ಗಾದೆಗಳು ನಮಗೆ ಜೀವನ ಪಾಠ ಕಲಿಸುವ ಪ್ರಬಲ ಮಾಧ್ಯಮ. ಅವು ನಮ್ಮ ಹಿರಿಯರ ಲೋಕಾನುಭವದ ಬದುಕಿನ ಮಾತುಗಳು. ವೇದ ಸುಳ್ಳಾದರೂ ಗಾದೆ ಎಂದಿಗೂ ಸುಳ್ಳಾಗುವುದಿಲ್ಲ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ಆನಂದ ಚಿಗಟೇರಿ ಸಂಸ್ಮರಣಾ ದತ್ತಿ ಕಾರ್ಯಕ್ರಮದಲ್ಲಿ ‘ಕನ್ನಡ ಗಾದೆ ಮಾತುಗಳ ಆಧರಿಸಿ ಕಥೆ ಹೇಳುವ ಸ್ಪರ್ಧೆ’ಯ ಅತಿಥಿಯಾಗಿ ಜೆ.ಎಸ್.ಎಸ್. ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಗಂಗಾ ಚವಣ್ಣವರ ಹೇಳಿದರು.
ಇಂದಿನ ತ್ವರಿತ ಕಾಲದಲ್ಲಿ ಜ್ಞಾನವೊಂದಿದ್ದರೆ ಸಾಲದು, ಜ್ಞಾನದ ಜೊತೆಗೆ ಕೌಶಲ್ಯವೂ ಬಹಳ ಮುಖ್ಯ. ವಿದ್ಯಾರ್ಥಿಗಳು ಇಂದು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತ ಬೇಡ. ಪಠ್ಯ ಮೀರಿದ ಜ್ಞಾನ ಅಗತ್ಯವಾಗಿದೆ. ಗಾದೆಗಳು ನಮ್ಮ ದೈನಂದಿನ ಬದುಕಿನ ಮೂಲವಾಗಿವೆ. ನಮ್ಮ ಸಮಾಜದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುತ್ತವೆ. ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸುತ್ತಿರುವುದು ಅಭಿನಂದನೀಯ ಎಂದರು.
ಜೆ.ಎಸ್.ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ದೀಪಾ ಸಂಕಪಾಳೆ ಮಾತನಾಡುತ್ತಾ, ಗಾದೆಗಳು ಭಾಷೆಯ ಅವಿಭಾಜ್ಯ ಅಂಗ. ಜೀವನದ ಅನುಭವ, ಜ್ಞಾನ, ನಂಬಿಕೆಗಳನ್ನು ಸಂಕ್ಷಿಪ್ತವಾಗಿ ರೂಪಕಗಳ ಮೂಲಕ ವ್ಯಕ್ತಪಡಿಸುವ ಸಾಂಪ್ರದಾಯಿಕ ಹೇಳಿಕೆಗಳು ಅದರಲ್ಲೂ, ಜಾನಪದದ ಅನೇಕ ಗಾದೆಗಳು ಮೌಖಿಕ ಪರಂಪರೆ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಶಿವಾನಂದ ಚೌಗಲಾ ಮಾತನಾಡಿ, ಇಂದು ಮಹಿಳೆಯರು ಹೇಳಿದ ಗಾದೆಗಳು ಸತ್ಯ ಹಾಗೂ ಸತ್ವವುಳ್ಳವುಗಳಾಗಿವೆ. ಮಹಿಳಾ ಮಂಡಳದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದು ಖುಷಿ ಎನಿಸಿದೆ. ಎಲ್ಲರೂ ತಮ್ಮ ಪ್ರಭುದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ರಿಯಾಲಿಟಿ ಶೋ ದಂತಹ ಕಾರ್ಯಕ್ರಮದಲ್ಲಿ ನಮ್ಮ ಕನ್ನಡದ ಮಹಿಳೆಯರು ಹೆಚ್ಚು ಭಾಗವಹಿಸುವಂತಾಗಬೇಕೆಂದರು.
ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಡಾ. ಮಹೇಶ ಧ. ಹೊರಕೇರಿ ನಿರ್ವಹಿಸಿದರು. ಡಾ. ನಿರ್ಮಲಾ ಚಿಗಟೇರಿ, ಡಾ. ಶಾರದಾ ಚಿಗಟೇರಿ ಪರಿಚಯಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದತ್ತಿದಾನಿಗಳ ಪರವಾಗಿ ಡಾ. ಮಂಗಳಾ ಚಿಗಟೇರಿ ಹಾಗೂ ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದು ಮಾತನಾಡಿದರು. ವೀರಣ್ಣ ಒಡ್ಡೀನ ಕೊನೆಯಲ್ಲಿ ವಂದಿಸಿದರು.
ಇದನ್ನೂ ಓದಿ ಧಾರವಾಡ | ಕನ್ನಡ ಕಸ್ತೂರಿಯಷ್ಟೇ ಪರಿಮಳವಾದದು: ರೇಣುಕ ಅಮಲಝರಿ
ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಜಯಶ್ರೀ ಗುತ್ತಲ ಪ್ರಥಮ, ಜಯಶೀಲಾ ಹಿರೇಮಠ ದ್ವಿತೀಯ, ಮಂಜುಳಾ ಹೊಸೂರ ತೃತೀಯ ಸ್ಥಾನ ಪಡೆದರೆ, ವಿಜಯಾ ಕುಲಕರ್ಣಿ ಹಾಗೂ ಪ್ರೇಮಾ ನಡೆಕಟ್ಟ್ಟಿ ಸಮಾಧಾನಕರ ಬಹುಮಾನ ಪಡೆದರು. ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ ಶೈಲಜಾ ಅಮರಶೆಟ್ಟಿ, ಪ್ರೊ. ಈಶಣ್ಣ ಸೇರಿದಂತೆ ಮುಂತಾದವರಿದ್ದರು.





