ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸ್ಟಿಲರಿಗಳು ಮತ್ತು ಪೌಲ್ಟ್ರಿ ಫೀಡ್ ಉತ್ಪಾದಕರೊಂದಿಗೆ ಸಭೆಗಳನ್ನು ನಡೆಸಿ, ನೇರವಾಗಿ ರೈತರಿಂದ 5 ಲಕ್ಷ ಟನ್ ಮೆಕ್ಕೆಜೋಳವನ್ನು MSP ಸಂಬಂಧಿತ ಬೆಲೆಯಲ್ಲಿ ಖರೀದಿಸಲು ಅನುಮತಿಸಿದ್ದಾರೆ. ಇದರೊಂದಿಗೆ, KSCMF ಮೂಲಕ ಡಿಸ್ಟಿಲರಿಗಳಿಗೆ ಸರಬರಾಜು ಮಾಡುವ ಆದೇಶ ನೀಡಲಾಗಿದೆ. ಆದರೂ ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ವಿಳಂಬ ದೋರಣೆ ಕಂಡುಬರುತ್ತಿದೆ.
ಕಳೆದ ಒಂದು ತಿಂಗಳಿನಿಂದ ಮೆಕ್ಕೆಜೋಳ ಬೆಳೆಗಾರರು ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರದ ಪ್ರಾರಂಭಕ್ಕಾಗಿ ಪರದಾಡುತ್ತಿದ್ದು, ಈಗಾಗಲೇ 2,400 ರೂಪಾಯಿ ಬೆಂಬಲ ಬೆಲೆಯನ್ನು ಸರ್ಕಾರ ಘೋಷಣೆ ಮಾಡಿ ಆಗಿದೆ. ಆದರೆ ಖರೀದಿ ಕೇಂದ್ರ ಮಾತ್ರ ಇನ್ನೂ ಪ್ರಾರಂಭವಾಗಿರುವುದು ರೈತರಲ್ಲಿ ಆತಂಕವನ್ನುಂಟುಮಾಡಿದೆ.
ಪ್ರಾರಂಭದಲ್ಲಿ ಹಿಂಗಾರು ಹಂಗಾಮಿನ ಮೆಕ್ಕೆಜೋಳ ಬೆಳೆಗೆ ಕೀಟಬಾಧೆ ಮತ್ತು ಲದ್ದಿ ಹುಳಗಳ ಕಾಟದಿಂದ ಬೆಳೆ ನಷ್ಟದ ಭಯವು ಬೆಳೆಗಾರರನ್ನು ಕಾಡಿತ್ತು. ಇದೀಗ ಮೆಕ್ಕೆಜೋಳ ನುಸಿ ಹತ್ತಿಕೊಂಡು ನಷ್ಟವಾಗುವ ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ 89ರಷ್ಟು ಬಿತ್ತನೆಯಾಗಿದ್ದು, 7,200 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ವಿಶೇಷವಾಗಿ ಈ ಬಾರಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆದ ರೈತರಿಗೆ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರದ ವಿಚಾರದಲ್ಲಿ ಆತಂಕ ಉಂಟಾಗಿದೆ.
