ಸರಕಾರಿ ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ಸರ್ಕಾರ ಖಾಯಂಗೊಳಿಸಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಧಾರವಾಡದ ಕಂಠಿಗಲ್ಲಿ ಸರಕಾರಿ ಮಾದರಿ ಉರ್ದು ಶಾಲೆಯಲ್ಲಿ, ಇಂಡಿಪೆಂಡೆಂಟ್ ಸಂಗ್ರಾಮ್ ನ್ಯೂಸ್ ಟ್ರಸ್ಟ್ ಹಾಗೂ ಕಂಠಿಗಲ್ಲಿ ಉರ್ದು ಶಾಲಾ ಸುಧಾರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ, ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ಉರ್ದು ಜೊತೆ ಕನ್ನಡ ಕಲಿಯಿರಿ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿದರು.
ಈ ವೇಳೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಎ. ಎ. ದರ್ಗಾ ಮಾತನಾಡಿ, ರಾಜ್ಯದಲ್ಲಿ ಮುಸಲ್ಮಾನರ ಸಂಖ್ಯೆ 70 ಲಕ್ಷ 50 ಸಾವಿರ ಇದೆ. ಅದರಲ್ಲಿ ಪ್ರತಿಶತ 40ರಷ್ಟು ಜನ ಮಾತ್ರ ಕನ್ನಡವನ್ನು ಮಾತನಾಡುತ್ತಾರೆ. ಉರ್ದು ಜೊತೆಗೆ ಕನ್ನಡವನ್ನು ಕಲಿಯಬೇಕು. ನಮ್ಮ ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡ ಇರುವುದರಿಂದ ಸರಕಾರದ ಜೊತೆಗೆ ಪತ್ರ ವ್ಯವಹಾರ ಮಾಡಲು ಪಾಲಕರು ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು ಎಂದರು.
ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕರಾದ ರಾಜಶೇಖರ ಕಮತಿ ಮಾತನಾಡಿದರು. ಪತ್ರಕರ್ತ ಹಾಗೂ ಸಾಹಿತಿ ಎಂ. ಆರ್. ನದಾಫ್ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವುದು ಅಗತ್ಯವಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಜಕ್ಕಣ್ಣವರ ಮಾತನಾಡಿ, ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರು ಮಕ್ಕಳಿಗೆ ಹಾಡಿನ ಮೂಲಕ ತಿಳಿಸಬೇಕು ಎಂದರು. ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಕೆ. ಜಿ. ಹಳಿಯಾಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ ಧಾರವಾಡ | ಏಕೀಕರಣ ಚಳುವಳಿಯಲ್ಲಿದ್ದ ಮಹನೀಯರಲ್ಲಿ ಅದರಗುಂಚಿ ಶಂಕರಗೌಡರು ಪ್ರಮುಖರು: ರವೀಂದ್ರನಾಥ
ಮಹಮ್ಮದಲಿ ಗೂಡುಬಾಯಿ ಹಾಗೂ ಎಂ. ಎಂ. ಜಮಾದಾರ ನಿರೂಪಿಸಿದರು. ಕುಮಾರಿ ಎಂ.ಎಂ.ನದಾಫ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಮೈನೋದೀನ ನದಾಫ, ಎಸ್ ಡಿ ಎಂ ಸಿ ಅಧ್ಯಕ್ಷ ಯಾಸೀನ ಹಳಿಯಾಳ, ಇಂಡಿಪೆಂಡೆಂಟ್ ಸಂಗ್ರಾಮ್ ನ್ಯೂಸ್ ಟ್ರಸ್ಟ್ ಅಧ್ಯಕ್ಷ ಎಂ. ಕೆ. ನದಾಫ ಹಾಗೂ ಮಕ್ಕಳ ಪಾಲಕರು, ಶಿಕ್ಷಕರು ಇದ್ದರು.





