ವಿಪರೀತ ಮಳೆಯಿಂದಾಗಿ ಹೆಸರು ಬೆಳೆ ನಾಶವಾಗಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಧಾರವಾಡ ಜಿಲ್ಲೆ ನವಲಗುಂದ ತಾಲೂಕು ತಹಶೀಲ್ದಾರ್ ಸುಧೀರ್ ಸಾಹುಕಾರ ಅವರಿಗೆ ರೈತರು ಮನವಿ ಸಲ್ಲಿಸಿದರು.
ಮಾರುಕಟ್ಟೆಯಲ್ಲಿ ಹೆಸರು ಕಾಳು ಪ್ರತಿ ಕ್ವಿಂಟಲ್ಗೆ 3 ರಿಂದ 5 ಸಾವಿರವರೆಗೆ ಖರೀದಿ ಮಾಡಲಾಗುತ್ತಿದೆ. ಇದರಿಂದ ಅನ್ನದಾತರಿಗೆ ಅನ್ಯಾಯವಾಗುತ್ತಿದ್ದು, ರೈತರ ಸಮಸ್ಯೆ ಗೊತ್ತಿದ್ದರೂ ಜನಪ್ರತಿನಿಧಿಗಳು ಖರೀದಿ ಕೇಂದ್ರ ಪ್ರಾರಂಭಿಸಲು ಮುಂದಾಗುತ್ತಿಲ್ಲ. ಆಳುವವರು ದೇಶದ ಬೆನ್ನೆಲುಬು ಎನ್ನುವ ರೈತನ ಬೆನ್ನು ಮುರಿಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಮಾಬುಸಾಬ ಯರಗುಪ್ಪಿ ಅಸಮಾಧಾನ ವ್ಯಕ್ತಪಡಿಸಿದರು.
ಸತತ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದ ಹೆಸರು ಬೆಳೆ ನಾಶವಾಗಿದೆ. ರೈತರು ಸಾಲ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಬೆಳೆದಿದ್ದರು. ಈಗ ಅಳಿದುಳಿದ ಹೆಸರನ್ನು ಖರೀದಿಸಲು ಬೆಂಬಲ ಬೆಲೆಯಡಿ ಸರ್ಕಾರ ಈ ಕೂಡಲೇ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಬೇಕು. ಹೆಸರು ಬಿತ್ತಿ, ರಾಶಿ ಮಾಡಲು ಎಕರೆಗೆ ಕನಿಷ್ಠ 15 ರಿಂದ 20 ಸಾವಿರ ರೂ. ಖರ್ಚಾಗುತ್ತದೆ. ಈಗ ನೋಡಿದರೆ ಸೂಕ್ತ ಬೆಲೆ ಸಿಗುತ್ತಿಲ್ಲ. ವ್ಯಾಪಾರಿಗಳು ಹೇಳಿದ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾದರೆ ರೈತರು ಬದುಕೋದು ಹೇಗೆ? ಆದ್ದರಿಂದ ಕೂಡಲೆ ರೈತರ ಸಮಸ್ಯೆಗೆ ಧಾವಿಸಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಧಾರವಾಡ | ಎಸ್ಐಆರ್ ಕೈಬಿಡಲು ಚುನಾವಣಾ ಆಯೋಗಕ್ಕೆ ಎಸ್ಯುಸಿಐ ಒತ್ತಾಯ
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಸಿರಾಜುದ್ದಿನ ಧಾರವಾಡ, ಮಹಮ್ಮದಲಿ ಮಿರ್ಜಿ, ನಿಂಗಪ್ಪ ಕುಂಬಾರ ಇನ್ನಿತರರು ಇದ್ದರು.





