ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಇಂತಹ ಕೃತ್ಯಗಳು ಸಮಾಜಕ್ಕೆ ಅಪಮಾನಕರ. ಸರ್ಕಾರ ಮತ್ತು ಇಲಾಖೆ ಕೂಡಲೇ ಸ್ಪಂದಿಸಿ, ಕಾಮಗಾರಿ ಪೂರ್ಣಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ಜವಾಬ್ದಾರಿಯುತ ಆಡಳಿತವನ್ನು ತೋರಿಸಬೇಕು. ಇದು ಕೇವಲ ಧಾರವಾಡದ ಸಮಸ್ಯೆಯಲ್ಲ, ಇಡೀ ರಾಜ್ಯದ ಶಿಕ್ಷಣ ವ್ಯವಸ್ಥೆಯ ಗಂಭೀರ ಸವಾಲಾಗಿ ಪರಿಣಮಿಸಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿ ಗ್ರಾಮ ಪಂಚಾಯಿತಿಯಿಂದ ಮನರೇಗಾ ಯೋಜನೆ ಅಡಿಯಲ್ಲಿ 2022-23ನೇ ಸಾಲಿನಲ್ಲಿ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಇಂದಿಗೂ ಕಾಮಗಾರಿ ಪೂರ್ಣಗೊಳ್ಳದೆ, ಶೌಚಾಲಯವು ಕಳಪೆ ಕಾಮಗಾರಿಯಲ್ಲಿ ನಿರ್ಮಾಣವಾಗಿದೆ. ಶೌಚಾಲಯ ನಿರ್ಮಾಣಗೊಂಡು 3 ವರ್ಷಗಳಾದರೂ ಇಂದಿಗೂ ಉದ್ಘಾಟನೆಯಾಗಿಲ್ಲ. ನಿರ್ಮಾಣವಾಗುತ್ತಿರುವ ಶೌಚಾಲಯವನ್ನು ಶಾಲೆಗೂ ಹಸ್ತಾಂತರ ಮಾಡದೇ, ಕಾಮಗಾರಿ ಪೂರ್ಣಗೊಂಡಿದೆ ಎಂದು ಶಾಲಾ ಮುಖ್ಯಪಾಧ್ಯಾಯರೇ ಸಹಿ ಮಾಡಿರುವಂತೆ ನಕಲಿ ಪ್ರತಿ ಸೃಷ್ಟಿಸಲಾಗಿದೆ ಎಂಬ ತೀವ್ರ ಆರೋಪಗಳು ಕೇಳಿಬರುತ್ತಿವೆ.
ಹೌದು, ಕಲಘಟಗಿ ತಾಲೂಕಿನ ಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಕೊಪ್ಪ ಸರ್ಕಾರಿ ಮಾದರಿ ಶಾಲೆಯಲ್ಲಿ ಮಕ್ಕಳ ಹಿತರಕ್ಷಣೆ ಹಾಗೂ ಮೂಲಭೂತ ಹಕ್ಕುಗಳ ರಕ್ಷಣೆಯ ಅಗತ್ಯಕ್ಕಾಗಿ 2022-23ನೇ ಸಾಲಿನಲ್ಲಿ ಹೈಟೆಕ್ ಶೌಚಾಲಯದ ನಿರ್ಮಾಣ ಕಾಮಗಾರಿಯು ಪ್ರಾರಂಭವಾಗುತ್ತದೆ. ಈ ಶೌಚಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿ, ಶಾಲೆಗೆ ಹಸ್ತಾಂತರ ಮಾಡಲು ಮನವಿ ಕೋರಿ 2025ರ ಜನವರಿ 4 ಮತ್ತು ಅಕ್ಟೊಬರ್ 24ರಂದು ಶಾಲಾ ಮುಖ್ಯಪಾಧ್ಯಾಯರು ಗ್ರಾಮ ಪಂಚಾಯಿತಿಗೆ ಪತ್ರ ಬರೆಯುತ್ತಾರೆ. ಆದರೂ; ಗ್ರಾ.ಪಂ. ನಿರ್ಲಕ್ಷ್ಯದಿಂದ ಹಸ್ತಾಂತರ ಮಾಡುವುದು ವಿಳಂಬವಾಗುತ್ತದೆಂದು ಸ್ಥಳೀಯರು ಹೇಳುತ್ತಾರೆ. ಜುಲೈ 8ರಂದು ಕಾಮಗಾರಿ ಮುಕ್ತಾಯಗೊಂಡಿದೆ ಎಂದು ಎಸ್ಡಿಎಂಸಿ ಸಮಿತಿ ಹಾಗೂ ಗ್ರಾ.ಪಂ ಸದಸ್ಯರ ಸಹಕಾರದಲ್ಲಿ ಶಾಲೆಗೆ ಸುಪರ್ದಿ ನೀಡಲಾಗಿದೆ ಎಂದು ಶಾಲಾ ಮುಖ್ಯಪಾಧ್ಯಾಯರ ಹೆಸರಿನಲ್ಲಿ ನಕಲು ಪತ್ರ ಸೃಷ್ಟಿಸಲಾಗಿದೆ ಎಂಬುದನ್ನು ಓಕೆನ್ ಸ್ಕ್ಯಾನರ್ನಲ್ಲಿ ಸೃಷ್ಟಿಸಿದ ದಾಖಲೆಗಳು ಸ್ಪಷ್ಟಪಡಿಸುತ್ತವೆ.
