44 ವರ್ಷಗಳು ಗತಿಸಿದರೂ ಸಹ ದ.ರಾ.ಬೇಂದ್ರೆಯವರು ತಮ್ಮ ಸಾಹಿತ್ಯದ ಮೂಲಕ ಓದುಗರ ಜನಮಾನಸದಲ್ಲಿ ಹಾಸುಹೊಕ್ಕಾಗಿದ್ದಾರೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವುದರ ಜೊತೆಗೆ ಅವರ ಜನ್ಮದಿನ ಜನೆವರಿ 31 ನ್ನು ಕವಿದಿನ ಎಂದು ಘೋಷಣೆ ಮಾಡಬೇಕೆಂದು ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಿದರು.
ಅಕ್ಟೋಬರ್ 26ರಂದು ನಡೆದ ಬೇಂದ್ರೆಯವರ 44 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 44 ವರ್ಷಗಳ ಹಿಂದೆ ದೀಪಾವಳಿಯ ನರಕ ಚತುದರ್ಶಿಯಂದೇ ದ.ರಾ.ಬೇಂದ್ರೆಯವರು ಅಸ್ತಂಗತರಾಗಿದ್ದು, ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಕತ್ತಲೆ ಆವರಿಸಿದಂತಾಗಿತ್ತು. ಬೇಂದ್ರೆಯವರ ಕಾವ್ಯವು ನವನವೀನವಾದ ಕಾವ್ಯಗಳಾಗಿವೆ. ಅವುಗಳನ್ನು ಎಷ್ಟು ಸಲ ಓದುತ್ತೇವೆಯೋ ಅಷ್ಟು ಹೊಸ ಹೊಸ ಅರ್ಥಗಳನ್ನು ನೀಡುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ಬದುಕಿನ ಮೌಲ್ಯಗಳನ್ನು ಬಹಳಷ್ಟು ಗಾಢವಾಗಿ ತಮ್ಮ ಸಾಹಿತ್ಯದ ಮೂಲಕ ತೋರಿಸಿಕೊಟ್ಟವರು ಬೇಂದ್ರೆ. ಬೇಂದ್ರೆಯವರ ಸಾಹಿತ್ಯವನ್ನು ಸ್ಪರ್ಶಿಸುವುದು, ಅವರ ಕಾವ್ಯವನ್ನು ಪ್ರವೇಶಿಸುವುದು ಸಾಮಾನ್ಯವಾದುದಲ್ಲ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಮಾತನಾಡಿ, ಬೇಂದ್ರೆಯವರು ಅಜ್ಜಿ ಗೋಧುಬಾಯಿ, ತಾಯಿ ಅಂಬವ್ವ ಅವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಹೆಂಡತಿಯನ್ನು ಸಖೀಯನ್ನಾಗಿ ನೋಡಿದವರು. ತಾಯಿ ಹೆಸರನ್ನೊಳಗೊಂಡು ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಇಟ್ಟಿರುವುದು ಅವರ ಸ್ತ್ರೀಪರ ವಿಶೇಷ ನೋಟವನ್ನು ಗಮನಿಸಬಹುದಾಗಿದೆ. ಇಂದಿನ ಮಕ್ಕಳಿಗೆ ಬೇಂದ್ರೆಯವರ ಕಾವ್ಯದ ಸೊಗಡನ್ನು ಅರ್ಥೈಸಬೇಕಿದೆ ಎಂದರು.
ಧಾರವಾಡದ ಗಾಯಕಿ ವಿದುಷಿ ರಾಧಾ ದೇಸಾಯಿ ಮತ್ತು ವೃಂದದವರು. ಡಾ.ದ.ರಾ.ಬೇಂದ್ರೆಯವರ ಗೀತೆಗಳ ಗಾಯನ ಪ್ರಸ್ತುತ ಪಡಿಸಿದರು. ಅಪೂರ್ವಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಈ ಸುದ್ಧಿ ಓದಿದ್ದೀರಾ? ಹುಬ್ಬಳ್ಳಿ | ವೋಟ್ ಚೋರಿ; ಆಧಾರ ಸಹಿತವಾಗಿ ಬಹಿರಂಗ ಮಾಡುತ್ತೇವೆ: ಮಯೂರ್ ಜಯಕುಮಾರ್
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯ ಡಾ.ಶಿಲಾಧರ ಮುಗಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಅಶೋಕ ಶೆಟ್ಟರ, ಡಾ. ಶರಣಮ್ಮ ಗೊರೇಬಾಳ, ಇಮಾಮಸಾಬ್ ವಲ್ಲೆಪ್ಪನವರ, ಪ್ರಭು ಕುಂದರಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





