ಬೆಳಗಾವಿ ಅಧಿವೇಶನದಲ್ಲಿ ದಕ್ಷಿಣ ಕರ್ನಾಟಕದವರು ಮಾತನಾಡುತ್ತಾರೆ. ಉತ್ತರ ಕರ್ನಾಟಕದ ಶಾಸಕರು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಶಾಸಕರುಗಳಿಗೆ ಗಂಭೀರತೆ ಇಲ್ಲದಂತಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಬೇಸರ ವ್ಯಕ್ತಪಡಿಸಿದರು.
ಮುಂದುವರೆದು ಈಗಾಗಲೇ ಸಿಎಂ ಜೊತೆ ಚರ್ಚೆ ಮಾಡಿದ್ದು, ಡಿಸೆಂಬರ 8ಕ್ಕೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಮುಂದಿನ ವಾರ ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಲಾಗುತ್ತದೆ. ಮತ್ತು ಈ ಬಗ್ಗೆ ಶಾಸಕರುಗಳಿಗೆ ಎರಡು ದಿನದಲ್ಲಿ ಸರಕ್ಯೂಲರ್ ಕಳುಹಿಸುತ್ತೇನೆ. ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆಯುವಂತೆ ನೋಡಿಕೊಳ್ಳುವೆ.
ಹಣ ಪಡೆದು ಮತ ಚಲಾಯಿಸುವ ಪದ್ಧತಿ ಹೋಗಬೇಕಿದೆ. ಯಾರೇ ಇರಲಿ, ವಿನಾಕಾರಣ ಚರ್ಚೆ ಮಾಡಬಾರದು. ರಾಜ್ಯದ ಜನರ ಪರವಾಗಿ ಬೇಕಾದಷ್ಟು ಕೆಲಸಗಳಿವೆ. ಅದರ ಬಗ್ಗೆ ರಾಜಕಾರಣಿಗಳು ಮಾತನಾಡಲಿ! ಶಾಸಕರಾದವರು ಮಾದರಿಯಾಗಬೇಕು ಎಂದು ಹೇಳಿದರು.