ಈ ಕುರಿತು ಈದಿನ.ಕಾಮ್ ಜತೆಗೆ ಯುವ ಹೋರಾಟಗಾರ ಅಭಿಷೇಕ ರಾಯಕೊಪ್ಪ ಮಾತನಾಡಿ, “ಸುಮಾರು 4.50 ಲಕ್ಷ ರೂಪಾಯಿ ಅನುದಾನದಲ್ಲಿ ಮನರೇಗಾ ಯೋಜನೆ ಅಡಿ ಗ್ರಾಮ ಪಂಚಾಯಿತಿಯಿಂದ ಹೈಟೆಕ್ ಶೌಚಾಲಯ ಮಂಜೂರು ಮಾಡಿದ್ದಾರೆ. ಆದರೆ; ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಮಕ್ಕಳ ಆಯೋಗಕ್ಕೆ ದೂರು ಸಲ್ಲಿಸಿದ ನಂತರ ಗ್ರಾಮ ಪಂಚಾಯತಿಯಿಂದ ಕಾಮಗಾರಿ ಪೂರ್ಣಗೊಂಡಿದೆ ಎಂಬ ವರದಿ ಸಿಗುತ್ತದೆ. ಅದರ ಪ್ರಕಾರ ಸ್ಥಳಕ್ಕೆ ಬಂದು ಭೆಟ್ಟಿ ಕೊಟ್ಟು, ಶಾಲೆಯಿಂದ ವರದಿ ಸಂಗ್ರಹಿಸಿದಾಗ; ವಾಸ್ತವದಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ಗೊತ್ತಾಗುತ್ತದೆ. ಇದರಲ್ಲಿ ಗ್ರಾಮ ಪಂಚಾಯಿತಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಯೋಗವನ್ನು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಯಾಮಾರಿಸಿದೆ. ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ ಹೆಚ್ ಮನಿಯಾರ್ ಅವರ ಅಧಿಕಾರಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಬೇಕಿತ್ತು, ಅಗಲಿಲ್ಲ. ಅಷ್ಟರಲ್ಲಿ ಪಿಡಿಒ ಅಮಾನತಿಗೆ ಒಳಗಾದರು” ಎಂದರು.

“ಪಿಎಂಶ್ರೀ ಸರ್ಕಾರಿ ಮಾದರಿ ಶಾಲೆಯಲ್ಲಿ ಎಲ್ಕೆಜಿಯಿಂದ ಏಳನೇ ತರಗತಿವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಒಟ್ಟು ಮಕ್ಕಳ ಸಂಖ್ಯೆ 399 ಇದ್ದು, ಗಂಡುಮಕ್ಕಳ ಸಂಖ್ಯೆ 213, ಹೆಣ್ಣುಮಕ್ಕಳ ವ ಸಂಖ್ಯೆ 186 ಇದೆ. ಈಗಾಗಲೇ ಶಾಲೆಯಲ್ಲಿರುವ ಶೌಚಾಲಯಗಳು ಮಕ್ಕಳಿಗೆ ಸಾಕಾಗುತ್ತಿಲ್ಲವೆಂದು ಅಪೂರ್ಣಗೊಂಡಿರುವ ಶೌಚಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿ ಶಾಲೆಗೆ ಹಸ್ತಾಂತರಿಸಲು ಕೋರಿ ಶಾಲೆಯ ವತಿಯಿಂದ ಪತ್ರವನ್ನು ಬರೆದಿದ್ದಾರೆ. ಅದಕ್ಕೂ ಗ್ರಾಪಂ ತಲೆಕೆಡಿಸಿಕೊಂಡಿಲ್ಲ. ಇನ್ನು ಹೈಟೆಕ್ ಹೆಸರಿನಲ್ಲಿ ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಪಿಡಿಓ ಎ ಹೆಚ್ ಮನಿಯಾರ್ ಸರ್ಕಾರದ ಹಣವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡುತ್ತಿದ್ದರೆಂಬ ಆರೋಪದ ಮೇಲೆ ಅಮಾನತಾದರು” ಎಂದು ಹೇಳಿದರು.
