ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದ RSS ಪಥಸಂಚಲನದ ವೇಳೆ ಭದ್ರತಾ ಕರ್ತವ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ (ಪಿಎಸ್ಐ) ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆಗೈದ ಘಟನೆ ಅ. 19ರಂದು ನಡೆದಿದೆ.
ಮಹಿಳಾ ಪಿಎಸ್ಐ ಪೊಲೀಸ್ ಸಿಬ್ಬಂದಿ ಜೊತೆಗೂಡಿ ಜನರನ್ನು ಪರಿಶೀಲಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಬೈಕ್ ನಲ್ಲಿ ಬಂದಿದ್ದ, ದ್ಯಾಮನಗೌಡ ಕುಲಕರ್ಣಿ (31) ಎಂಬಾತನು, ಏಕಾಏಕಿ ತಡೆದು, ಲೇ ಎಂದು ಏಕವಚನದಿಂದ, “ನನ್ನ ಮೇಲೆ ಕೇಸ್ ಮಾಡಿ ತ್ರಾಸು ಕೊಡುತೀರಿ?, ನಿಮ್ಮನ್ನ ಸುಮ್ಮನೇ ಬಿಡುದಿಲ್ಲಾ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಒಮ್ಮೆಲೇ ಮಹಿಳಾ ಪಿಎಸ್ಐ ಉಮಾದೇವಿ (37) ಅವರ ಹಣೆಗೆ ಬೈಕ್ ಕೀಲಿಯಿಂದ ಹೊಡೆದು, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿ, ಬಲಗಾಲಿಗೆ ಕಚ್ಚಿ ಗಂಭೀರ ಗಾಯ ಮಾಡಿದ್ದಾನೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ದ್ಯಾಮನಗೌಡ ತಾಲೂಕಿನ ಗುಡಿಸಾಗರ ನಿವಾಸಿ ಎಂದು ತಿಳಿದುಬಂದಿದ್ದು, ಆರೋಪಿಯ ಸಹೋದರಿಯು ಹಿಂದೆ ನವಲಗುಂದ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರ ಸಿಟ್ಟಿನಿಂದ ಪೊಲೀಸರ ಮೇಲೆ ದ್ವೇಷ ಸಾಧಿಸಿದ್ದಾನೆ. ಅಷ್ಟೇ ಅಲ್ಲದೆ ಮಹಿಳಾ ಪಿಎಸ್ಐ’ಗೆ ಜೀವಬೆದರಿಕೆ ಹಾಕಿದ್ದಾನೆ ಎಂದು ಎಫ್ಐಆರ್ ಪ್ರತಿಯಲ್ಲಿ ದಾಖಲಾಗಿದೆ.
ಘಟನೆಯ ನಂತರ ಪಿಎಸ್ಐ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಿರಿಯ ಅಧಿಕಾರಿಗಳು ಪ್ರಕರಣ ದಾಖಲಿಸಿ, ಆರೋಪಿ ದ್ಯಾಮನಗೌಡ ಕುಲಕರ್ಣಿಯನ್ನು ಬಂಧಿಸಿದ್ದಾರೆ. ಗಾಯಗೊಂಡಿರುವ ಮಹಿಳಾ ಪಿಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.