ʼನಾವು ರೈತರ ಪರವಾಗಿದ್ದೇವೆ. ರೈತರು ನಮ್ಮ ದೇಶದ ಬೆನ್ನೆಲುಬುʼ ಎಂದೆಲ್ಲ ವೇದಿಕೆಯ ಮೇಲೆ ಭಾಷಣಗಳನ್ನು ಮಾಡುತ್ತ ಅಧಿಕಾರ ಗಿಟ್ಟಿಸಿಕೊಳ್ಳುವ ರಾಜಕಾರಣಿಗಳಿಗೆ ರೈತನ ಸಮಸ್ಯೆಗಳ ಬಗ್ಗೆ ಒಂದಿಷ್ಟು ಕನಿಕರ ಮತ್ತು ಕಾಳಜಿ ಇಲ್ಲವೆಂದು ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಕಾರಣ ರೈತರು ಬಿತ್ತನೆಯಿಂದ ಹಿಡಿದು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡುವವರೆಗೂ ಪರದಾಡುವ ವಾತಾವರಣ ಇಂದಿಗೂ ಬದಲಾಗಿಲ್ಲ. ತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲು ಸರ್ಕಾರವನ್ನು ಒತ್ತಾಯಿಸಬೇಕು. ಖರೀದಿ ಕೇಂದ್ರದ ಪ್ರಾರಂಭಕ್ಕೆ ಒತ್ತಾಯಿಸಿ ಹೆಣಗಾಡಬೇಕು. ಒಟ್ಟಿನಲ್ಲಿ ಅನ್ನ ನೀಡುವ ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವವರೆಗೂ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಗದಗ, ಹಾವೇರಿ ಮತ್ತು ಇನ್ನಿತರ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳು ಪ್ರಾರಂಭವಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭಿಸಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ರೈತರು ಆಕ್ರೋಶಗೊಳ್ಳುತ್ತಿದ್ದಾರೆ. ರೈತನ ವಿಚಾರದಲ್ಲಿ ಸರ್ಕಾರವೂ ಕೂಡ ಚಿವುಟಿ ಮತ್ತೆ ಸಮಾಧಾನ ಮಾಡುವ ಕೆಲಸವನ್ನು ಮಾಡುತ್ತಿದ್ದು, ಒಂದರ್ಥದಲ್ಲಿ ರೈತನ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಕ್ಕಾಗಿ ಒತ್ತಾಯಿಸಿ, ಹಲವು ಕಡೆಗೆ ಪ್ರತಿಭಟನೆಗಳು ನಡೆದಿವೆ. ಹಲವು ಸಲ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೂ ಇದೆ. ಇದಕ್ಕೆಲ್ಲ ಕ್ಯಾರೆ ಎನ್ನದೆ ಖರೀದಿ ಕೇಂದ್ರ ಪ್ರಾರಂಭಕ್ಕೆ ವಿಳಂಬ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಈ ದಿನ.ಕಾಮ್ ಜತೆಗೆ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಅಶೋಕ್ ನಂದಗಿ ಎಂಬ ರೈತರೊಬ್ಬರು ಮಾತನಾಡುತ್ತ, “ಕಳೆದ ಒಂದು ತಿಂಗಳಿಂದ ಹೊಲದಲ್ಲೇ ಕಣ ಮಾಡಿಕೊಂಡು ಗೋವಿನ ಜೋಳವನ್ನು ಕಾಯುತ್ತ ಕೂತಿದ್ದೇವೆ. ರೈತನ ಕುರಿತು ಯಾರಿಗೂ ಕಾಳಜಿ ಇಲ್ಲದಂತಾಗಿದೆ. ರೈತನ ಬೆನ್ನಲ್ಲಿ ಚೂರಿ ಹಾಕುವ ಕೆಲಸವಾಗುತ್ತಿದೆ. ಅಧಿಕಾರಕ್ಕಾಗಿ ಎಲ್ಲ ಪಕ್ಷಗಳು ನಾವು ರೈತರ ಪರವಾಗಿದ್ದೇವೆಂದು ಭಾಷಣ ಮಾಡುತ್ತಾರೆ. ಇನ್ನು ರಾಜಕಾರಣಿಗಳು, ಮಾಧ್ಯಮಗಳ ಬಾಯಿ ಮುಚ್ಚಿಸುತ್ತಾರೆ. ಇದರಿಂದ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ರೈತರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರವು ಬೆಂಬಲ ಬೆಲೆಯನ್ನು ಘೋಷಣೆ ಮಾಡಿದ್ದು ಸಂತಸ. ಆದರೆ 1 ಎಕರೆಗೆ 5 ಕ್ವಿಂಟಲ್ ಮಾತ್ರ ನಿಗದಿಮಾಡಲಾಗಿದೆ. ಇದು ಲಾವಣಿ ಮಾಡಿಕೊಂಡು, 15, 20 ಕ್ವಿಂಟಲ್ವರೆಗೆ ಬೆಳೆದ ಬೆಳೆಗಾರನಿಗೆ ಸಮಸ್ಯೆ ಉಂಟಾಗುತ್ತದೆ” ಎಂದರು.