ಇನ್ನೊರ್ವ ಯುವ ಹೋರಾಟಗಾರ ಪ್ರಶಾಂತ್ ಹಂಚಿನಮನಿ ಮಾತನಾಡಿ, “ಗ್ರಾಮ ಪಂಚಾಯತಿಯವರು ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ ಶಾಲೆಗೆ ಹಸ್ತಾಂತರ ಮಾಡದೆ, ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿದ್ದಾರೆ. ಭಾವಚಿತ್ರದಲ್ಲಿರುವಂತೆ ಕಾಮಗಾರಿ ಪೂರ್ಣಗೊಂಡಿರುವುದಾಗಿ ಶಾಲಾ ಮುಖ್ಯೋಪಾಧ್ಯಾಯರು ಬರೆದು ಸಹಿ ಮಾಡಿದ್ದಾರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ವಾಸ್ತವಿಕವಾಗಿ ಗಮನಿಸಿದಾಗ ಕಾಮಗಾರಿ ಪೂರ್ಣಗೊಳ್ಳದೆ ಇರುವುದು ಸ್ಪಷ್ಟವಾಗುತ್ತದೆ. ಈ ಮೂಲಕ ಶಾಲೆಯ ಹೆಸರನ್ನು ಹಾಳುಗೆಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದನ್ನು ಹೈಟೆಕ್ ಶೌಚಾಲಯವೆಂದು ಹೇಳಲಾಗಿದೆ. ಆದರೆ ಇಲ್ಲಿ ಗಮನಿಸಿದಾಗ, ಮೇಲ್ಛಾವಣಿಗೆ ಕಾಂಕ್ರೀಟ್ ಹಾಕುವ ಬದಲಿಗೆ ತಗಡು ಹಾಕಿರುವುದು ಕಂಡುಬರುತ್ತದೆ. ಈ ಬಗ್ಗೆ ಸೂಕ್ತ ತನಿಖೆಯಾಗಲಿ. ದಾಖಲೆಗಳ ಸಹಿತ ನಾವು ಹೊರಾಡಲು ಸಿದ್ಧರಿದ್ದೇವೆ” ಎಂದರು.

ಈ ಕುರಿತು ಎಸ್ಡಿಎಂಸಿ ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ, “ನಾವು ಹಲವು ಬಾರಿ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ ಶಾಲಾ ಸುಪರ್ದಿಗೆ ನೀಡಲು ಒತ್ತಾಯಿಸಿದ್ದೇವೆ. ಗ್ರಾಮ ಪಂಚಾಯಿತಿಯಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಕಾಮಗಾರಿ ಪೂರ್ಣಗೊಂಡಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಇಂದಿಗೂ ಶೌಚಾಲಯದಲ್ಲಿ ಸಿಂಕ್ ನಿರ್ಮಾಣವಾಗಿಲ್ಲ. ಕಾಂಕ್ರೀಟ್ ಹಾಕಿಲ್ಲ. ಇನ್ನಾದರೂ ಕಾಮಗಾರಿಯನ್ನು ಪೂರ್ಣಗೊಳಿಸಿ ಶೌಚಾಲಯಕ್ಕಾಗಿ ಪರದಾಡುವ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಲಿಕಾರ ಮಾತನಾಡಿ, “ಈಗಾಗಲೇ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಲಾಗಿದೆ. ಕಾಮಗಾರಿ ಮತ್ತು ಶಾಲಾ ಹಸ್ತಾಂತರ ವಿಚಾರದಲ್ಲಿ ಇಷ್ಟೊಂದು ವಿಳಂಬ ಆಗಬಾರದಿತ್ತು. ಎಂಜಿನಿಯರ್ ಕೂಡ ಬಂದು ನೋಡಿದ್ದಾರೆ. ಇನ್ನೊಂದು ವಾರದಲ್ಲಿ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅನುವು ಮಾಡಿಕೊಡುತ್ತೇವೆ. ನಾನೂ ಇತ್ತೀಚಿಗಷ್ಟೇ ಅಧಿಕಾರವನ್ನು ವಹಿಸಿಕೊಂಡಿದ್ದೇನೆ. ಈ ಮೊದಲು ಏನಾಗಿತ್ತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಇನ್ನು ಅದೇ ರೀತಿಯ ವಿಳಂಬವಾಗದಿರಲು ಕ್ರಮವಹಿಸಲಾಗುವುದು” ಎಂದು ತಿಳಿಸಿದರು.

