ಸಮಾಜದಲ್ಲಿ ಆಡಳಿತದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ ವ್ಯವಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪೊಲೀಸ ಅಧಿಕಾರಿ, ಸಿಬ್ಬಂದಿಗಳ ತ್ಯಾಗ, ಬಲಿದಾನವನ್ನು ಸ್ಮರಿಸುವುದು ಮತ್ತು ಹುತಾತ್ಮರಾದ ಪೊಲೀಸ ಸಿಬ್ಬಂದಿಗಳ ಕುಟುಂಬಗಳಿಗೆ ಬೆಂಬಲ, ಸಹಕಾರ ನೀಡುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.
ಧಾರವಾಡ ಜಿಲ್ಲಾ ಪೊಲೀಸ ಇಲಾಖೆಯಿಂದ ಪೊಲೀಸ್ ಹೆಡ್ ಕ್ವಾಟರ್ಸದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ನಮ್ಮೆಲ್ಲರ ರಕ್ಷಣೆ ಹಾಗೂ ನಾಗರಿಕ ಹಕ್ಕುಗಳನ್ನು ಕಾಪಾಡಲು ತಮ್ಮನ್ನು ಕರ್ತವ್ಯದ ಮೂಲಕ ಅರ್ಪಿಸಿಕೊಂಡಿರುವ ಆರಕ್ಷಕರನ್ನು ಯಾವಾಗಲೂ ನಾವು ಗೌರವ, ಹೆಮ್ಮೆಯಿಂದ ಕಾಣಬೇಕು. ಸಮಾಜದ ಸಂರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ, ಅವರ ಕುಟುಂಬಗಳಿಗೆ ಪ್ರತಿಯೊಬ್ಬರು ಬೆಂಬಲ ನೀಡಿ, ಗೌರವಿಸಬೇಕು. ಪೊಲೀಸರ ತ್ಯಾಗ, ಬಲಿದಾನಗಳನ್ನು ಸ್ಮರಿಸುವುದು ನಮ್ಮ ಜವಾಬ್ದಾರಿ ಎಂದರು.
ಪೊಲೀಸ್ ವ್ಯವಸ್ಯೆ ಸುಧಾರಣೆಗೆ, ಮೂಲಸೌಕರ್ಯ, ಸೌಲಭ್ಯಗಳ ಪೂರೈಸಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅನೇಕ ಸಮಿತಿಗಳು ಈ ಕುರಿತು ವರದಿ ಸಲ್ಲಿಸಿವೆ. ಸರಕಾರ ಸದಾಕಾಲ ಪೊಲೀಸ್ ಇಲಾಖೆಯೊಂದಿಗೆ ಇರುತ್ತದೆ. ಪೊಲೀಸ ಕುಟುಂಬದವರ ಸಹಕಾರ, ಬೆಂಬಲ, ಪ್ರೇರಣೆ, ಪ್ರೋತ್ಸಾಹಗಳು ಪೊಲೀಸರು ನೆಮ್ಮದಿಯಿಂದ, ತೃಪ್ತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಪೊಲೀಸ ಇಲಾಖೆಗೆ ಸರಕಾರದಿಂದ ಎಲ್ಲ ಹಂತದ ತರಬೇತಿ, ಆಧುನಿಕ ಸೌಲಭ್ಯ ದೊರಕಿಸಲಾಗುತ್ತಿದೆ. ಪೊಲೀಸ ವ್ಯವಸ್ಥೆಯ ಆಧುನೀಕರಣವೂ ಅಗತ್ಯವಿದೆ ಎಂದು ಹೇಳಿದರು.
ಧಾರವಾಡ ಐಐಟಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಸಮಾಜಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ಎಲ್ಲ ನಾಗರಿಕರ ಜವಾಬ್ದಾರಿ ಆಗಿದೆ. ಸಮಾಜದ ರಕ್ಷಣೆ, ಶಾಂತಿ ಕಾಪಾಡುವುದು ಬರೀ ಪೊಲೀಸ್ ಅಧಿಕಾರಿಗಳ, ಸಿಬ್ಬಂದಿಗಳ ಹೊಣೆಗಾರಿಕೆ ಆಗಬಾರದು. ಪೊಲೀಸ ಅಧಿಕಾರಿಗಳ ತ್ಯಾಗ, ಬಲಿದಾನವನ್ನು ನಾವು ಸದಾಕಾಲ ಸ್ಮರಿಸಬೇಕು. ಅವರ ನಿರಂತರ ಕಾವಲಿನಲ್ಲಿ ನಾವು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಗುಂಜನ್ ಆರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಆರ್ ವಿಭಾಗದ ಎಆರ್ ಎಸ್ಐ ಎ.ಎಪ್.ಜಿಲ್ಲೇನವರ ಹಾಗೂ ವೈ.ಎಂ.ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.




