ಅವಹೇಳಕಾರಿ ಹೇಳಿಕೆ ನೀಡುವ ಮೂಲಕ ನ್ಯಾಯಾಲಯದಿಂದ ಛೀಮಾರಿಗೆ ಒಳಪಟ್ಟಿರುವ ಮಹಾರಾಷ್ಟ್ರದ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿಬಂಧಕ ಆಜ್ಞೆಯನ್ನು ಜಾರಿ ಮಾಡಬೇಕು ಎಂದು ಜಿಲ್ಲೆಯ ಬಸವಪರ ಸಂಘಟನೆಗಳು ಹಾಗೂ ಸಮಸ್ತ ಲಿಂಗಾಯತರ ವತಿಯಿಂದ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಈ ವೇಳೆ ಬಸವಕೇಂದ್ರದ ಬಸವಂತಪ್ಪ ತೋಟದ ಮಾತನಾಡಿ, ಕನ್ನೇರಿ ಮಠದ ಸ್ವಾಮೀಜಿ ಕೀಳುಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ, ಪ್ರಚೋದನಕಾರಿ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಲ್ಲ. ಅವಹೇಳನಕಾರಿ ಭಾಷೆ ಬಳಸಿರುವುದು ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿಲ್ಲ. ಇದೇ ನವೆಂಬರ್ 5ರಂದು ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮಕ್ಕೆ ಸ್ವಾಮೀಜಿ ಬರುತ್ತಿದ್ದಾರೆ. ಈಗಾಗಲೇ ‘ನೀವು ಮಾತನಾಡುವುದು ನಿಲ್ಲಿಸಿ. ಮೌನವಾಗಿ ಮಠದಲ್ಲಿ ಧ್ಯಾನ ಮಾಡಿ’ ಎಂದು ಘನ ನ್ಯಾಯಾಲಯವು ಅವರಿಗೆ ಛೀಮಾರಿ ಹಾಕಿದೆ. ಅಂತಹ ಸ್ವಾಮೀಜಿಯನ್ನು ಧಾರವಾಡ ಜಿಲ್ಲೆಗೆ ಬರದಂತೆ ತಡೆಯಬೇಕು ಎಂದು ಅಗ್ರಹಿಸಿದರು.
ವಕೀಲ ಕೆ. ಎಸ್. ಕೋರಿಶೆಟ್ಟರ್ ಮಾತನಾಡಿ, ಕನ್ನೇರಿ ಶ್ರೀಗಳು ಆಡಬಾರದ ಮಾತನ್ನಾಡಿಯೂ ಕೂಡ ತಮ್ಮದೇ ಸರಿ ಎಂಬುವ ರೀತಿಯಲ್ಲಿ ಸಮರ್ಥನೆಯ ಉದ್ಧಟತನಕ್ಕೆ ಹೋಗುತ್ತಿದ್ದಾರೆ. ಸ್ವಾಮಿಗಳು ತಪ್ಪನ್ನು ಒಪ್ಪದಿದ್ದರೆ ಈ ಪ್ರಕ್ಷುಪ್ತ ಪರಿಸ್ಥಿತಿ ಮುಂದುವರೆಯುತ್ತದೆ. ಸಾಮಾನ್ಯ ಮನುಷ್ಯ ಕೂಡ ಮಾತನಾಡಬಾರದ ಮಾತು ಆಡಿದ ಸ್ವಾಮಿಗಳು ಧಾರವಾಡ ಜಿಲ್ಲೆಗೆ ಬರದಂತೆ ನೋಡಿಕೊಳ್ಳಬೇಕು. ಅವರು ಬಂದರೆ ಲಿಂಗಾಯತರ ಮನಸ್ಸಿಗೆ ನೋವಾಗುತ್ತದೆ. ಬಸವ ಸಂಘಟನೆ ಮತ್ತು ಬಸವ ಸಂಸ್ಕೃತಿ ಉತ್ಸವದ ಬಗ್ಗೆ ಹಗುರವಾಗಿ ಮಾತನಾಡಿದುದರ ಹಿಂದೆ ಕಾಣದ ಕೈಗಳಿವೆ. ಮನುವಾದಿಗಳು ಸಮಾಜವಾದಿ ಚಿಂತನೆಯ ಅಂಬೇಡ್ಕರ್ ವಾದ ಮತ್ತು ಬಸವವಾದ ವಿರುದ್ಧ ತಂತ್ರವನ್ನು ನಮ್ಮವರಿಂದಲೇ ಮಾಡಿಸುತ್ತಿದ್ದಾರೆ. ಇದು ಸ್ವಾಮಿಗಳ ಹೇಳಿಕೆಯನ್ನು ಬೆಂಬಲಿಸಿ ಮಾತನಾಡುವವರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಸಿ. ಜಿ. ಪಾಟೀಲ್ ಮಾತನಾಡಿ, ವೈದಿಕ ಮನಸ್ಥಿತಿಯ ಸ್ವಾಮಿಗಳನ್ನು ಲಿಂಗಾಯತ ಸಮಾಜ ಗಮನಿಸುತ್ತಿದೆ. ಒಂದು ವೇಳೆ ಈ ಸ್ವಾಮಿಗಳು ಧಾರವಾಡ ಜಿಲ್ಲೆಗೆ ಬಂದರೆ ಅನಿವಾರ್ಯವಾಗಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಅವಹೇಳನಕಾರಿಯಾಗಿ ಮಾತನಾಡಿದ ಕನೇರಿ ಸ್ವಾಮಿಗಳಿಗೆ ಬೆಂಬಲವಾಗಿ ಸೂಚಿಸುತ್ತಿರವ ರಾಜಕಾರಣಿಗಳಿಗೂ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಕನ್ನೇರಿ ಸ್ವಾಮಿಗಳು ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲೆಗೆ ಕಾಲಿಡದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಅದರ ಕುರಿತು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆಯೂ ತಿಳಿದಿಲ್ಲ ಎಂದರು.
ಕರ್ನಾಟಕದ ಉಚ್ಛನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಕೆಯಾದ ಅರ್ಜಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಆಣ್ಣಿಗೇರಿ ತಾಲೂಕು ಹಳ್ಳಿಕೇರಿ ಗ್ರಾಮದಲ್ಲಿ ಸಹಜಾನಂದ ಮಹಾರಾಜರ ಸಪ್ತಾಹದ ಕಾರ್ಯಕ್ರಮಗಳು ನ. 5 ರಿಂದ ನ. 7 ರವರೆಗೆ ನಡೆಯಲಿವೆ. ನ. 7ರ ಕಾರ್ಯಕ್ರಮದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಭಾಗವಹಿಸಲಿದ್ದಾರೆಂದು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಗ್ರಾಮದ ಕಾರ್ಯಕ್ರಮಗಳು ನಡೆಯಲಿ ಯಶಸ್ವಿಯಾಗಲಿ, ನಮ್ಮ ತಕರಾರು ಇಲ್ಲ. ಆದರೆ, ಈ ಕಾರ್ಯಕ್ರಮದಲ್ಲಿ ಈ ಸ್ವಾಮಿಗಳು ಭಾಗವಹಿಸಲು ಹಾಗೂ ಧಾರವಾಡ ಜಿಲ್ಲೆಯನ್ನು ಪ್ರವೇಶಿಸಲು ನಮ್ಮ ವಿರೋಧವಿದೆ.
ಕನ್ನೇರಿ ಶ್ರೀಗಳು ಜಿಲ್ಲೆ ಪ್ರವೇಶಿಸಿದರೆ ಆಶಾಂತತೆ, ಗಲಭೆ ಉಂಟಾಗಬಹುದು. ಲಿಂಗಾಯತರು ಪ್ರತಿಭಟನೆಗೆ ಇಳಿಯುತ್ತೇವೆ. ಅದಕ್ಕಾಗಿ, ಮುನ್ನೆಚ್ಚರಿಕೆ ಕ್ರಮಗಳು ಅವಶ್ಯವಾಗಿವೆ. ಆದ್ದರಿಂದ ಈ ಕನ್ನೇರಿ ಮಠದ ಸ್ವಾಮಿಗಳು ಧಾರವಾಡ ಜಿಲ್ಲೆ ಪ್ರವೇಶಿಸಬಾರದು ಎಂದು ಶಾಶ್ವತವಾಗಿ ಆದೇಶ ಮಾಡಲು ವಿನಂತಿಸಿದೆ. ಕೂಡಲೇ ಆದೇಶ ಮಾಡದಿದ್ದರೆ ಮುಂದೆ ನಡೆಯುವ ಅಹಿತಕರ ಘಟನೆಗಳಿಗೆ ಸರ್ಕಾರವೇ ಜವಾಬ್ದಾರಿ ಆಗುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.





