ಒಟ್ಟು 11 ಸದಸ್ಯ ಬಲ ಹೊಂದಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಳಲಿ ಗ್ರಾಮ ಪಂಚಾಯತಿಯಲ್ಲಿ ಸೆ. 17ರಂದು ಚುನಾವಣೆ ನಡೆದಿದ್ದು, ಗುರುಪಾದಪ್ಪ ನಿಂಗಪ್ಪ ಇಚ್ಚಂಗಿ 7 ಮತಗಳನ್ನು ಪಡೆದು ಜಯಶಾಲಿಯಾದರು. ಸುಮಿತ್ರಾಬಾಯಿ ಪ್ರಕಾಶ ಕದಂ 4 ಮತಗಳನ್ನು ಪಡೆದು ಪರಾಭವಗೊಂಡರು. ಇದರಿಂದ ಗುರುಪಾದಪ್ಪ ನಿಂಗಪ್ಪ ಇಚ್ಚಂಗಿ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಜಗದೀಶ್ ಕಮ್ಮಾರ ಘೋಷಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಗುರುಪಾದಪ್ಪ ಇಚ್ಚಂಗಿ ಮಾತನಾಡಿ, ಮಳಲಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕುಂಕುರು, ತೀರ್ಥ ಹಾಗೂ ಮಳಲಿ ಗ್ರಾಮಗಳ ಸರ್ವ ಸದಸ್ಯರ ಸಹಕಾರದೊಂದಿಗೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇದಕ್ಕೆ ಗ್ರಾಮದ ಹಿರಿಯರ ಸಹಕಾರ ಮುಖ್ಯ ಎಂದರು. ಇದೇ ವೇಳೆ ನೂತನ ಅಧ್ಯಕ್ಷರನ್ನು ಪಂಚಾಯತಿ ಆಡಳಿತ ಮಂಡಳಿ ಹಾಗೂ ಗುರು-ಹಿರಿಯರ ವತಿಯಿಂದ ಸನ್ಮಾನಿಸಿ, ಗೌರವಿಸಿದರು.
ಸದಸ್ಯ ಗುರುನಾಥಗೌಡ ಪಾಟೀಲ ಮಾತನಾಡಿ, ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ, ನಾವೆಲ್ಲ ಒಂದೇ. ಎಲ್ಲರೂ ಸೇರಿಕೊಂಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಲಹೆ ಪಡೆದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸೋಣ. ಮೂರೂ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ರೂಪಿಸಲು ಪಣತೊಡೋಣ ಎಂದು ಕರೆಕೊಟ್ಟರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಪ್ರತಿ ಪೊಲೀಸ್ ಪೇದೆಯು ಜನಪರ, ಜನಸ್ನೇಹಿ ಆಗಬೇಕು: ಆಲೋಕ್ ಕುಮಾರ್
ಈ ಸಂದರ್ಭದಲ್ಲಿ ಸದಸ್ಯರಾದ ಗುರುನಾಥಗೌಡ ಬ. ಪಾಟೀಲ, ಮಂಜುನಾಥ ಗಂ. ದೊಡ್ಡಗೌಡ್ರ, ಮಾನಪ್ಪ ದ್ಯಾ. ಬಡಿಗೇರ, ಲಕ್ಷ್ಮೀ ಗು. ಕಳ್ಳಿಮನಿ, ಚನ್ನವ್ವ ಕ. ಸಂಶಿ, ಪಿಡಿಒ ನಾಗರಾಜ ಉಳ್ಳೆಸೂರ ಸೇರಿದಂತೆ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.





