ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಇಂದು (ಡಿ.10) ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನಾ ಧರಣಿಗೆ ಮುಂದಾಗಿದ್ದ ಪ್ರತಿಭಟನೆಕಾರರನ್ನು ಪೊಲೀಸರು ಬಂಧಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಇದೊಂದು ಧಮನಕಾರಿ ನೀತಿಯಾಗಿದ್ದು, ಹೋರಾಟಗಳನ್ನು ಹತ್ತಿಕ್ಕುವ ಸರ್ಕಾರದ ನಡೆಗೆ ಧಿಕ್ಕಾರವಿರಲಿ ಎಂದು ಘೋಷಣೆ ಕೂಗಿದರು.
ಪ್ರತಿಭಟನೆ ನಡೆಯಬೇಕಿದ್ದ ನಗರದ ಪ್ರಮುಖ ಬೀದಿಗಳಲ್ಲಿ ಬ್ಯಾರಿಕೇಟ್ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಎನ್.ಟಿ.ಟಿ.ಎಫ್ ಹತ್ತಿರವಿರುವ ಕಚೇರಿಯಿಂದ ಸಂಘಟಕರು ಹೊರ ಬರುತ್ತಿದ್ದಂತೆ ಪೊಲೀಸರು ಬಂಧಿಸಿ, ಕೆಲವರನ್ನು ಧಾರವಾಡದಲ್ಲಿ, ಇನ್ನುಳಿದವರನ್ನು ಹುಬ್ಬಳ್ಳಿಯಲ್ಲಿ ಒಟ್ಟು 15 ಜನರನ್ನು ಗೃಹಬಂಧನದಲ್ಲಿ ಇರಿಸಿದ್ದರು. ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಎಐಡಿವೈಓ ಯುವಜನ ಸಂಘಟನೆ, ಜನಾಂದೋಲನ ಮಹಾಮೈತ್ರಿ, ರೈತ ಸಂಘಟನೆ ಸೇರಿದಂತೆ ಹಲವು ಜನಪರ ಸಂಘಟನೆಗಳು, ಸಾಹಿತಿಗಳು ಈ ಧರಣಿಗೆ ಬೆಂಬಲ ಸೂಚಿಸಿದ್ದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ರೈತ ಸಂಘಟನೆಯ ಸಿದ್ದಪ್ಪ ಮೋದಗಿ, ಶರಣು ಗೋನಾವರ, ಮಧುಲತಾ, ಭವಾನಿಶಂಕರ್ ಗೌಡ, ರೈತರು, ಇನ್ನಿತರರು ಬಂಧನಕ್ಕೆ ಒಳಗಾಗಿದ್ದರು.
ಇದನ್ನೂ ಓದಿ ಧಾರವಾಡ | ಪಾದಚಾರಿಗೆ ಬೈಕ್ ಡಿಕ್ಕಿ; ಆಂಬ್ಯುಲೆನ್ಸ್ಗಾಗಿ ಗಾಯಾಳು ಪರದಾಟ
ಈ ಕುರಿತು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, ಯುವಜನರ ನ್ಯಾಯಯುತ ಹೋರಾಟ ಹಾಗೂ ಪ್ರಜಾತಾಂತ್ರಿಕ ಹಕ್ಕಿನ ಮೇಲೆ ದಾಳಿ ಮಾಡಿರುವ ಪೊಲೀಸರು ಮತ್ತು ಸರ್ಕಾರದ ಧಮನಕಾರಿ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಪೊಲೀಸರು ಕೇಳಿದ ಮಾಹಿತಿಯನ್ನು ಹಲವು ಬಾರಿ ನೀಡಿದ್ದಾಗಿಯೂ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಅನುಮತಿ ನಿರಾಕರಿಸಲಾಗಿದೆ. ಮತ್ತು ಇದೀಗ ಯುವಜನರ ನ್ಯಾಯಯುತ ಹೋರಾಟವನ್ನು ಬೆಂಬಲಿಸಲು ಬಂದ ನಾಯಕರುಗಳನ್ನು ಬಂಧಿಸಿದ್ದಾರೆ. ಧಾರವಾಡ ಸೇರಿದಂತೆ ರಾಜ್ಯದ ವಿದ್ಯಾರ್ಥಿ- ಯುವಜನರು, ಹಾಗೂ ಪ್ರಜ್ಞಾವಂತ ಜನ ಸಮೂಹವು ಒಂದಾಗಿ ಸರ್ಕಾರದ ಈ ನಿರಂಕುಶ ಧೋರಣೆಯ ವಿರುದ್ಧ ಧ್ವನಿಯೆತ್ತಬೇಕು ಮತ್ತು ಹೋರಾಡುವ ಪ್ರಜಾತಾಂತ್ರಿಕ ಹಕ್ಕಿನ ರಕ್ಷಣೆಗಾಗಿ ಹೋರಾಡಬೇಕು ಎಂದು ಕರೆನೀಡಿದರು.





