ಮಾರ್ಚ್ 27ರಂದು ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬದಲಾವಣೆಗೆ ಒತ್ತಾಯಿಸಿ ಪತ್ರಿಕಾಗೋಷ್ಠಿ ನಡೆಸಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೀಡಿದ ಹೇಳಿಕೆಗೂ, ಧಾರವಾಡ ಮುರುಘಾಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಪತ್ರಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು ಭಾಗವಹಿಸಿದ್ದರು ಮತ್ತು ದಿಂಗಾಲೇಶ್ವರ ಸ್ವಾಮಿಗಳು ಮಾತು ಶುರುವಾದ ಕೆಲ ಹೊತ್ತಿನಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಆ ಹಿನ್ನಲೆಯಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರ ಕುರಿತು ದಿಂಗಾಲೇಶ್ವರ ಸ್ವಾಮಿಗಳ ವಿವಾದಾಸ್ಪದ ವೈಯಕ್ತಿಕ ಹೇಳಿಕೆಗೂ ಧಾರವಾಡ ಪ್ರತಿಷ್ಠಿತ ಮುರುಘಾಮಠಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ನಮಗೂ ಒಮ್ಮತವಿಲ್ಲವೆಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಅಧೀಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ.
ಮುರುಘಾಮಠ ಲೋಕಕಲ್ಯಾಣಾರ್ಥ ಸ್ಥಾಪನೆಯಾಗಿದ್ದು, ಮಠದ ಹಿರಿಯ ಶ್ರೀಗಳು ಮದಥಣಿ ಶ್ರೀಗಳು, ಮುರುಘಾರಾಜೇಂದ್ರ ಶ್ರೀಗಳು, ಮೃತ್ಯುಂಜಯ ಅಪ್ಪಗಳ, ಮಹಾಂತ ಅಪ್ಪಗಳ ಹಾಗೂ ಹಲವಾರು ಧೀಮಂತರ ಹಾಗೂ ಭಕ್ತಾಧಿಗಳ ಪರಿಶ್ರಮದ ಫಲದಿಂದ ಸ್ಥಾಪಿತ ಹಾಗೂ ಸರ್ವಸಮಾಜದ ಭಕ್ತರು ನಡೆದುಕೊಳ್ಳುವ ಪವಿತ್ರ ಕ್ಷೇತ್ರವಾಗಿದೆ. ಶ್ರೀಕ್ಷೇತ್ರ ವಿದ್ಯಾದಾನ, ದಾಸೋಹಕ್ಕೆ ಹಾಗೂ ಸರ್ವಸಮಾಜದ ಏಳಿಗೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ವೀರಶೈವ ಲಿಂಗಾಯತ ಮಠವಾಗಿದ್ದರು ಸಹ ಸರ್ವಸಮಾಜದ ಭಕ್ತರು ಗದ್ದುಗೆಯ ಆರಾಧಕರಿದ್ದು ಮುರುಘಾಮಠ ಯಾವದೇ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ ಹಾಗೂ ರಾಜಕೀಯ ವಿಷಯಗಳಲ್ಲಿ ಭಾಗವಹಿಸುವದಿಲ್ಲ, ಯಾವುದೇ ಅಭ್ಯರ್ಥಿ ಆಯ್ಕೆ ಆಯಾ ಪಕ್ಷದ ವರಿಷ್ಠರು ಹಾಗೂ ಅವರ ಪಕ್ಷದ ತೀರ್ಮಾನ ಇದಕ್ಕೆ ಮಠಮಾನ್ಯಗಳಿಗೂ ಯಾವದೇ ಸಂಬಂಧವಿರುವದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 27ಕ್ಕೆ ದಿಂಗಾಲೇಶ್ವರ ಸ್ವಾಮಿಗಳು, ಸ್ವಾಮಿಗಳ ಸಭೆ ಅಂತ ಮೂರುಸಾವಿರ ಮಠಕ್ಕೆ ಕರೆದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರ ಬದಲಾವಣೆ ಕುರಿತು ನೀಡಿದ ಹೇಳಿಕೆ ದಿಂಗಾಲೇಶ್ವರ ಸ್ವಾಮಿಗಳ ವೈಯಕ್ತಿಕ ಹೇಳಿಕೆ ಆಗಿದ್ದು ಹಾಗೂ ಹೇಳಿಕೆಯು ವಿವಾದಾಸ್ಪದವಾಗಿದ್ದು ಸದರಿ ಹೇಳಿಕೆಗೂ ನಮಗೂ ಹಾಗೂ ಮುರುಘಾಮಠಕ್ಕೆ ಯಾವುದೇ ಸಂಬಂಧವಿರುವದಿಲ್ಲ. ಇಂತಹ ಹೇಳಿಕೆಗಳು ಅವರವರ ವೈಯಕ್ತಿಕ ಹೇಳಿಕೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಪತ್ರಿಕಾ ಪ್ರಕಟಣೆ ನೀಡಿ ಸ್ಪಷ್ಟಿಕರಣ ನೀಡಿದ್ದಾರೆ.