ಕುಂದಗೋಳ ತಾಲೂಕು ರೈತ ಸಂಘದ ಅಧ್ಯಕ್ಷ ಗುರುಪಾದಪ್ಪ ಬಂಕದ ಮಾತನಾಡಿ, “ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಿದ ಮೇಲೆ ಖರೀದಿ ಕೇಂದ್ರ ತೆರೆಯುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿದೆ. ಅದರಿಂದ ದಲ್ಲಾಳಿಗಳಿಗೆ ಹೆಚ್ಚು ಲಾಭವಾಗುತ್ತದೆ. ನೈಜ ಮಾಲೀಕರಾಗಿರುವ ರೈತರು ಪುನಃ ವ್ಯಾಪಾರಸ್ಥರ ಮುಂದೆ ಕೈಕಟ್ಟಿ ನಿಲ್ಲುವ ವಾತಾವರಣ ಸೃಷ್ಟಿಯಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದೆ. ಇದ್ದಿದ್ದರೆ; ರೈತರನ್ನೇ ಉಳಿಸಿ, ಬೆಳೆಸುವ ಕಡೆಗೆ ಅವರ ಚಿಂತನೆಗಳು ಇರುತ್ತಿದ್ದವು. ಬೆಳೆದ ಬೆಳೆ ನಾಶವಾಗುವ ಒಳಗಾಗಿ ಖರೀದಿ ಕೇಂದ್ರ ಪ್ರಾರಂಭವಾಗಲಿ” ಎಂದು ಒತ್ತಾಯಿಸಿದರು.
ಇನ್ನೊರ್ವ ರೈತ ಮಾತನಾಡಿ, “ಖರೀದಿ ಕೇಂದ್ರದಲ್ಲಿ ಜಮೀನು ಪತ್ರ ಕೇಳುತ್ತಾರೆ. ಲಾವಣಿ ಮಾಡಿದ ರೈತ ಜಮೀನು ಪತ್ರವನ್ನು ಹುಡುಕಿಕೊಂಡು ಬೇರೆಯವರ ಕಡೆಗೆ ಹೋಗಬೇಕು. ಅವರಿಂದ ಹಣ ಸಿಗುವವರಿಗೆ ಮತ್ತೆ ಪರದಾಡುವ ಪರಿಸ್ಥಿತಿ ಮುಂದುವರೆಯುತ್ತದೆ. ಗೋವಿನಜೋಳಕ್ಕೆ ಒಮ್ಮೆ ನುಸಿ ಹತ್ತಿದರೆ, ಎಲ್ಲವೂ ಹಾಳಾಗುತ್ತದೆ. ಇದರಿಂದ ಖರ್ಚು ಮಾಡಿದ ಹಣವೂ ಕೈಸೇರುವುದಿಲ್ಲ” ಎಂದರು.

ಯಲ್ಲಪ್ಪ ದ್ಯಾವನೂರ ಮಾತನಾಡಿ, “ಮಷಿನ್ಗೆ ಹಾಕಿಸಿದ ಒಂದು ತಿಂಗಳ ಒಳಗಾಗಿ ಗೋವಿಂದ್ ಜೋಳವನ್ನು ಸಾಗಿಸಬೇಕು. ಇಲ್ಲದಿದ್ದರೆ ನುಸಿ ಹತ್ತಿಕೊಳ್ಳುತ್ತದೆ. ಅದನ್ನು ಯಾರೂ ಕೊಂಡುಕೊಳ್ಳುವುದಿಲ್ಲ. ಅದಕ್ಕೆ ಬೆಲೆಯನ್ನೂ ಕಟ್ಟುವುದಿಲ್ಲ. ಈಗಾಗಲೇ ಮೆಕ್ಕೆಜೋಳ ಬಂದು ಒಂದು ತಿಂಗಳು ಕಳೆದಿದೆ. ಇನ್ನು 15 ದಿವಸಗಳು ಕಳೆದರೆ ಲಾಭವು ಬೆಳೆಗಾರರ ಕೈಗೂ ಹತ್ತುವುದಿಲ್ಲ. ಬೆಂಬಲ ಬೆಲೆ ಘೋಷಿಸಿದಂತೆ ಕೂಡಲೇ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕು. ಯಾವುದೇ ಬೆಳೆಯನ್ನಾಗಲಿ, ಬಳೆಗಾರ ಮಾರಾಟ ಮಾಡುವ ಮೊದಲೇ ಬೆಂಬಲ ಬೆಲೆಯನ್ನು ನೀಡಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವಲ್ಲಿ ಮುನ್ನೆಜ್ಜೆ ಹಾಕಬೇಕು. ಈ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುವ ಮೂಲಕ ಸರ್ಕಾರ ಮತ್ತು ಅಧಿಕಾರಿಗಳು ರೈತರನ್ನು ಮತ್ತಷ್ಟು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ಬೆಳೆಗಾರರಿಗೆ ಲಾಭ ಮಾಡಿಕೊಡುವುದೇ? ಅಥವಾ ವಿಳಂಬ ನೀತಿಯನ್ನೇ ಅನುಸರಿಸಿ ದಲ್ಲಾಳಿಗಳಿಗೆ ಲಾಭ ಮಾಡಿಕೊಡುವುದೇ? ಎಂಬುದನ್ನು ಕಾದು ನೋಡಬೇಕಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದ ಕೊರತೆಯಿಂದ ಮೆಕ್ಕೆಜೋಳ ಬೆಳೆಗಾರರು ಸಮಸ್ಯೆ ಎದುರಿಸುವಂತಾಗಿದೆ. ಕೇಂದ್ರ ಸರ್ಕಾರವು 2025-26 ಖಾರಿಫ್ ಮಾರುಕಟ್ಟೆ ಮೌಲ್ಯಕ್ಕಾಗಿ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹2400 ಬೆಂಬಲ ಬೆಲೆ(MSP) ಘೋಷಿಸಿದ್ದರೂ ಕೂಡ, NAFED ಮತ್ತು NCCF ನಂತಹ ಏಜೆನ್ಸಿಗಳು ಖರೀದಿ ಕೇಂದ್ರಗಳನ್ನು ತೆರೆಯದೇ ಇರುವುದು ರೈತರ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಇದರಿಂದಾಗಿ, ಸುಮಾರು ಪ್ರತಿ ಕ್ವಿಂಟಲ್ಗೆ ₹1500-₹1800ಕ್ಕೆ ಇಳಿದಿದ್ದು, ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ರೈತರು ಒಂದು ತಿಂಗಳಿನಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿದ್ದೀರಾ? ಹಾವೇರಿ | ಸಮಗ್ರ ಕೃಷಿ ಅಳವಡಿಸಿಕೊಂಡು ಲಕ್ಷಾಂತರ ಆದಾಯ ಗಳಿಸುತ್ತಿರುವ ರೈತನ ಯಶೋಗಾಥೆ
ರಾಜ್ಯ ಸರ್ಕಾರವು ಈ ಸಮಸ್ಯೆಯನ್ನು ಎದುರಿಸಲು ಕೆಲವು ಹಂತಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸ್ಟಿಲರಿಗಳು ಮತ್ತು ಪೌಲ್ಟ್ರಿ ಫೀಡ್ ಉತ್ಪಾದಕರೊಂದಿಗೆ ಸಭೆಗಳನ್ನು ನಡೆಸಿ, ನೇರವಾಗಿ ರೈತರಿಂದ 5 ಲಕ್ಷ ಟನ್ ಮೆಕ್ಕೆಜೋಳವನ್ನು MSP ಸಂಬಂಧಿತ ಬೆಲೆಯಲ್ಲಿ ಖರೀದಿಸಲು ಅನುಮತಿಸಿದ್ದಾರೆ. ಇದರೊಂದಿಗೆ, KSCMF ಮೂಲಕ ಡಿಸ್ಟಿಲರಿಗಳಿಗೆ ಸರಬರಾಜು ಮಾಡುವ ಆದೇಶ ನೀಡಲಾಗಿದೆ. ಆದರೂ ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ವಿಳಂಬ ದೋರಣೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ₹3,000 ಪ್ರತಿ ಕ್ವಿಂಟಲ್ ಬೆಂಬಲ ಬೆಲೆ ಮತ್ತು ಪೂರ್ಣ ಪ್ರಮಾಣದ ಬೆಳೆಯನ್ನು ಖರೀದಿಸುವಂತೆ ಆಗ್ರಹಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ, ಸರ್ಕಾರಗಳು ತ್ವರಿತವಾಗಿ NAFED/NCCF ಮೂಲಕ ಖರೀದಿ ಕೇಂದ್ರಗಳನ್ನು ತೆರೆದು ರಾಜ್ಯ-ಕೇಂದ್ರ ಸಹಭಾಗಿತ್ವವನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ.





