ಅರ್ಹತೆಯ ಆಧಾರದ ಮೇಲೆ ನೈತಿಕತೆ ಬಿಡದೆ ಉದ್ಯೋಗಕ್ಕಾಗಿ ಹೋರಾಟ ಮಾಡಿ, ನಿಮ್ಮ ಜೀವನವನ್ನು ಅರ್ಥಪೂರ್ಣ ಮಾಡಿಕೊಳ್ಳಿ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜಾ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಉದ್ಯೋಗಾಕಾಂಕ್ಷಿ ಪ್ರತಿನಿಧಿಗಳ ಆಗ್ರಹ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟ ನಡೆದ ಹಾಗೆ ಹಾಗೂ ದೆಹಲಿಯ ಗಡಿಗಳನ್ನು ಬಂದ್ ಮಾಡಿ ನಮ್ಮ ರೈತರು ನಡೆಸಿದ ಹೋರಾಟದಂತೆ ವ್ಯವಸ್ಥಿತವಾಗಿ ಗಟ್ಟಿ ಹೋರಾಟವನ್ನು ನಡೆಸಿ ನಾವು ಗೆಲ್ಲಬೇಕು. ಉದ್ಯೋಗವು ಕೇವಲ ಒಬ್ಬ ವ್ಯಕ್ತಿಗೆ ಕೊಡುವ ಸೌಲಭ್ಯ ಅಲ್ಲ. ಅದು ಇಡೀ ಕುಟುಂಬಕ್ಕಾಗಿ. ಉದ್ಯೋಗಿಯು ಇಡೀ ಸಮಾಜಕ್ಕೆ ಸಲ್ಲಿಸುವ ಸೇವೆ ಉದ್ಯೋಗವಾಗಿದೆ. ಸಮಾಜದಿಂದ ಶಿಕ್ಷಣ ಪಡೆದ ನಾವು ಸಮಾಜಕ್ಕಾಗಿ ಬದುಕಬೇಕು ಎಂದರು.
ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ಮಾತನಾಡಿ, ಶಾಸಕರು, ಸಂಸದರ ಸಂಬಳವನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಆದರೆ, ಉದ್ಯೋಗ ಕೊಡಲು ಹಣ ಇಲ್ಲ ಎನ್ನುತ್ತಾರೆ. ಉದ್ಯೋಗದ ಭರವಸೆ ಕೇವಲ ಚುನಾವಣೆಯಲ್ಲಿ ಗೆಲ್ಲಲು ಮಾತ್ರವೇ?” ಎಂದು ಪ್ರಶ್ನಿಸಿದರು. ಜನತೆ ಮೌನವಾಗಿದ್ದಾರೆ ಎಂದು ಇಷ್ಟ ಬಂದಂತೆ ಮಾಡಲಾಗುವುದಿಲ್ಲ, ಯುವಜನರಲ್ಲಿ ನಿರಾಶೆ ಮೂಡಿದಷ್ಟು ಸಮಾಜದ ಶಾಂತಿ ಕದಡುತ್ತದೆ. ಸರ್ಕಾರಗಳು ಎಚ್ಚೆತ್ತು ಉದ್ಯೋಗದ ಭದ್ರತೆ ಕೊಡಬೇಕು ಎಂದರು.
ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, “ಉದ್ಯೋಗಾಕಾಂಕ್ಷಿಗಳು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟವನ್ನು ರೂಪಿಸಲು ತಮ್ಮದೇ ಹೋರಾಟ ಸಮಿತಿಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಸಲಹೆಗಾರ ಡಾ. ಜಿ. ಎಸ್. ಕುಮಾರ್ ಮಾತನಾಡಿ, “ಉದ್ಯೋಗ ಕೊಡುವುದು ಸರ್ಕಾರದ ಕೆಲಸ. ಅದು ನಮ್ಮ ಯುವಜನರ ಮೂಲಭೂತ ಹಕ್ಕಾಗಬೇಕು ಎಂದರು.
ಈ ಸುದ್ಧಿ ಓದಿದ್ದೀರಾ? ಹುಬ್ಬಳ್ಳಿ | RSS ಕಚೇರಿಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಜಿಲ್ಲಾ ನಾಯಕ ಭವಾನಿಶಂಕರ್ ಗೌಡ ಸ್ವಾಗತಿಸಿ ಪರಿಚಯಿಸಿದರು. ಹೋರಾಟ ಸಮಿತಿಯ ರಾಜ್ಯ ನಾಯಕ ಸಿದ್ದಲಿಂಗ ಬಾಗೇವಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಹೋರಾಟ ಸಮಿತಿಯ ಕಾರ್ಯದರ್ಶಿ ಚೆನ್ನಬಸವ ಜಾನೇಕಲ್ ಅಧ್ಯಕ್ಷತೆ ವಹಿಸಿದ್ದರು. ಹೋರಾಟ ಸಮಿತಿಯ ಮುಖಂಡ ವೀರೇಶ್ ನರೇಗಲ್ ವೇದಿಕೆಯಲ್ಲಿ ಇದ್ದರು. ಹೋರಾಟ ಸಮಿತಿ ಮುಖಂಡ ವಿನಯ್ ಸಾರಥಿ ಕಾರ್ಯಕ್ರಮ ನಡೆಸಿಕೊಟ್ಟರು.





