ಧಾರವಾಡದಲ್ಲಿ ನಡೆದ ಆರ್ಎಸ್ಎಸ್ ಪಥ ಸಂಚಲನದ ಪರಿಣಾಮ ಸಾರ್ವಜನಿಕ ಪ್ರಯಾಣಿಕರು ಪರದಾಡುವಂತ ವಾತಾವರಣ ಸೃಷ್ಠಿಯಾಗಿತ್ತು. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಥಸಂಚಲನ ರೂಪಿಸಿಕೊಳ್ಳಬೇಕು ಎಂದು ಜನರು ಆಕ್ರೋಶಗೊಂಡರು.
ನಗರದ ಕೆ. ಇ. ಬೋರ್ಡ್ ಮೈದಾನದಿಂದ್ ಮೂರು ತಂಡವಾಗಿ ಪಥ ಸಂಚಲನ ಶುರುವಾಗಿ ಸಿಬಿಟಿ, ಜುಬಲಿ ಸರ್ಕಲ್ ಮಾರ್ಗವಾಗಿ ಕೆಸಿಡಿ ಮೈದಾನವನ್ನು ಬಂದು ತಲುಪಿತು. ಇದರಿಂದ ನಗರದಲ್ಲಿ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರಿಂದ ಜನರು 3-4 ಕಿಮೀ ದೂರ ನಡೆದು ಬಸ್ಸುಗಳಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದವರೆಗೆ ಮಹಿಳೆಯರು, ಮಕ್ಕಳು, ವೃದ್ಧರು ನಡೆದುಕೊಂಡೇ ಹೋದರು. ಇನ್ನು ವಾಹನ ಸವಾರರು ಹಳೆ ಎಸ್.ಪಿ ಕೆಚೇರಿ, ರಾಣಿ ಚೆನ್ನಮ್ಮ ಪಾರ್ಕ್, ಸಬ್ ಜೈಲು ಮಾರ್ಗವಾಗಿ ಸಂಚರಿಸಲು ಹರಸಾಹಸಪಟ್ಟರು.

ಈ ಕುರಿತು ಸಾರ್ವಜನಿಕರು ಮಾತನಾಡುತ್ತಾ, ಈಗ ನಡೆಯುತ್ತಿರುವ ಆರ್.ಎಸ್.ಎಸ್ ಪಥ ಸಂಚಲನದಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಎಲ್ಲೆಂದರಲ್ಲಿ ಬಸ್ಸಿನವರು ಜನರನ್ನು ಇಳಿಸಿ ಹೋಗುತ್ತಿದ್ದಾರೆ. ಈ ಪಾದಯಾತ್ರೆಯು ರಸ್ತೆಯ ಒಂದೇ ಬದಿ ಹಿಡಿದು ಹೋಗಿದ್ದರೂ ನಡೆಯುತ್ತಿತ್ತು. ಇನ್ನೊಂದು ಬದಿಯಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದವು. ಯಾವುದೇ ಕಾರ್ಯಕ್ರಮವಾಗಲಿ ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡಬಾರದು ಮೇಲಾಗಿ ಎಲ್ಲರಿಗೂ ಅನುಕೂಲ ಆಗುವಂತೆ ಇರಬೇಕು. ಇದೀಗ ವಯಸ್ಸಾದವರು, ಮಹಿಳೆಯರು 3 ಕಿಲೋಮೀಟರ್ ನಡೆದು ಹೋಗುವಂತ ಸ್ಥಿತಿ ಬಂದಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಜಾಗತೀಕರಣದಿಂದ ಜೀವನದ ಮೌಲ್ಯಗಳು ಬದಲಾಗುತ್ತಿವೆ: ಐ. ಜಿ. ಸನದಿ
ಧಾರವಾಡ ನಗರವೆಲ್ಲ ಭಾಗಶಃ ಕೇಸರಿಮಯವಾಗಿತ್ತು. ತಲೆಯ ಮೇಲೆ ಕರಿಯ ಟೋಪಿ, ಬಿಳಿಯ ಅಂಗಿ, ಖಾಕಿ ಪ್ಯಾಂಟು, ಕೈಯಲ್ಲೊಂದು ಕೋಲು ಹಿಡಿದುಕೊಂಡ ದೃಶ್ಯ ಎದ್ದು ಕಾಣುತ್ತಿತ್ತು. ಅನೇಕ ಚಿಕ್ಕಮಕ್ಕಳೂ ಇದರಲ್ಲಿ ಭಾಗವಹಿಸಿದ್ದರು. ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ, ಈರೇಶ್ ಅಂಚಟಗೇರಿ ಸೇರಿದಂತೆ ಬಿಜೆಪಿಯ ವಿವಿಧ ರಾಜಕೀಯ ಮುಖಂಡರು, ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದರ ಹೊರಗೆ ಜನರು ಸಂತೆ ಚೀಲ ಹೊತ್ತು, ಹೆಣ್ಣುಮಕ್ಕಳು ಮಕ್ಕಳನ್ನು ಎತ್ತಿಕೊಂಡು, ವೃದ್ಧರು ಕಷ್ಟಪಟ್ಟು ನಡೆಯುವ ದೃಶ್ಯ ಕಣ್ಣಿಗೆ ಕಟ್ಟುವಂತೆ ಇತ್ತು. ಜನರನ್ನು ಇಳಿಸಲು ಸಾರಿಗೆ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲುವುದು ಕಾಣುತ್ತಿತ್ತು. ಇದರಿಂದ ಸಾರ್ವಜನಿಕರು ಹಿಡಿ ಶಾಪ್ ಹಾಕುತ್ತಿದ್ದರು.





