ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯು ಇಡೀ ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದು, ಎಲ್ಲಾ ಜನರು ಜಾತಿ, ಮತ, ಪಕ್ಷಭೇದ ಮರೆತು ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಸಂತ್ರಸ್ತರ ಪರವಾಗಿ ನಿಂತು ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಯುವ ಘಟಕದ ಸದಸ್ಯರು ಡಿ. 28ರಂದು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಭೇಟಿ ಕೊಟ್ಟು, ಸಾಂತ್ವನ ಹೇಳಿದ್ದರು.
ಇದೀಗ ಈ ಕುರಿತು ಈದಿನ.ಕಾಮ್ ಜತೆಗೆ ಸಿ. ಜಿ. ಪಾಟೀಲ ಮಾತನಾಡಿ, ಜಾತಿ ಕಾರಣಕ್ಕಾಗಿ ಹೆತ್ತ ಮಗಳನ್ನೇ ಕೊಲೆ ಮಾಡಿದ ಘಟನೆಯಿಂದ ನಾಗರೀಕ ಸಮಾಜವೇ ತಲೆತಾಗ್ಗಿಸುವಂತಾಗಿದೆ. ಇದನ್ನು ಮನುಷ್ಯರಾದ ಎಲ್ಲರೂ ಖಂಡಿಸಬೇಕಿದೆ. ತಪ್ಪು ಮಾಡಿದವರು ಯಾರೇ ಆಗಿದ್ದರೂ ತಕ್ಕ ಶಿಕ್ಷೆ ನೀಡಬೇಕು. ನೊಂದ ವಿವೇಕಾನಂದ ದೊಡಮನಿ ಕುಟುಂಬದ ಜತೆಗೆ ಪ್ರಜ್ಞಾವಂತ ಲಿಂಗಾಯತ ಸಮುದಾಯ ಇರುತ್ತದೆ. ಬಸವಣ್ಣ 12ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹ ಮಾಡುವ ಮೂಲಕ ಜಾತಿರಹಿತವಾದ ನವಸಮಾಜವನ್ನು ಕಟ್ಟಿದ್ದರು. ಅಂತಹ ನೆಲದಲ್ಲಿ ನಡೆಯುತ್ತಿರುವ ಈ ರೀತಿಯ ಹೇಯ ಕೃತ್ಯಗಳಿಂದ ಮಾನವ ಕುಲವೇ ಭಯದ ವಾತಾವರಣದಲ್ಲಿ ಮುಳುಗಿದೆ ಎಂದು ವಿಷಾಧಿಸಿದರು.
ಅರುಣ ಮೂಡಿ ಮಾತನಾಡಿ, ನಮ್ಮ ಕರ್ನಾಟಕವು ಸಾಂಸ್ಕೃತಿಕವಾಗಿ, ವೈಚಾರಿಕವಾಗಿ, ಧಾರ್ಮಿಕವಾಗಿ ಹಲವಾರು ಮೌಲ್ಯಗಳನ್ನು ಒಳಗೊಂಡಿರುವ ರಾಜ್ಯವಾಗಿದೆ. ಇಲ್ಲಿ ಅನೇಕ ಶರಣರು, ಸಂತರು, ದಾಸರು, ಸಾಹಿತಿಗಳು, ಮಹನೀಯರು ಬಂದು ಹೋಗಿದ್ದಾರೆ. ಸಂವಿಧಾನ ಬಂದು ವರ್ಷಗಳು ಕಳೆದರೂ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದು ದುಃಖಕರವಾದ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು.
ಇದನ್ನೂ ಓದಿ ಕ್ಯಾಲೆಂಡರ್ ಬದಲಾದರೂ ಬದಲಾಗಲೊಲ್ಲದ ಮನಸುಗಳು; ಸಮಾನತೆಯ ಪಾಠ ಕೊಟ್ಟ ನಾಡು ಮಾಡುತ್ತಿರುವುದೇನು?
ಅಭಿಷೇಕ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಸಮಾಜವು ಸಾಗಬೇಕಿತ್ತು, ಅದರ ವಿರುದ್ಧ ಮುಖಮಾಡಿರುವುದನ್ನು ಗಮನಿಸಿದರೆ, ನಾಗರೀಕ ಸಮಾಜಕ್ಕೆ ಧಕ್ಕೆ ತಂದಂತಾಗಿದೆ. ಈ ರೀತಿಯ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿದರು. ಈ ಸಂದರ್ಭದಲ್ಲಿ ಭೀಮನಗೌಡ, ಗುರುರಾಜ್ ಅವರಾದಿ, ಇನ್ನಿತರರು ಇದ್ದರು.