ನಕಲಿ ದಾಖಲೆ ಸೃಷ್ಟಿಸಿರುವ ಘಟನೆಯು ಕೇವಲ ಒಂದು ಶಾಲೆಯ ಸಮಸ್ಯೆಯಲ್ಲ; ಇದು ಸರ್ಕಾರಿ ಯೋಜನೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಹಣದ ದುರ್ಬಳಕೆಯ ದೊಡ್ಡ ಚಿತ್ರಣವಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಶಾಲಾ ಮಕ್ಕಳಿಗೆ ಮೂಲಭೂತ ಸೌಲಭ್ಯವಾದ ಶೌಚಾಲಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಇಂತಹ ನಕಲಿ ದಾಖಲೆಗಳ ಮೂಲಕ ಹಣವನ್ನು ದುರ್ಬಳಕೆ ಮಾಡುವುದು ಮಕ್ಕಳ ಆರೋಗ್ಯ, ಗೌಪ್ಯತೆ ಮತ್ತು ಶಿಕ್ಷಣದ ಹಕ್ಕನ್ನೇ ಕಸಿದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಸುರಕ್ಷಿತ ಶೌಚಾಲಯಗಳ ಕೊರತೆಯಾಗುತ್ತಿರುವುದೂ ಕೂಡ ಅವರ ಗೈರು ಹಾಜರಾತಿಗೆ ಕಾರಣವಾಗುತ್ತಿದೆ ಎಂಬುದು ಈಗಾಗಲೇ ಸಾಬೀತಾಗಿದೆ.
ಇದನ್ನೂ ಓದಿದ್ದೀರಾ? ಮೆದುಳು ಜ್ವರದ ಭೀತಿ ಬೇಡ, ಜಾಗೃತಿ ಇರಲಿ: ಸೋಂಕು ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ
ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಸಂಬಂಧಪಟ್ಟವರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ, ಇಂತಹ ಯೋಜನೆಗಳ ಮೇಲ್ವಿಚಾರಣೆಯನ್ನು ಬಲಪಡಿಸಿ, ಸ್ಥಳೀಯ ಸಮುದಾಯ, ಶಾಲಾ ಆಡಳಿತ ಮಂಡಳಿ ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಬೇಕು. ಇದು ಒಂದು ಪ್ರಕರಣ ಮಾತ್ರವಲ್ಲ, ಇದರಿಂದ ಪಾಠ ಕಲಿಯದಿದ್ದಲ್ಲಿ ಇನ್ನೂ ಅನೇಕ ಶಾಲೆಗಳಲ್ಲಿ ಇದೇ ರೀತಿ ಭ್ರಷ್ಟಾಚಾರ ಮುಂದುವರೆಯಲಿದೆ.
ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಇಂತಹ ಕೃತ್ಯಗಳು ಸಮಾಜಕ್ಕೆ ಅಪಮಾನಕರ. ಸರ್ಕಾರ ಮತ್ತು ಇಲಾಖೆ ಕೂಡಲೇ ಸ್ಪಂದಿಸಿ, ಕಾಮಗಾರಿ ಪೂರ್ಣಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ಜವಾಬ್ದಾರಿಯುತ ಆಡಳಿತವನ್ನು ತೋರಿಸಬೇಕು. ಇದು ಕೇವಲ ಧಾರವಾಡದ ಸಮಸ್ಯೆಯಲ್ಲ, ಇಡೀ ರಾಜ್ಯದ ಶಿಕ್ಷಣ ವ್ಯವಸ್ಥೆಯ ಗಂಭೀರ ಸವಾಲಾಗಿ ಪರಿಣಮಿಸಿದೆ.





