ದುಡಿದಷ್ಟು ವೇತನ ನೀಡದಿರುವುದು ಸೇರಿದಂತೆ ಆಶಾ ಕಾರ್ಯಕರ್ತೆಯರ ಇತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಧಾರವಾಡದಲ್ಲಿ ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಕಲಾಭವನ ಮೈದಾನದಿಂದ ಜಿ.ಪಂ ಕಚೇರಿವರೆಗೆ ಸಾಗಿದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಹಗಲಿರುಳು ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನ, ಅವರ ಚಟುವಟಿಕೆಗಳನ್ನು ಆರ್ಸಿಎಚ್ ಪೋರ್ಟಲ್ಗೆ ಲಿಂಕ್ ಮಾಡಿರುವುದರಿಂದ ವೇತನ ಸಂಪೂರ್ಣವಾಗಿ ಸಿಗದೇ ಕಳೆದ ಐದಾರು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೇ ಮೊಬೈಲ್ ಆಧಾರಿತ ಕೆಲಸಗಳ ಒತ್ತಡ, ಎನ್ಸಿಡಿ, ಎಸಿಎಫ್, ಟಿಬಿ ಸಂಬಂಧಿತ ಕೆಲಸಕ್ಕೆ ವರ್ಷಗಟ್ಟಲೆ ಪ್ರೋತ್ಸಾಹಧನ ನೀಡದಿರುವ ಇತ್ಯಾದಿ ಸಮಸ್ಯೆಗಳಿಂದ ಜಿಲ್ಲೆಯ ಆಶಾ ಕಾರ್ಯಕರ್ತೆಯರು ತತ್ತರಿಸಿದ್ದಾರೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರಿಗೆ ನಿಗದಿ ಪಡಿಸಿದ ಕೆಲಸಗಳನ್ನು ಹೊರತು ಪಡಿಸಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯದಿಂದ ಬಳಸಿಕೊಳ್ಳುತ್ತಿರುವರು. ಈ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ತಳಹಂತದಿಂದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಈ ಸಮಸ್ಯೆಗಳನ್ನು ನೀಗಲು ಎಲ್ಲ ಆಶಾ ಕಾರ್ಯಕರ್ತೆಯರು ಒಗ್ಗಟ್ಟಿನಿಂದ ರಾಜಿರಹಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆಕೊಟ್ಟರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಜಿಲ್ಲೆಯಲ್ಲಿ ಜಿ.ಪಂ ಸಿಇಒ ಅಧ್ಯಕ್ಷತೆಯಲ್ಲಿ ಆಶಾಗಳ ಕುಂದುಕೊರತೆ ನಿವಾರಣಾ ಸಭೆ ಮಾಡಬೇಕೆಂದು ಇಲಾಖೆ ಆದೇಶವಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಸಭೆಯನ್ನು ನಡೆಸದಿರುವುದು ಅತ್ಯಂತ ವಿಷಾದನೀಯ. ಆದ್ದರಿಂದ ಕೂಡಲೇ ಜಿ.ಪಂ ಸಿಇಒ ಅವರು ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಮಾತನಾಡಿ, ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಇದೇ ನವೆಂಬರ್.6ರಂದು ಸಭೆ ನಿಗದಿ ಮಾಡುವುದಾಗಿ ಘೋಷಿಸಿದರು.
ಭುವನಾ ಬಳ್ಳಾರಿ, ಸುಳ್ಳದ, ಮಂಜುಳಾ ಗಾಡಗೋಳಿ, ರಾಜೇಶ್ವರಿ ಕೋರಿ, ಸರೋಜಾ ಮಡಿವಾಳರ, ಭಾರತಿ ಶೆಟ್ಟರ್, ಜಯಶ್ರೀ ದೇಸಾಯಿ, ರಾಧ ರಾಟೊಳ್ಳಿ, ರೇಣುಕಾ ಬೋಗಾರ, ಸುಜಾತಾ ಅಂಗಡಿ, ಸುಜಾತಾ ಹಿರೇಮಠ, ಶೋಭಾ ಸಾವಂತನವರ, ಗೌರಮ್ಮ ಮೇಟಿ, ಅನ್ನಪೂರ್ಣ ಗಿರಿಯಪ್ಪಗೌಡರ, ಸುಜಾತಾ ಅಂಗಡಿ ಉಪಸ್ಥಿತರಿದ್ದರು.





