ಮಹಿಳೆಯರು, ದಲಿತರು, ಮಕ್ಕಳು ಹಾಗೂ ಶೋಷಿತ ವರ್ಗದವರಿಗೆ ನ್ಯಾಯ ದೊರೆತಾಗ ಮಾತ್ರ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥಬರುತ್ತದೆ ಎಂದು ಅಂಜುಮನ್ ಕಾಲೇಜಿನಲ್ಲಿ ಏರ್ಪಡಿಸಿದ್ದ “ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಎ.ಎಸ್. ಬಳ್ಳಾರಿ ಉಪನ್ಯಾಸ ನೀಡಿದರು.
ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ, ಧಾರವಾಡದ, ಐಕ್ಯೂಎಸಿ, ರಾಜ್ಯಶಾಸ್ತ್ರ ವಿಭಾಗ, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕ 1 ಮತ್ತು 2ರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ ದೊರೆಯಬೇಕು. ನ್ಯಾಯವನ್ನು ಪಡೆಯಲು ಇರುವ ವಿವಿಧ ಅವಕಾಶಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ಕಾನೂನು ಸೇವೆಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಐಕ್ಯೂಎಸಿ ಸಂಯೋಜಕ ಡಾ. ಎನ್.ಬಿ. ನಾಲತವಾಡ ಮಾತನಾಡಿ, ಸಮಾಜದ ದುರ್ಬಲ ವರ್ಗದವರು, ಮಹಿಳೆಯರು, ಕಾರ್ಮಿಕರು ಹಾಗೂ ಶೋಷಣೆಗೆ ಒಳಗಾದ ಸಂತ್ರಸ್ತರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸುವ ಮೂಲಕ ವ್ಯಕ್ತಿಗೌರವವನ್ನು ಕಾಪಾಡುವಂತೆ ಕರೆ ನೀಡಿದರು. ಉಚಿತ ಕಾನೂನು ಸೇವೆಗಳನ್ನು ಪಡೆಯಲು ಕಾನೂನು ಸೇವಾ ಕೇಂದ್ರಗಳನ್ನು ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದನ್ನೂ ಓದಿ ಧಾರವಾಡ | ಟಿಪ್ಪು ಸುಲ್ತಾನ್ ಯಾವತ್ತೂ ಬ್ರಿಟೀಷರಿಗೆ ಗುಲಾಮನಾಗಿ ಬದುಕಲಿಲ್ಲ: ಪ್ರಮೀಳಾ ಮೇಟಿ
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಾಗರಾಜ ಕನಕನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್.ಕೆ. ಜಾಧವ್ (ಶಿಕ್ಷಣ ವಿಭಾಗದ ಮುಖ್ಯಸ್ಥರು) ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸವಿತಾ ವಾಲಿಕರ ವಂದಿಸಿದರು. ಉರ್ದು ವಿಭಾಗದ ಮುಖ್ಯಸ್ಥೆ ಡಾ. ಬಿಬಿಆಯಿಶಾ ಚಕೋಲಿ, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





