“ಮೂಢನಂಬಿಕೆ” ಎಂದು ಪರಿಗಣಿಸಲಾಗುವ ಕೆಲವು ನಂಬಿಕೆಗಳ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಮತ್ತು ಮೂಢನಂಬಿಕೆ ವಿಚಾರದಲ್ಲಿ ವೈಜ್ಞಾನಿಕ ಚಿಂತನೆ ಇರಬೇಕಾಗುತ್ತದೆ ಎಂದು ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಪ್ರೊ. ಎಸ್. ಎನ್. ಎಮ್ಮಿ ಹೇಳಿದರು.
ಧಾರವಾಡದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಭಾಗಗಳು ಐಕ್ಯೂಎಸಿ (IQAC) ಯೋಜನೆಯಡಿ ಆಯೋಜಿಸಿದ್ದ, “ವಿಜ್ಞಾನ ಮತ್ತು ಮೂಢನಂಬಿಕೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಉದಾಹರಣೆಗೆ; ಬೆಕ್ಕು ದಾರಿ ದಾಟುವ ಸಂದರ್ಭದಲ್ಲಿ ಭಯದಿಂದ ನಿಲ್ಲುತ್ತೆವೆ. ಅದರ ಬದಲು ಸಕಾರಾತ್ಮಕವಾಗಿ ಚಿಂತಿಸಬೇಕು. ವಾಹನಗಳಿಗೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿ ಹಾಕುವುದು, ಗ್ರಹಣದ ಸಮಯದಲ್ಲಿ ಹೊರಗೆ ಹೋಗದಿರುವುದು ಇತ್ಯಾದಿಗಳನ್ನು ನಂಬಿಕೆಯಿಂದ ಮಾಡಲಾಗುತ್ತದೆ. ಯಾವುದರ ಕುರಿತಾಗಿಯೂ ಭಯದಿಂದ ಬದುಕಬಾರದು ಎಂದರು.
ಐಕ್ಯೂಎಸಿ ಸಂಯೋಜಕ ಡಾ. ಏನ್ ಬಿ ನಾಲತವಾಡ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ವಿಭಾಗಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಐ. ಎ. ಮುಲ್ಲಾ ವೇದಿಕೆ ಮೇಲಿದ್ದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಶೃತಿ ಎಸ್. ಯಾವಗಲಮಠ ಸ್ವಾಗತಿಸಿ, ಅತಿಥಿಗಳಿಗೆ ಪುಷ್ಪಾರ್ಪಣೆ ಸಲ್ಲಿಸಿದರು. ಸಸ್ಯಶಾಸ್ತ್ರ ವಿಭಾಗದ ಪ್ರೊ. ತನ್ಜೀಲಾ ನುಝತ್ ಎಸ್ ಅವರು ಗಣ್ಯರನ್ನು ಪರಿಚಯಿಸುತ್ತಾ, ಆಧುನಿಕ ಸಮಾಜದಲ್ಲಿ ತಾರ್ಕಿಕ ಚಿಂತನೆ ಹಾಗೂ ವೈಜ್ಞಾನಿಕ ಅರಿವಿನ ಅಗತ್ಯತೆ ಬಗ್ಗೆ ಹೇಳಿದರು. ಸಸ್ಯಶಾಸ್ತ್ರ ವಿಭಾಗದ ಪ್ರೊ. ಆರಿಫಾ ಮುಲ್ಲಾ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಉಮ್ಮೇ ರಬಿಯಾ ಬಾಳೆಕಾಯಿ ಪವಿತ್ರ ಕುರಾನ್ ಪಠಿಸಿದರು. ವಿದ್ಯಾರ್ಥಿ ದರ್ಶನ ರಾಥೋಡ್ ಶ್ಲೋಕ ವಾಚಿಸಿದರು. ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಕುಮಾರಿ ಖುತೆಜತುಲ್ ಕುಬ್ರಾ ಟಿ. ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಎಸ್ ಎಸ್ ಅಧೋನಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.





