ಕರ್ನಾಟಕ ವಿದ್ಯಾವರ್ಧಕ ಸಂಘವು ಇಂದು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಸರಕಾರ ಈ ಹಿಂದೆ ಕೊಡುತ್ತಿದ್ದಂತೆ ಎಲ್ಲಾ ಸೌಲಭ್ಯ ಒದಗಿಸಬೇಕು ಎಂದು ಮಾಜಿ ಮೇಯರ ದಾನಪ್ಪ ಕಬ್ಬೇರ ಸರ್ಕಾರಕ್ಕೆ ಒತ್ತಾಯಿಸಿದರು.
ನವೆಂಬರ್ 14 ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ರಾಜ್ಯೋತ್ಸವ ಎಂದರೆ ನಾಡು-ನುಡಿಗಾಗಿ ಹೋರಾಡಿದ ಪ್ರಾತಃಸ್ಮರಣೀಯರನ್ನು ಸ್ಮರಿಸುವ ಪರ್ವಕಾಲ. ಕ.ವಿ.ವ. ಸಂಘದ ಈಗಿನ ಪದಾಧಿಕಾರಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಿರುವುದು ಅಭಿನಂದನೀಯ. ಸಾರ್ವಜನಿಕರ ಸಹಭಾಗಿತ್ವದಲ್ಲಿ ನಾವೆಲ್ಲಾ ಕ.ವಿ.ವ. ಜೊತೆ ಸಹಕರಿಸಬೇಕು ಎಂದು ಹೇಳಿದರು.
ಸಾಧಕರ ಸನ್ಮಾನ ಸ್ವೀಕರಿಸಿದ ಸಂಜಯಕುಮಾರ್ ಬಿರಾದಾರ ಮಾತನಾಡಿ, ಸಾಂಸ್ಕೃತಿಕ ನಗರಿ ಧಾರವಾಡ ನನ್ನ ಸಾಮರ್ಥ್ಯ ಹಾಗೂ ವ್ಯಕ್ತಿತ್ವ ನಿರ್ಮಿಸುವಲ್ಲಿ ಪ್ರಮುಖವಾಗಿದೆ. ಧಾರವಾಡ ನನಗೆ ನಾಯಕತ್ವದ ಗುಣಗಳನ್ನು ಬೆಳೆಸಿದೆ. ಕನ್ನಡ ಮಾಧ್ಯಮದಲ್ಲೇ ಅಧ್ಯಯನ ಮಾಡಿದ ನಾನು ಇಂದು ರಾಷ್ಟ್ರಪತಿ ಭವನದ ಮೆಟ್ಟಿಲು ಏರಲು ಕಾರಣವಾದ ಕೆ.ಸಿ.ಡಿ ಹಾಗೂ ಕ.ವಿ.ವಿ.ಗೆ ನಾನು ಚಿರಕಾಲ ಋಣಿಯಾಗಿದ್ದೇನೆ. ನಾನು ಎನ್.ಎಸ್.ಎಸ್. ಸ್ವಯಂ ಸೇವಕನಾಗಿ ರಾಷ್ಟ್ರಪತಿಗಳಿಂದ ಗೌರವಿಸಲ್ಪಟ್ಟಿದ್ದು ನನ್ನ ಭಾಗ್ಯ. ದೇಶದ ಪ್ರಧಾನ ಮಂತ್ರಿಗಳಿಗೆ ಊಟ ಬಡಿಸುವ ಸುದೈವ ನನಗೆ ಸಿಕ್ಕಿದಂತೂ ಸಂಭ್ರಮದ ಕ್ಷಣವೇ ಸರಿ. ನಾನು ವಿನಮ್ರವಾಗಿ ಕ.ವಿ.ವ. ಸಂಘದ ಈ ಸನ್ಮಾನ ಸ್ವೀಕರಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ ಧಾರವಾಡ | ಸರಕಾರಿ ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ಖಾಯಂಗೊಳಿಸಿ: ಶಂಕರ ಹಲಗತ್ತಿ
ಪ್ರಾರಂಭದಲ್ಲಿ ಕಲಬುರ್ಗಿಯ ಸಂಗಮೇಶ ಪಾಟೀಲ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ತಡಸಿನಕೊಪ್ಪದ ಗಂಗವ್ವ ಆಡಿನ ಹಾಗೂ ಸಂಗಡಿಗರಿಂದ ಸೋಬಾನ ಪದಗಳು ಪ್ರಸ್ತುತವಾದವು. ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು. ಶಂಕರ ಕುಂಬಿ ವಂದಿಸಿದರು. ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ವೀರಯ್ಯ ಬಲಗೋಡಮಠ, ಶಂಕರ ಘಟ್ನಟ್ಟಿ, ಪ್ರೊ. ಬಿ.ಎಚ್. ಕೋಟಿಗೌಡ್ರ, ಕಿರಣ ಸಿದ್ಧಪೂರ ಸೇರಿದಂತೆ ಮುಂತಾದವರಿದ್ದರು.





