ಇಂದಿನ ತಂತ್ರಜ್ಞಾನದ ಕಾಲದಲ್ಲಿ ಜನರು ಮನೆಮದ್ದುಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಈ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಬೇಕಾದ ಅಗತ್ಯವಿದೆ. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಹಿರಿಯರು ಹೇಳುವ ಅನುಭವದ ನುಡಿಗಳಲ್ಲಿ ಆರೋಗ್ಯದ ಮಹತ್ವವಿದೆ. ಈ ಸತ್ಯವನ್ನು ಅರಿತು ವಿದ್ಯಾರ್ಥಿಗಳಾದವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಲ್. ಪಾಟೀಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮತ್ತು ಆರೋಗ್ಯ ಮಂಟಪವು ಆಯೋಜಿಸಿದ್ದ ಮಂಪಟದ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ನಾಣ್ಣುಡಿಯನ್ನು ನೆನಪಿಸುತ್ತಾ, ಈ ಜಗತ್ತಿನಲ್ಲಿ ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ, ವಿದ್ಯಾರ್ಥಿಗಳು ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ನಿಮ್ಮ ಅಭಿರುಚಿಯ ಕ್ಷೇತ್ರಗಳನ್ನು ಆಯ್ದುಕೊಂಡು ಉನ್ನತ ಮಟ್ಟದ ಸಾಧನೆಯನ್ನು ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮನಗುಂಡಿಯ ಬಸವಾನಂದ ಸ್ವಾಮೀಜಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಎಲ್ಲ ವ್ಯಕ್ತಿಗಳ ಆರೋಗ್ಯದ ಪಾತ್ರವು ಬಹು ಮುಖ್ಯವಾಗುತ್ತದೆ. ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ವ್ಯಕ್ತಿಯು ದೈಹಿಕವಾಗಿ, ಮಾನಸಿಕವಾಗಿ, ಆಧಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಉತ್ತಮ ಆರೋಗ್ಯವನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆಯು ವ್ಯಕ್ತಿಯ ಸಮಗ್ರ ಆರೋಗ್ಯದ ಪರಿಕಲ್ಪನೆಯನ್ನು ತಿಳಿಸಿದ್ದು, ಎಲ್ಲ ಮಕ್ಕಳು ಅವುಗಳನ್ನು ತಪ್ಪದೇ ಪಾಲಿಸಬೇಕು.
ಈ ಜಗತ್ತಿನಲ್ಲಿ ಜನ್ಮತಳೆದ ಯಾವ ಮಗುವು ದಡ್ಡನಲ್ಲ. ಪ್ರತಿ ಮಗುವಿನಲ್ಲೂ ಅದ್ಭುತ ಶಕ್ತಿ ಸಾಮರ್ಥ್ಯಗಳು ಅಡಕವಾಗಿರುತ್ತವೆ. ಪ್ರತಿ ಮಗು ತಮ್ಮ ನಾಲಿಗೆಯ ರುಚಿ ಬಯಸುವ ಪದಾರ್ಥಗಳಿಂದ ದೂರವಿದ್ದು ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ಸಮಗ್ರ ವಿಕಾಸವನ್ನು ಸಾಧಿಸಬೇಕಾಗಿದೆ. ಪ್ರತಿಯೊಬ್ಬರೂ ಬೆಳಗ್ಗೆ ಬೇಗನೇ ಏಳುವ, ಬೆಳಗ್ಗೆ ಎದ್ದು ಕೂಡಲೇ ಚಹಾದ ಬದಲಾಗಿ ನೀರು ಕುಡಿಯುವ, ಸ್ವಲ್ಪ ಶಾರೀರಿಕ ಪರಿಶ್ರಮ ಪಡುವ, ಕಾಲ ಕಾಲಕ್ಕೆ ಉತ್ತಮ ಆಹಾರ ಸೇವಿಸುವ, ಸೂಕ್ತ ಸಂದರ್ಭದಲ್ಲಿ ಉಪವಾಸ ಮಾಡುವ ಮತ್ತು ದೃಢವಾದ ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಬೆಳೆಯಬೇಕೆಂದು ನೀಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಾವೆಲ್ಲರೂ ಉತ್ತಮ ಆಹಾರವನ್ನು ಸೇವಿಸುವ ಜೊತೆಗೆ ನಾನು ಧರಿಸುವ ಬಟ್ಟೆ, ವಾಸಿಸುವ ಮನೆ, ಬಳಸುವ ವಾಹನ ಮುಂತಾದ ವಿಷಯಗಳು ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಹಾನಿ ಮಾಡದಂತಿರಬೇಕು. ಇಂದು ನಾವು ಬಳಸುತ್ತಿರುವ ಪಾಲಿಸ್ಟರ್ ಬಟ್ಟೆಗಳು ನೀರನ್ನು ಸೇರಿ ಪುನಃ ನಮ್ಮ ದೇಹವನ್ನು ಪ್ರವೇಶಿಸುತ್ತವೆ ಇದರಿಂದಾಗಿ ಮುಂದಿನ ತಲೆಮಾರು ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ ಎಂದರು.
ವಿಜ್ಞಾನ ಮತ್ತು ಆರೋಗ್ಯ ಮಂಟಪದ ಸಂಚಾಲಕ ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ವಿಜ್ಞಾನ ಮತ್ತು ತಂತ್ರಜ್ಞಾನವು ತುಂಬಾ ವೇಗವಾಗಿ ಬೆಳೆಯುತ್ತಿದ್ದು ಆ ವೇಗಕ್ಕೆ ಅನುಗುಣವಾಗಿ ನಾವು ನಮ್ಮ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದರು.
ಈ ವೇಳೆ ಪ್ರೊ. ಸಿ. ಎನ್. ಆರ್. ರಾವ್ ರಾಷ್ಟ್ರೀಯ ಶಿಕ್ಷಕ ಬಹುಮಾನ ವಿಜೇತ ಡಾ. ಲಿಂಗರಾಜ ರಾಮಾಪೂರ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ ಉಪಸ್ಥಿತರಿದ್ದರು. ಡಾ. ಈರಣ್ಣ ಇಂಜಗನೇರಿ ಸ್ವಾಗತಿಸಿದರು. ಡಾ. ರಾಜಶೇಖರ ಬಶೆಟ್ಟಿ ವಂದಿಸಿದರು. ಚಂದ್ರಶೇಖರ ಬಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಶಿವಾನಂದ ಭಾವಿಕಟ್ಟಿ, ಸತೀಶ ತುರುಮರಿ, ಡಾ. ಶೈಲಜಾ ಅಮರಶೆಟ್ಟಿ, ವಿಜ್ಞಾನ ಮತ್ತು ಆರೋಗ್ಯ ಮಂಟಪದ ಸಲಹಾ ಸಮಿತಿಯ ಸದಸ್ಯರು, ಆರ್. ಎಲ್. ಎಸ್. ಹಾಗೂ ಎಲ್. ಇ. ಎ. ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





