ಕನ್ನಡ ರಂಗಭೂಮಿಗೆ ಮೊದಲಿನಂತಹ ವೈಭವ ಇಲ್ಲದಿರುವುದು ವಿಷಾದನೀಯ. ರಂಗಭೂಮಿ ಸದಾ ಚಲನಶೀಲವಾದುದು. ರಂಗಭೂಮಿ ಶಕ್ತಿ ಕುಗ್ಗಿದಂತೆ ಕಂಡರೂ ಅದು ಇನ್ನೂ ತನ್ನತನವನ್ನು ಉಳಿಸಿಕೊಂಡಿದೆ ಎಂದು ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ರಂಗಭೂಮಿ ಕಲಾವಿದ ಮಹಾದೇವ ಹಡಪದ ಮಾತನಾಡಿದರು.
ಇದೇ ವೇಳೆ ರಂಗಭೂಮಿಯ ನಟ ದಂಪತಿಗಳಾದ ಮಹಾದೇವ ಹಡಪದ ಮತ್ತು ಗಾಯತ್ರಿ ಹಡಪದ ಅವರನ್ನು ಸನ್ಮಾನಿಸಿ, ಸಾಧಕರ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಹಾದೇವ ಹಡಪದ ಮಾತನಾಡುತ್ತಾ, ಕ.ವಿ.ವ. ಸಂಘ ಕಳೆದ ಮರ್ನಾಲ್ಕು ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುತ್ತಿದ್ದು, ಸರ್ಕಾರ ವಿಸ್ತೃತ ಕಾರ್ಯಕ್ರಮಗಳಿಗೆ ಕ.ವಿ.ವ. ಸಂಘಕ್ಕೆ 10 ಎಕರೆ ಜಾಗೆ ನೀಡಬೇಕು. ಅಂದಾಗ ಅಲ್ಲಿ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಇತಿಹಾಸದ ವಿಸ್ಮಯ ಸನ್ನಿವೇಶ ಸೃಷ್ಟಿ ಮಾಡಲು ಸಾಧ್ಯ ಎಂದು ಹೇಳಿದರು.
ಈ ವೇಳೆ ದೀಪಕ ಆಲೂರ್ ಮಾತನಾಡಿ, ಕ.ವಿ.ವ. ಸಂಘವು ಕರ್ನಾಟಕದ ಏಕೀಕರಣ ಸ್ಫೂರ್ತಿಯ ಕೇಂದ್ರವಾಗಿದೆ. ಕರ್ನಾಟಕದ ಗತವೈಭವದ ಗ್ರಂಥವನ್ನು ಆಲೂರ್ ವೆಂಕಟರಾಯರು ಕನ್ನಡಿಗರ ಕೈಗಿಟ್ಟು ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿ ಕನ್ನಡಿಗರನ್ನು ಜಾಗೃತಗೊಳಿಸಿದರು. ನಾನು ಕ.ವಿ.ವ. ಸಂಘದ ಆಲೂರ ವೆಂಕಟರಾಯರ ವೇದಿಕೆಯಿಂದ ಅವರ ಮೊಮ್ಮಗನಾಗಿ ಮಾತನಾಡುವ ಅವಕಾಶವನ್ನು ಕ.ವಿ.ವ. ಸಂಘ ನನಗೆ ನೀಡಿದ್ದು ನನ್ನ ಸೌಭಾಗ್ಯ. ದಿ. ಆಲೂರ್ ವೆಂಕಟರಾಯರು ತಮ್ಮ ಇಡೀ ಜೀವನವನ್ನೇ ಏಕೀಕರಣಕ್ಕಾಗಿ ಸಮರ್ಪಿಸಿಕೊಂಡವರು. ಕನ್ನಡಿಗರ ಉದಾಶೀನತೆ ನಿರಾಭಿಮಾನ ದುಸ್ಥಿತಿ ಕಂಡು ಮರುಗಿದ ಅವರು ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಕ.ವಿ.ವ. ಸಂಘವೇ ವೇದಿಕೆಯಾಗಿತ್ತು. ಕನ್ನಡ ಸಾಹಿತ್ಯ ಪರಿಷತ್, ಏಕೀಕರಣ ಪರಿಷತ್ ಉದಯವಾಗಲು ಕಾರಣರಾದ ಅವರು ಧಾರವಾಡದಲ್ಲಿ ಗ್ರಂಥಕರ್ತರ ಸಮ್ಮೇಳನ ಆಯೋಜಿಸಿದ ಕೀರ್ತಿ ಅವರದಾಗಿದೆ ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಅನುವಾದ ಮಾಡುವವರಿಗೆ ಓದುವ ಹವ್ಯಾಸವಿರಬೇಕು: ದೀಪಾ ಭಾಸ್ತಿ
ವೇದಿಕೆಯ ಮೇಲೆ ಶಶಿಕಲಾ ಲಮಾಣಿ, ಸಂಗಮೇಶ ನೀಲಾ ಸಂತ, ಶಂಕರ ಕುಂಬಿ ಇದ್ದರು. ಪ್ರಾರಂಭದಲ್ಲಿ ಡಾ. ಗುರುಬಸವ ಮಹಾಮನೆ ಮತ್ತು ಸಂಗಡಿಗರಿಂದ ವಾದ್ಯಗೋಷ್ಠಿ ಜರುಗಿತು. ಚಿತ್ತಾಪೂರ ಸಂಗಮೇಶ ನೀಲಾ ಸಂತ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಕಲಘಟಗಿಯ ಲಂಬಾಣಿ ನೃತ್ಯ ತಂಡದಿಂದ ಲಂಬಾಣಿ ನೃತ್ಯ ಪ್ರದರ್ಶನಗೊಂಡವು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕಿರಣ ಸಿದ್ಧಾಪೂರ, ಸಿ.ಎಸ್. ಪಾಟೀಲಕುಲಕರ್ಣಿ, ಭೀಮು ಖಟಾವಿ, ಪ್ರೊ. ಬಿ. ಎಚ್. ಕೋಟಿಗೌಡ್ರ, ಎಂ.ಎಂ. ಚಿಕ್ಕಮಠ, ಕೆ.ಎಚ್. ನಾಯಕ ಇದ್ದರು.





