ಒಂದು ಸಾವಿರಕ್ಕೂ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಪ್ರಸ್ತಾವನೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್) ಮತ್ತು ಆಲ್ ಇಂಡಿಯಾ ಡೆಮೋಕ್ರಟಿಕ್ ಯೂಥ್ ಆರ್ಗನೈಸೇಷನ್(ಎಐಡಿವೈಒ) ನೇತೃತ್ವದಲ್ಲಿ ಧಾರವಾಡ ನಗರದ ವಿವೇಕಾನಂದ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಸರ್ಕಾರದ ಈ ಜನವಿರೋಧಿ ನೀತಿಯ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಗಳ ಪ್ರತಿನಿಧಿಗಳ ನಿಯೋಗ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಐಎಂಎಸ್ಎಸ್ನ ಜಿಲ್ಲಾಧ್ಯಕ್ಷ ಮಧುಲತಾ ಗೌಡರ್ ಮಾತನಾಡಿ, “ರಾಜ್ಯದಲ್ಲಿ ಹೊಸದಾಗಿ 1000ಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಅಬಕಾರಿ ಇಲಾಖೆಯ ನಿರ್ಧಾರವು ಸಮಾಜಘಾತುಕವಾದುದು. ಈಗಾಗಲೇ ಮದ್ಯಪಾನದ ದುಶ್ಚಟದಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಒಂದೆಡೆ ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜೀವನ ತತ್ತರಿಸುತ್ತಿದ್ದರೆ ಇನ್ನೊಂದೆಡೆ ನೈತಿಕ ಮೌಲ್ಯ ಕುಸಿಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹೆಣ್ಣು ಮಕ್ಕಳ ಮೇಲಿನ ಅಪರಾಧಗಳ ಹೆಚ್ಚಳಕ್ಕೆ ಮದ್ಯಪಾನವೂ ಒಂದು ಮುಖ್ಯ ಕಾರಣವೆಂದು ವರದಿಗಳು ಸಾಬೀತುಪಡಿಸುತ್ತಲೇ ಇವೆ. ಕೌಟುಂಬಿಕ ದೌರ್ಜನ್ಯಗಳಂತೂ ಇನ್ನೂ ಕ್ರೂರರೂಪ ಪಡೆದುಕೊಳ್ಳುತ್ತಿವೆ. ಹೆಣ್ಣು ಮಕ್ಕಳು ಬೆವರು ಸುರಿಸಿ ದುಡಿದ ಹಣವನ್ನು ಗಂಡಂದಿರು ಕುಡಿತಕ್ಕಾಗಿ ಹೊಡೆದು ಬಡಿದು ಕಸಿದುಕೊಳ್ಳುವುದು ಈಗಲೂ ಮನೆ ಮನೆಯ ಕಥೆಯಾಗಿದೆ. ಇದರಿಂದಾಗಿ ಎಷ್ಟೋ ಹೆಣ್ಣುಮಕ್ಕಳು ಹಾಗೂ ಅವರ ಮಕ್ಕಳು ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಉಪವಾಸ ಮಲಗುವಂತಾಗಿದೆ” ಎಂದರು.
“ಮಹಿಳೆಯರ ಸಬಲೀಕರಣ ಮಾಡುತ್ತೇವೆಂದು ಘಂಟಾಘೋಷವಾಗಿ ಹೇಳುತ್ತಿರುವ ರಾಜ್ಯ ಸರ್ಕಾರ ಈಗ ಅದೇ ಮಹಿಳೆಯರ ಮೇಲಿನ ಕ್ರೂರ ಅಪರಾಧಗಳಿಗೆ ಕಾರಣವಾಗುತ್ತಿದೆ. ಸಂಪೂರ್ಣ ಮದ್ಯ ನಿಷೇಧಕ್ಕಾಗಿ ಮಹಿಳಾ ಸಮುದಾಯ ಕೇಳಿಕೊಳ್ಳುತ್ತಿದ್ದರೆ ಸರ್ಕಾರ ಮಾತ್ರ ಇನ್ನೂ ಹೆಚ್ಚು ಮದ್ಯದಂಗಡಿಗಳಿಗೆ ಪರವಾನಗಿ ಕೊಡುತ್ತಿದೆ. ಎಲ್ಲ ಸರ್ಕಾರಗಳ ಈ ಜನವಿರೋಧಿ ಧೋರಣೆಯನ್ನು ಮಹಿಳಾ ಸಮುದಾಯ ಅರ್ಥ ಮಾಡಿಕೊಂಡು ಒಕ್ಕೊರಲಿನಿಂದ ಇದರ ವಿರುದ್ಧ ಬೀದಿಗಿಳಿಯಬೇಕು” ಎಂದು ಕರೆ ನೀಡಿದರು.

ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿಶಂಕರಗೌಡ ಮಾತನಾಡಿ, “ಇಂದು ಹಲವಾರು ಸಮಾಜಘಾತುಕ ಕೃತ್ಯಗಳಿಗೆ ಮದ್ಯಪಾನ ಎಡೆ ಮಾಡಿಕೊಡುತ್ತಿದೆ. ಉದ್ಯೋಗದ ಗ್ಯಾರಂಟಿ ಬದಲಿಗೆ ಮದ್ಯದ ಗ್ಯಾರಂಟಿ ಕೊಡುತ್ತಿರುವ ಸರ್ಕಾರದ ನೀತಿ ದುರದೃಷ್ಟಕರ. ಕುಡಿತದಿಂದ ಎಷ್ಟೋ ಎಳೆಯ ಜೀವಗಳು ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಮೌಲ್ಯಯುತ ಜೀವನ ನಡೆಸಬೇಕಾದ ಯುವಜನರು ಕುಡಿತದ ಚಟಕ್ಕೆ ಬಲಿಯಾಗಿ ಹಾದಿ ತಪ್ಪಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಣ್ಣ ಮಕ್ಕಳೂ ಕೂಡ ಕುಡಿಯುವುದನ್ನು ಕಲಿಯುತ್ತಿದ್ದಾರೆ. ಇವೆಲ್ಲವನ್ನು ನಾವು ತೀವ್ರ ಆತಂಕದಿಂದ ಗಮನಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಮಾಜದ ನೈತಿಕ ಸ್ವಾಸ್ಥ್ಯವನ್ನು ಉಳಿಸಿ-ಬೆಳೆಸುವುದನ್ನು ಬಿಟ್ಟು, ಜನಸಾಮಾನ್ಯರ ನೈತಿಕ ಬೆನ್ನೆಲುಬನ್ನು ಮುರಿಯಲು ಕಾರಣವಾಗುವ ಮದ್ಯಪಾನವನ್ನು ಸರ್ಕಾರ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಖೇದಕರ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ನಿರ್ಗತಿಕ ಕುಟುಂಬಗಳಿಗೆ ವಸತಿ ಹಕ್ಕು ಕಲ್ಪಿಸುವಂತೆ ಗ್ರಾಕೂಸ್ ಆಗ್ರಹ
“ಸರ್ಕಾರದ ಈ ಜೀವವಿರೋಧಿ ನಿಲುವಿನ ವಿರುದ್ಧ ವಿದ್ಯಾರ್ಥಿ-ಯುವಜನರು ಉನ್ನತ ನೀತಿ, ನೈತಿಕತೆ, ಮೌಲ್ಯಪ್ರಜ್ಞೆಯೊಂದಿಗೆ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು” ಎಂದರು.
ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೊಕರೆ, ಸಂಘಟನೆಗಳ ಪದಾಧಿಕಾರಿಗಳಾದ ರಣಜಿತ್ ದೂಪದ್, ದೇವಮ್ಮ ದೇವತ್ಕಲ್, ಪ್ರೀತಿ ಸಿಂಗಾಡಿ, ಮುರುಗಮ್ಮ ಗರಗದ್, ಶೋಭಾ, ಹಲೀಮಾ ಶೇಖ್, ಈರಣ್ಣ ಸಂಗೊಳ್ಳಿ, ಕಿರಣ ಕಳ್ಳಿಮನಿ ಸೇರಿದಂತೆ ವಿದ್ಯಾರ್ಥಿ-ಯುವಜನರು, ವಿವಿಧ ಹಳ್ಳಿಗಳ, ಬಡಾವಣೆಗಳ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





