ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಡಿ. 30ರಂದು ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ನೀಡಿರುವುದನ್ನು ಖಂಡಿಸಿ ಅದೇ ದಿನ ದಲಿತ ಸಂಘಟಕರು ವಿವಿ ಎದುರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಯಿತು.
ಈ ಬಗ್ಗೆ ಈದಿನ.ಕಾಮ್ ಜತೆಗೆ ಪರಮೇಶ್ವರ ಕಾಳೆ ಮಾತನಾಡಿ, ವಿವಿಯ ಆವರಣದಲ್ಲಿ ಕುಲಪತಿ ಪಿ.ಎಲ್.ಪಾಟೀಲ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಮಾಜದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುವವರನ್ನು ಕರೆದು ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸುವ ಬದಲು, ಕೃಷಿಯ ಬಗ್ಗೆ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕರೆಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿ ಗೇಟ್ ಏರಿ ಪ್ರತಿಭಟಿಸಿದ ದಲಿತ ಮುಖಂಡರು ಇದೇ ವೇಳೆ ಡೀನ್ ರನ್ನೂ ತರಾಟೆಗೆ ತೆಗೆದುಕೊಂಡರು. ಸಿಂಡಿಕೇಟ್ ಸದಸ್ಯರಿಗೂ ತಿಳಿಸದೆ ಕುಲಪತಿಯವರು ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಆರೋಪಿಸಿದರು. ತದನಂತರ ಕಾರ್ಯಕ್ರಮವನ್ನು ರದ್ದುಗೊಳಿಸಿದರು. ಇಷ್ಟಾದರೂ; ಪ್ರತಿಭಟನೆ ಮುಂದುವರೆದಿದ್ದ ಕಾರಣ ಉಪನಗರ ಠಾಣೆಯ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು 1ಗಂಟೆಯ ಕಾಲ ಬಂಧನದಲ್ಲಿ ಇರಿಸಿದ್ದರು.





