ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡದ ಕೆಲಸವನ್ನು ಬರಿ ರಾಜ್ಯೋತ್ಸವ ತಿಂಗಳಿಗೆ ಮಾತ್ರ ಸೀಮಿತವಾಗಿ ಆಚರಿಸದೆ, ಇಡೀ ವರ್ಷ ಕನ್ನಡದ ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸುತ್ತಿರುವುದು ಅಭಿನಂದನೀಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ತಿಂಗಳ ಕಾರ್ಯಕ್ರಮದಲ್ಲಿ ‘ಗಿರಿಜಾ ಕಲ್ಯಾಣ’ (ದೊಡ್ಡಾಟ) ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಷ್ಟ್ರ ಪ್ರಶಸ್ತಿ ವಿಜೇತ, ನಿವೃತ್ತ ಶಿಕ್ಷಕ ಕೆ.ಎಚ್. ನಾಯಕ ಮಾತನಾಡಿದರು.
ಕವಿವ ಸಂಘದಲ್ಲಿ ಆಯೋಜಿಸಿದ್ದ ಧರೆಗೆ ದೊಡ್ಡವರು ಎಂಬ ಕಾರ್ಯಕ್ರಮ ಅತ್ಯಂತ ಮನೋಜ್ಞವಾದದ್ದು. ಸನ್ಮಾನಿತರಾದ ಧರೆಗೆ ದೊಡ್ಡವರಿಗೆಲ್ಲ ಕರ್ನಾಟಕ ವಿದ್ಯಾವರ್ಧಕ ಸಂಘ ಸಾಧನೆ ಮಾಡಲು ಪ್ರಧಾನ ವೇದಿಕೆಯಾಗಿದ್ದರಿಂದ, ಅವರೆಲ್ಲ ಸಾಧನೆ ಮಾಡಿ ಧರೆಗೆ ದೊಡ್ಡವರಾದದ್ದು ಹೆಮ್ಮೆಯ ಸಂಗತಿ. ಕವಿವ ಸಂಘದ ಕಾರ್ಯಕ್ರಮಗಳ ವಿಸ್ತ್ರತ ಕಾರ್ಯಕ್ರಮಗಳಿಗೆ ಜಾಗೆಯ ಅಭಾವವಿದ್ದು, ಸರ್ಕಾರ ತನ್ನ ಉದಾರತೆ ತೋರಿ ಕವಿವ ಸಂಘಕ್ಕೆ ೫ ಎಕರೆ ನಿವೇಶನ ನೀಡಬೇಕು. ಅಂತಹ ನಿವೇಶನದಲ್ಲಿ ಕರ್ನಾಟಕದ ಗತವೈಭವ ಸಾರುವ ಸನ್ನಿವೇಶ ಸೃಷ್ಟಿ ಮಾಡಬಹುದು. ಕಲಾಭವನದಲ್ಲಿ ಯಾವುದೇ ಕಾರ್ಯಕ್ರಮಗಳು ಇಂದು ನಡೆಯದೆ ಇದ್ದುದರಿಂದ, ಅದರ ಮೇಲ್ವಿಚಾರಣೆ ಹಾಗೂ ಉಸ್ತುವಾರಿಯನ್ನು ಕವಿವ ಸಂಘಕ್ಕೆ ನೀಡಿದರೆ, ಸಂಘ ಪ್ರಾಮಾಣಿಕವಾಗಿ ಅಲ್ಲಿ ಕಾರ್ಯಕ್ರಮ ಜರಗುವಂತೆ ಮಾಡಬಹುದೆಂಬ ವಿಶ್ವಾಸ ನನ್ನಲ್ಲಿದೆ ಎಂದರು.
ಇದನ್ನೂ ಓದಿ ಧಾರವಾಡ | ಹಲವು ವರ್ಷಗಳಿಂದ ಮುಚ್ಚಿದ್ದ ಗೋದಾಮಿನಲ್ಲಿ ಕೊನೆಗೂ ಸೋಯಾಬೀನ್ ಖರೀದಿ ಕೇಂದ್ರ ಉದ್ಘಾಟನೆ
ರಂಗ ಕಲಾವಿದರಾದ ರಾಜು ಗಡ್ಡಿ ಹಾಗೂ ಜೀವನ ಲಂಗೋಟಿ ಅವರನ್ನು ಸಂಘದ ಪರವಾಗಿ ಸನ್ಮಾನಿಸಿ, ಗೌರವಿಸಿದರು. ಇಬ್ಬರೂ ಕಲಾವಿದರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕವಿವ ಸಂಘವು ನಮ್ಮ ರಂಗಕಲಾ ಸೇವೆ ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ನಮ್ಮ ಭಾಗ್ಯ ಎಂದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಮಹೇಶ ಧ. ಹೊರಕೇರಿ ನಿರೂಪಿಸಿ, ವಂದಿಸಿದರು. ಕೊನೆಯಲ್ಲಿ ಡಾ ಬಸವರಾಜ ಮಲಶೆಟ್ಟಿ ರಚನೆಯ, ಬಸವರಾಜ ಶಿಗ್ಗಾಂವ ನಿರ್ದೇಶನದ, ಸಹನಾ ನಾಗೇಂದ್ರ ಬನ್ನಿ ಗಿಡದ ತಂಡದಿಂದ ಗಿರಿಜಾ ಕಲ್ಯಾಣ ದೊಡ್ಡಾಟ ಪ್ರದರ್ಶನಗೊಂಡಿತು.





