ಪ್ರೊ. ಶಿ. ಶಿ. ಬಸವನಾಳರು ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆ ಕನ್ನಡ ಸಾಹಿತ್ಯದ ಉನ್ನತಿಗಾಗಿ ಶ್ರಮಿಸಿದ ಮಹಾ ಕಾಯಕಯೋಗಿಗಳು. ಮತ್ತು ಎಲ್ಲರಂತೆ ಬದುಕದೇ ಎಲ್ಲರಿಗಾಗಿ ಲೇಸೆನಿಸಿಕೊಂಡು ಬದುಕಿದ ಪುಣ್ಯಪುರುಷರು ಎಂದು ಅಂಜುಮನ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರುದ್ರೇಶ ಮೇಟಿ ಧಾರವಾಡದ ಕೆ.ಎಲ್.ಇ. ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾತನಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಆಯೋಜಿಸಿದ್ದ ‘ಪ್ರೊ. ಶಿ. ಶಿ. ಬಸವನಾಳವರ ಬದುಕು-ಬರಹ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಅಂದಿನ ಮುಂಬೈ ಪ್ರಾಂತದ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಸವನಾಳರು, ಪುಣೆಯಂತೆ ಉತ್ತರ ಕರ್ನಾಟಕದಲ್ಲಿ ಗುಣಾತ್ಮಕ ಶಿಕ್ಷಣ ನೀಡುವಂತಹ ಶಿಕ್ಷಣ ಸಂಸ್ಥೆ ಕಟ್ಟಬೇಕೆಂಬ ಮಹಾದಾಸೆ ಹೊಂದಿ ಕೆ.ಎಲ್.ಇ. ಸಂಸ್ಥೆ ಸ್ಥಾಪನೆಗೆ ಕಾರಣರಾದ ಸಪ್ತರ್ಷಿಗಳಲ್ಲೊಬ್ಬರಾಗಿ ಬೆಳಗಾವಿಯ ಲಿಂಗರಾಜ ಕಾಲೇಜು, ಧಾರವಾಡದ ಆರ್.ಎಲ್.ಎಸ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದರು.
ಇಂದು ಕೆ.ಎಲ್.ಇ. ಅಂತರಾಷ್ಟ್ರೀಯ ಖ್ಯಾತಿ ಪಡೆಯಲು ಶಿ.ಶಿ. ಬಸವನಾಳರ ಶ್ರಮವೂ ಇದೆ. ಶಿ. ಶಿ. ಬಸವನಾಳ ಓದಿದ್ದು ಇತಿಹಾಸ ಹಾಗೂ ಅರ್ಥೈಶಾಸ್ತ್ರವಾದರೂ ಕನ್ನಡದ ಪ್ರಖಾಂಡ ಪಂಡಿತರಾಗಿದ್ದರು. ವಚನ ಸಾಹಿತ್ಯ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರ. ವೀರಶೈವ ಸಾಹಿತ್ಯಕ್ಕೂ ಸಂಬAಧಿಸಿದ ಕೃತಿ ರಚಿಸಿದ್ದಾರೆ. ಸಮರ್ಥ ಸಂಪಾದಕರಾಗಿ, ಸಂಶೋಧಕರಾಗಿ ಅನುಮಪ ಸೇವೆಗೈದಿದ್ದಾರೆ. ಬಹುಭಾಷಾ ವಿಶಾರದರಾದ ಅವರು ಪಡೆದದ್ದಕ್ಕಿಂತ ಸಮಾಜಕ್ಕಾಗಿ ನೀಡಿದ್ದೇ ಜಾಸ್ತಿ ಎಂದು ಹೇಳಿದರು.
ದತ್ತಿದಾನಿ ರವೀಂದ್ರ ಶಿ. ಬಸವನಾಳ ದತ್ತಿ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮೃತ್ಯುಂಜಯ ಕಾಲೇಜಿನ ಪ್ರಾಚಾರ್ಯ ಡಾ. ನೀಲಕ್ಕ ಪಾಟೀಲ ಮಾತನಾಡಿ, ಪ್ರೊ. ಶಿ. ಶಿ. ಬಸವನಾಳ ಅವರದು ಘನವಾದ ಬದುಕು. ಅವರ ಬದುಕಿನ ಅವಧಿ ಕಡಿಮೆಯಾದರೂ ಸಾಧಿಸಿದ ಸಾಧನೆ ದೊಡ್ಡದು. ಅವರು ಬಹುಮುಖ ವ್ಯಕ್ತಿತ್ವದ ವಿಭಿನ್ನ ನೆಲೆಯ ಸಾಧಕರು ಎಂದು ಸ್ಮರಿಸಿದರು. ಪ್ರೊ. ಶಿ.ಶಿ. ಬಸವನಾಳ 132ನೇ ಜನ್ಮ ದಿನದ ಪ್ರಯುಕ್ತ ಆರ್.ಎಲ್.ಎಸ್. ಆವರಣದಲ್ಲಿರುವ ಪ್ರೊ. ಶಿ.ಶಿ. ಬಸವನಾಳ ಮತ್ತು ಶಿರಸಂಗಿ ಲಿಂಗರಾಜ ದೇಸಾಯಿಯವರ ಪುತ್ಥಳಿಗೆ ಸಂಘದಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು ಎಂದರು.
ಇದನ್ನೂ ಓದಿ ಧಾರವಾಡ | ನಿಮ್ಮ ಮೊಬೈಲ್ ಕಳೆದು ಹೋಗಿದೆಯೇ? ಹುಡುಕಲು ಈ ಆ್ಯಪ್ನ್ನು ಡೌನಲೋಡ ಮಾಡಿಕೊಳ್ಳಿ
ಕು. ಸುಶ್ಮೀತಾ ಪ್ರಾರ್ಥಿಸಿದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಡಾ. ರೆಹಮಾನ ಗೊರಜನಾಳ ಪರಿಚಯಿಸಿದರು. ಡಾ. ಬಾಬು ಬೆಣ್ಣಿ ವಂದಿಸಿದರು. ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಅಶೋಕ ಚಿಕ್ಕೋಡಿ, ಶಂಕರಲಿಂಗ ಶಿವಳ್ಳಿ, ಡಾ. ಮೃತ್ಯುಂಜಯ ಶೆಟ್ಟರ, ಆರ್.ಬಿ. ಬನಪ್ಪನವರ, ಶರಣಪ್ಪ ಬಂಡ್ಯಾಳ, ಡಾ. ಮೊನೊಲಿಸಾ ಅಕ್ಕಿಹಾಳ, ಸಿ.ವ್ಹಿ. ಕಣಬರ್ಗಿ, ಹರಿಹರ, ಮಾಧುರಿ ಚಿಕ್ಕೋಡಿ ಸೇರಿದಂತೆ ಶಿ.ಶಿ. ಬಸವನಾಳ, ಚಿಕ್ಕೋಡಿ ಕುಟುಂಬದವರು, ಹಿತೈಷಿಗಳು ಇದ್ದರು.





