ಧಾರವಾಡ ನಗರದ ಇಂಟ್ಯಾಕ್ ಸಂಸ್ಥೆಯಿಂದ ಆಗಸ್ಟ್ 5ರಂದು ಜೆಎಸ್ಎಸ್ ಕಾಲೇಜಿನ ಉತ್ಸವ ಸಭಾಂಗಣದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಇಂಟ್ಯಾಕ್ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದ್ದರು. ಅವಳಿನಗರದ ಒಟ್ಟು 12 ಶಾಲೆಗಳ 116 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಮೊದಲು ಲಿಖಿತ ರಸಪ್ರಶ್ನೆ ಸುತ್ತಿನಲ್ಲಿ 4 ತಂಡಗಳನ್ನು ಆಯ್ಕೆ ಮಾಡಿದರು. ಮೌಖಿಕ ಅಂತಿಮ ಸುತ್ತಿನಲ್ಲಿ ನಾಲ್ಕು ತಂಡಗಳಿಗೆ ಆಲೂರ ವೆಂಕಟರಾವ್, ದ ರಾ ಬೇಂದ್ರೆ, ಚೆನ್ನವೀರ ಕಣವಿ ಮತ್ತು ರಾ ಹ ದೇಶಪಾಂಡೆ ಎಂದು ಹೆಸರಿಟ್ಟಿದ್ದರು. ಅಂತಿಮವಾಗಿ ರಾ.ಹ.ದೇಶಪಾಂಡೆ ತಂಡದ ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ನಿಶ್ಚಿತಾ ಸಂಕಪ್ಪಗೋಳ ಮತ್ತು ಓಂಕಾರ ಜಿರಗೋಡ ಪ್ರಥಮ ಸ್ಥಾನ ಗಳಿಸಿದರು. ಆಲೂರ ವೆಂಕಟರಾವ್ ತಂಡದ ಧಾರವಾಡ ಜೆಎಸ್ಎಸ್ ಆಂಗ್ಲ ಮಾಧ್ಯಮ ಶಾಲೆಯ ಅನ್ವಿ ಜಾಮದಾರ ಮತ್ತು ಶ್ರೇಯಾಂಕ ಈನೂರ ದ್ವೀತಿಯ ಸ್ಥಾನ ಗಳಿಸಿದರು.
ವಿಜೇತರಿಗೆ ಬಹುಮಾನ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರಗಳನ್ನು ನೀಡಿದರು. ಲಿಖಿತ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರೊ.ಸುರೇಶ ಗುದಗನವರ ಹಾಗೂ ಮೌಖಿಕ ರಸಪ್ರಶ್ನೆಯನ್ನು ಡಾ.ಶಶಿಧರ ನರೇಂದ್ರ ನಡೆಸಿಕೊಟ್ಟರು. ಇಂಟ್ಯಾಕ್ ಸಂಚಾಲಕ ಡಾ.ಮೋಹನ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ಆರ್ ಜಿ ತಿಮ್ಮಾಪುರ ಸ್ವಾಗತಿಸಿದರು. ಡಾ. ಎನ್ ಬಿ ನಾಲತವಾಡ ನಿರೂಪಿಸಿದರು. ಡಾ.ರಾಜಶ್ರೀ ಗುದಗನವರ ವಂದಿಸಿದರು.
ಈ ಸುದ್ದಿ ಓದಿದ್ದೀರಾ? ಕಾರವಾರ-ಇಳಕಲ್ ರಾಷ್ಟ್ರೀಯ ಹೆದ್ದಾರಿ ಶೀಘ್ರವೇ ಪ್ರಾರಂಭವಾಗಬೇಕು: ಸಂಸದ ಬಸವರಾಜ ಬೊಮ್ಮಾಯಿ
ಕಾರ್ಯಕ್ರಮದಲ್ಲಿ ಜಿ ಸಿ ತಲ್ಲೂರ, ಡಾ. ಹನುಮಾಕ್ಷಿ ಗೋಗಿ, ಡಾ. ಆರ್ ಜಿ ಪುರಾಣಿಕ, ಲತಾ ಶಹಾಪುರ, ಅಮೃತಾ ಜೋಶಿ, ರಶ್ಮಿ ಭಾರದ್ವಾಜ್, ಸಂಗೀತಾ ಜಾಯಿ, ವೀಣಾ ಜೋಶಿ, ಭಾರತಿ ಪಿಳ್ಳೆ, ಸವಿತಾ ಕುಲಕರ್ಣಿ, ಶಬೀರಾ ನಾಯ್ಕವಾಡಿ, ಚನ್ನಬಸಪ್ಪ ಬೆಣ್ಣಿ, ಮನುಕುಮಾರ ಹಿರೇಮಠ, ಸನ್ಮತಿ ದೊಡಮನಿ ಇದ್ದರು.





