ಲೆಪ್ಪನವರ, ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ಉಪಸ್ಥಿತರಿದ್ದರು.





